ಹಿರೇಕೆರೂರು: ಮಾನವ ಜನ್ಮ ದೇವರು ಕರುಣಿಸಿದ ದೊಡ್ಡ ವರ. ನಮ್ಮ ಜೀವಿತಾವಧಿಯಲ್ಲಿ ಧರ್ಮ ಪಾಲನೆ ಮಾಡಬೇಕು. ಧರ್ಮದಲ್ಲಿ ಶ್ರದ್ಧೆ ನಿಷ್ಠೆ ಇರಲಿ ಎಂದು ಕಡೇನಂದಿಹಳ್ಳಿ ಕ್ಷೇತ್ರದ ಶ್ರೀಮದ್ ರಂಭಾಪುರಿ ಶಾಖಾ ಮಠ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ನುಡಿದರು.ತಾಲೂಕಿನ ಚನ್ನಳ್ಳಿ ಸಮೀಪದ ಕಡೇನಂದಿಹಳ್ಳಿಯಲ್ಲಿ 5 ದಿನಗಳ ಕಾಲ ನಡೆಸಿದ ಮೌನ ಶಿವಾನುಷ್ಠಾನದ ಮಂಗಲ ಹಾಗೂ ಶ್ರೀ ಗುರು ಪಟ್ಟಾಧಿಕಾರ ಕಾರ್ಯಕ್ರಮದ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.ಅಧಿಕ ಜೇಷ್ಠ ಮಾಸದ ಪ್ರಯುಕ್ತ ಲೋಕ ಕಲ್ಯಾಣಕ್ಕಾಗಿ ಮನೋವಾಂಛಿತ ಸಿದ್ಧಿಗಾಗಿ ಭಕ್ತರ ಕಲ್ಯಾಣಕ್ಕಾಗಿ ನಡೆಸಿದ ಮೌನ ಶಿವಾನುಷ್ಠಾನದಿಂದ ಆತ್ಮ ಬಲ ಹೆಚ್ಚಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಇನ್ನೂ ಹೆಚ್ಚು ಪರಿಶ್ರಮಿಸುವ ಹುಮ್ಮಸ್ಸು ಮೂಡಿದೆ. ಮುಂದಿನ ದಿನಗಳಲ್ಲಿ ವೀರಶೈವ ಧರ್ಮ ಪ್ರಚಾರದ ಜತೆಗೆ ಭಕ್ತರ ಮನೆ ಮನೆಗೆ ತೆರಳಿ ಧಾರ್ಮಿಕ ಸಂಸ್ಕಾರ ನೀಡುವ ಉದ್ದೇಶವಿದೆ. ಭಕ್ತರ ಸಹಕಾರ ನಿರಂತರವಾಗಿರಲಿ ಎಂದರು.ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಇಂದು ಯುವಕರನೇಕರು ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದನ್ನು ಕಾಣುತ್ತೇವೆ. ಅವರಿಗೆಲ್ಲ ಇಂತಹ ತಪೋತಾಣಗಳಿಗೆ ಕರೆತಂದು ಸಂಸ್ಕಾರ ಮತ್ತು ಮಾನಸಿಕ ಬಲ ತುಂಬುವ ಕೆಲಸವಾಗಬೇಕಾಗಿದೆ. ಕಾಡಾಗಿದ್ದ ಈ ಪ್ರದೇಶವನ್ನು ಪುಣ್ಯ ಕ್ಷೇತ್ರವನ್ನಾಗಿ ಪರಿವರ್ತಿಸಿದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳ ಪ್ರಯತ್ನ ಸಣ್ಣದಲ್ಲ. ಈ ಕ್ಷೇತ್ರವನ್ನು ಹೆಚ್ಚು ಹೆಚ್ಚಾಗಿ ಬೆಳೆಸಲು ನಾವೆಲ್ಲರೂ ಪ್ರಯತ್ನಿಸೋಣ. ಶ್ರೀಗಳವರು ಕೈಗೊಳ್ಳುವ ಎಲ್ಲ ಧರ್ಮ ಕಾರ್ಯಗಳಲ್ಲಿ ನಾವು ಜೊತೆಯಾಗಿ ನಿಲ್ಲುತ್ತೇವೆ ಎಂದರು. ಇದೇ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಇವರಿಗೆ ಗೌರವಿಸಿ ಆಶೀರ್ವದಿಸಲಾಯಿತು.ದುಗ್ಲಿ ಹಾಗೂ ಕಡೇನಂದಿಹಳ್ಳಿ ಮಠದ ಸುಮಾರು ಸಾವಿರಕ್ಕೂ ಹೆಚ್ಚು ಭಕ್ತರು ಸಮಾರಂಭದಲ್ಲಿ ಭಾಗವಹಿಸಿದ್ದರು. ಎಲ್ಲ ಭಕ್ತರಿಗೂ ಪೂಜ್ಯರು ಶಿವಾನುಷ್ಠಾನದ ಮಂಗಲಾಕ್ಷತೆ ನೀಡುವುದರ ಮೂಲಕ ಆಶೀರ್ವದಿಸಿದರು. ಮುಖಂಡರಾದ ಕೆ.ಎಸ್. ಗುರುಮೂರ್ತಿ, ಪಟ್ಟದಯ್ಯನವರು ಶಿಕಾರಿಪುರ, ಬಸವರಾಜಪ್ಪ ಸಾಹುಕಾರರು, ಯೋಗೇಶಪ್ಪ ಹುಲ್ಲಿನಕೊಪ್ಪ, ದೇವೇಂದ್ರಪ್ಪ ಗುತ್ತಿಗೆದಾರರು, ಗುರುಶಾಂತಯ್ಯ ಶಿಕಾರಿಪುರ, ಮಲ್ಲಿಕಾರ್ಜುನ ಬಿಸ್ಲಳ್ಳಿ, ಶಿವರಾಜ ಜಿ.ಪಿ., , ಕುಬೇರಪ್ಪ ಕೊರಟಿಕೇರಿ, ವಸಂತಗೌಡರು ಶಿಕಾರಿಪುರ, ಸುಧೀರ ಮಾರವಳ್ಳಿ, ಬಸವರಾಜಪ್ಪ ಅಧ್ಯಕ್ಷರು ದೇವಸ್ಥಾನ ಕಮೀಟಿ ಕಡೇನಂದಿಹಳ್ಳಿ, ಶ್ರೀ ಗುರು ರೇವಣಸಿದ್ಧೇಶ್ವರ ಜನಕಲ್ಯಾಣ ಟ್ರಸ್ಟಿನ ಸದಸ್ಯರು ಹಾಗೂ ದುಗ್ಲಿ ಹಾಗೂ ಕಡೇನಂದಿಹಳ್ಳಿ ಸದ್ಭಕ್ತರು ಉಪಸ್ಥಿತರಿದ್ದರು. ಸಮಾರಂಭಕ್ಕೂ ಮುನ್ನ ಶ್ರೀಗಳು ನೆಲಮಾಳಿಗೆಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿ ಮೌನಾಷ್ಠಾನವನ್ನು ಮಂಗಲಗೊಳಿಸಿದರು. ಕ್ಷೇತ್ರದ ಎಲ್ಲ ದೈವಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಜೆ ಶ್ರೀ ಜಗದ್ಗುರು ರೇವಣಸಿದ್ಧೇಶ್ವರರ ಹರಕೆಯ ರಥೋತ್ಸವ ನೆರೆದ ಭಕ್ತರ ಸಮ್ಮುಖದಲ್ಲಿ ಜರುಗಿತು.