ಕನ್ನಡಪ್ರಭ ವಾರ್ತೆ ಮಳವಳ್ಳಿ
ಹಲವು ಜೀವಗಳನ್ನು ಉಳಿಸುವ ರಕ್ತದಾನ ಶಿಬಿರದಂಥ ಸಮಾಜಮುಖಿ ಕಾರ್ಯದಲ್ಲಿ ಜಾತಿ, ಧರ್ಮ ಮರೆತು ಎಲ್ಲರೂ ಒಂದಾಗಬೇಕು ಎಂದು ಕ್ರೈಸ್ತ ಸಮುದಾಯದ ಮುಖಂಡ ಕಾಂತರಾಜು ಕರೆ ನೀಡಿದರು.ಪಟ್ಟಣದ ಕೊಳ್ಳೇಗಾಲ ರಸ್ತೆಯ ಹೆಬ್ರೋನ್ ಚರ್ಚ್ ನಲ್ಲಿ ರಕ್ತದಾನ ಶಿಬಿರಕ್ಕೆ ಬೆಂಬಲ ಸೂಚಿಸುವ ಸಂಬಂಧ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿ, ಮಳವಳ್ಳಿ ಅನೇಕ ಸಮಾಜಮುಖಿ ಕಾರ್ಯಗಳಿಗೆ ಪ್ರಸಿದ್ಧಿ ಪಡೆದಿದೆ. ಕಳೆದ ಹಲವು ವರ್ಷಗಳಿಂದ ಯುವಕ ಮಿತ್ರರು ನಿರಂತರವಾಗಿ ರಕ್ತದಾನ ಶಿಬಿರವನ್ನು ಆಯೋಜಿಸುತ್ತಾ ಬಂದಿದ್ದಾರೆ ಎಂದು ಶ್ಲಾಘಿಸಿದರು.
ಈ ಬಾರಿ ನಡೆಯುವ ಶಿಬಿರಕ್ಕೆ ನಾವು ಸಂಪೂರ್ಣವಾಗಿ ಬೆಂಬಲ ನೀಡುತ್ತೇವೆ. ಜಾತಿ, ಧರ್ಮ ಮರೆತು ಎಲ್ಲರೂ ಒಂದಾಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕು ಎಂದು ಕರೆ ನೀಡಿದರು.ಮುಖಂಡ ಸುಧಾಕರ್ ಮ್ಯಾಥಸ್ ಮಾತನಾಡಿ, ಪಟ್ಟಣದ ರೋಟರಿ ಶಾಲಾ ಆವರಣಲ್ಲಿ ಆಗಸ್ಟ್ 15ರಂದು ಆಯೋಜಿಸಿರುವ ಶಿಬಿರವನ್ನು ಎಲ್ಲರೂ ಬೆಂಬಲಿಸೋಣ. ಮಳವಳ್ಳಿ ರಕ್ತದಾನ ಶಿಬಿರಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಅನೇಕ ಅನೇಕ ಸಂಘ-ಸಂಸ್ಥೆಗಳು ಒಗ್ಗೂಡಿಸಿ ಶಿಬಿರ ಆಯೋಜಿಸಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿವೆ. ಹಿಂದಿನಿಂದಲೂ ಅದನ್ನು ಬೆಂಬಲಿಸಿಕೊಂಡು ಬಂದಿರುವ ನಾವುಗಳು ಈ ಬಾರಿಯೂ ಅವರ ಕೈಜೋಡಿಸುತ್ತೇವೆ ಎಂದರು.
ಡಾ.ರಾಜ್ ಕುಮಾರ್ ಕಲಾ ಸಂಘದ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ಮಳವಳ್ಳಿ ಇತಿಹಾಸದಲ್ಲಿ ರಕ್ತದಾನ ಶಿಬಿರ ದಾಖಲೆಯಾಗಿ ಉಳಿದಿದೆ. ಈ ಬಾರಿ ವಿಶೇಷವಾಗಿ 2026 ಯುನಿಟ್ ಟಾರ್ಗೆಟ್ ಯೊಂದಿಗೆ ಸತತ 26ಗಂಟೆಗಳ ಕಾಲ ಆಯೋಜಿಸಿರುವ ರಕ್ತದಾನ ಶಿಬಿರದ ಯಶಸ್ವಿಗೆ ಎಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು.
ಈ ವೇಳೆ ಮುಖಂಡರಾದ ಕುಮಾರ, ಸುಭಾಷಿಣಿ, ಡೇವಿಡ್, ಕಾಂತರಾಜು ಹಾಗೂ ಟೀಮ್ ಮಳವಳ್ಳಿ ಹಾಗೂ ಮಳವಳ್ಳಿ ಯುವಕ ಮಿತ್ರ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.