ಸಾವಿರ ಉಚಿತ ನಿವೇಶನ ಶೀಘ್ರ ವಿತರಣೆ: ಗಣೇಶ್‌ ಪ್ರಸಾದ್‌

| Published : Jun 12 2025, 12:56 AM IST / Updated: Jun 12 2025, 12:57 AM IST

ಸಾರಾಂಶ

ಗುಂಡ್ಲುಪೇಟೆಯಲ್ಲಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪುರಸಭೆಯಲ್ಲಿ ಮುಖ್ಯಮಂತ್ರಿಗಳ ನಗರ ನಿವೇಶನ ಯೋಜನೆಯಲ್ಲಿ ಹಂಚಿದ್ದ ನಿವೇಶನಗಳನ್ನು ರಾಜೀವ್‌ ಗಾಂಧಿ ವಸತಿ ನಿಗಮ ರದ್ದು ಮಾಡಿದ ನಿವೇಶನಗಳ ಜೊತೆಗೆ ಹೆಚ್ಚುವರಿಯಾಗಿ 350ಕ್ಕೂ ನಿವೇಶನಗಳು ಸೇರಿ ಸಾವಿರ ಉಚಿತ ನಿವೇಶನಗಳನ್ನು ಅರ್ಹರಿಗೆ ಶೀಘ್ರದಲ್ಲಿಯೇ ಹಂಚಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಬಿಜೆಪಿ ರಾಜ್ಯ ಸರ್ಕಾರದ ಅವಧಿಯಲ್ಲಿ ಅಂದಿನ ಪುರಸಭೆ ಆಡಳಿತ ಮಂಡಳಿ ನಿಯಮಾನುಸಾರ ನಿವೇಶನ ಹಂಚದೆ, ನಿವೇಶನ ಹಾಗೂ ಮನೆ ಇರೋರಿಗೆ ನಿವೇಶನ ಹಂಚಿಕೆ ಮಾಡಿದ್ದರು ಎಂದರು. ಪುರಸಭೆ ವ್ಯಾಪ್ತಿಯಲ್ಲಿ ಜನರಿಗೆ ಜಾತಿವಾರು ಹಾಗೂ ಅಂಗವಿಕಲರು, ವಿಧವೆಯರು, ಯೋಧರಿಗೆ ಹಂಚಿಲ್ಲ, ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೆಲ ಸದಸ್ಯರು ದೂರು ನೀಡಿದ್ದರು. ತನಿಖೆಯ ಬಳಿಕ ೬೫೧ ನಿವೇಶನಗಳಲ್ಲಿ 450 ನಿವೇಶನ ರದ್ದಾಗಿವೆ ಎಂದರು.

ಮುಂದಿನ ದಿನಗಳಲ್ಲಿ ರದ್ದಾದ ನಿವೇಶನಗಳ ಜೊತೆಗೆ ಹೆಚ್ಚುವರಿಯಾಗಿ ಚಿಕ್ಕತುಪ್ಪೂರು ಬಳಿ ಗುರುತಿಸಲಾದ ಜಾಗದಲ್ಲಿ ಅರ್ಹ ಫಲಾನುಭವಿಗಳಿಗೆ ಸಾವಿರ ನಿವೇಶನಗಳನ್ನು ಮಧ್ಯವರ್ತಿಗಳ ಅವಕಾಶ ನೀಡಿದೆ ಹಂಚಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ 651 ಉಚಿತ ನಿವೇಶನಗಳನ್ನು ಹಂಚಿಕೆ ಮಾಡಿದ್ದ ಬಗ್ಗೆ ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಪುರಸಭೆ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆಸಿದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದರು ಎಂದರು.

ದೊಡ್ಡ ಭ್ರಷ್ಟಾಚಾರ:

ಪುರಸಭೆ ನಿವೇಶನ ಹಂಚಿಕೆಯಲ್ಲಿ ದೊಡ್ಡ ಭ್ರಷ್ಟಾಚಾರವೇ ನಡೆದಿದೆ ಎಂಬ ಕೂಗಿತ್ತು. ನಿಯಮ ಉಲ್ಲಂಘಿಸಿ ನಿವೇಶನ ಹಂಚಿಕೆ ಮಾಡಿದ್ದು ತನಿಖೆಯಿಂದ ಸಾಬೀತಾಗಿದ್ದು, ಬಿಜೆಪಿಗರ ಬಣ್ಣ ಬಯಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌, ಕೆಪಿಸಿಸಿ ಮಾಜಿ ಸದಸ್ಯ ಜಿ.ಕೆ.ನಾಜೀಮುದ್ದೀನ್‌, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್‌, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ, ಪುರಸಭೆ ಅಧ್ಯಕ್ಷ ಮಧು, ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ ಸೇರಿದಂತೆ ಪುರಸಭೆ ಸದಸ್ಯರಿದ್ದರು.

2 ವರ್ಷದಲ್ಲಿ 120 ಕೋಟಿಗೂ ಹೆಚ್ಚು ಅನುದಾನ

ನಾನು ಶಾಸಕನಾದ ಬಳಿಕ ಕ್ಷೇತ್ರದಲ್ಲಿ ಸುಮಾರು 120 ಕೋಟಿ ಅನುದಾನ ತಂದಿದ್ದೇನೆ. ಇನ್ನೂ ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿದ್ದೇನೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು. ಪತ್ರಕರ್ತರೊಂದಿಗೆ ಮಾತನಾಡಿ, ಹಿಂದಿನ ಶಾಸಕರು ತಂದ ಅನುದಾನದ ಕಾಮಗಾರಿಗೆ ಮರು ಗುದ್ದಲಿ ಪೂಜೆ ಮಾಡಲಿಲ್ಲ. ಕಾಮಗಾರಿ ಅಥವಾ ಯೋಜನೆಗಳ ಬದಲಿಸಲಿಲ್ಲ. ನಾನು ನನ್ನ ಸರ್ಕಾರದಲ್ಲಿ 120 ಕೋಟಿಗೂ ಹೆಚ್ಚು ಅನುದಾನ ತಂದಿದ್ದೇನೆ ಕೆಲಸ ಪ್ರಗತಿಯಲ್ಲಿವೆ ಎಂದರು. ರಸ್ತೆ, ಶಾಲಾ ಕಟ್ಟಡ, ದುರಸ್ತಿ, ವಸತಿ ಶಾಲೆಗಳು, ಹತ್ತಿ ಮಾರುಕಟ್ಟೆ, ಪವರ್‌ ಸ್ಟೇಷನ್‌ಗಳು, ಪಶು ಆಸ್ಪತ್ರೆಗಳು, ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳು ಸೇರಿದಂತೆ ಇನ್ನಿತರ ಕೆಲಸಗಳು ಪ್ರಗತಿಯಲ್ಲಿವೆ ಕೆಲವು ಮುಗಿದಿವೆ ಎಂದರು. ಪಟ್ಟಣದಲ್ಲಿ ಸಂಚಾರ ಕಿರಿ ಕಿರಿ ತಪ್ಪಿಸಲು ಈಗಾಗಲೇ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಹೆದ್ದಾರಿ ಎರಡು ಬದಿ ರೇಲಿಂಗ್ಸ್‌ ಹಾಕಲು ಚಿಂತನೆ ನಡೆಸಲಾಗಿದ್ದು, ಹಳೇ ಐಬಿ ನವೀಕರಣ,ಪುರಸಭೆಗೆ ಹೊಸ ಕಚೇರಿಗೆ ಅನುದಾನ ಬರುವ ನಿರೀಕ್ಷೆ ಇದೆ ಎಂದರು.

ರೈತರ ಕೃಷಿ ಚಟುವಟಿಕೆಗೆ ಅನುಕೂಲ ಆಗಲಿ ಎಂದು ನೂರತ್ತು ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಮಂಜೂರಾತಿ ದೊರೆಕಿದೆ ಆದರೆ ಬಿಜೆಪಿಗರು ತಾವೇ ಮಾಡಿಸಿದಂತೆ ಬಿಂಬಿಸುತ್ತಿದ್ದಾರೆ ನಿಜ ಹೇಳಬೇಕು ಅಂದ್ರೆ ಬಿಜೆಪಿಗರು ಡಿಪಿಆರ್‌ ಮಾತ್ರ ಮಾಡಿಸಿದ್ದಾರೆ. ಈ ಯೋಜನೆ ಜಾರಿಗೆ ತರಬೇಕು ಎಂದು ಅಧಿಕಾರಿಗಳು ಹಾಗು ಸಚಿವರ ಬೆನ್ನು ಬಿದ್ದ ಫಲವಾಗಿ ಯೋಜನೆ ತಂದಿರುವೆ ಎಂದರು.

ಆಕ್ಸಿಜನ್‌ ದುರಂತದಲ್ಲಿ ಬಿಜೆಪಿಗರು ತುಟಿ ಬಿಚ್ಚಲಿಲ್ಲವೇಕೇ!

ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಲ್ಲಿ 11 ಜನ ಮೃತರಾಗಿದ್ದಕ್ಕೆ ಸಿಎಂ, ಡಿಸಿಎಂ, ಗೃಹ ಸಚಿವರ ರಾಜೀನಾಮೆ ಕೇಳುವ ಬಿಜೆಪಿ ನಾಯಕರೇ ಜಿಲ್ಲೆಯಲ್ಲಿ ಆಕ್ಸಿಜನ್‌ ದುರಂತವಾದಾಗ ಯಾರ ರಾಜೀನಾಮೆ ಕೇಳಿದ್ದೀರಾ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ವಾಗ್ದಾಳಿ ನಡೆಸಿದರು. ಅಭಿಮಾನಿಗಳ ಅತಿರೇಕದಿಂದಾಗಿ ಕಾಲ್ತುಳಿತ ಘಟನೆ ನಡೆಯಬಾರದಿತ್ತು. ಆದರೆ ಬಿಜೆಪಿಗರು ಸಿಎಂ, ಡಿಸಿಎಂ ರಾಜೀನಾಮೆ ಕೇಳುತ್ತಿದ್ದಾರೆ. ಆಕ್ಸಿಜನ್‌ ದುರಂತದಲ್ಲಿ ಆಗಿನ ಸಿಎಂ ತುಟಿ ಬಿಚ್ಚಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೆಲ ದಿನ ಕಾಣಿಸಿಕೊಳ್ಳಲೇ ಇಲ್ಲ ಎಂದರು.

ಆಕ್ಸಿಜನ್‌ ದುರಂತ ಸಮಯದಲ್ಲಿ ಕಾಂಗ್ರೆಸ್‌ ಪಕ್ಷ ತಮ್ಮ ಕೈಲಾದ ಸಹಾಯ ಮಾಡಿದೆ. ಆಕ್ಸಿಜನ್‌ ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಕ್ಕೆ ಬಿಜೆಪಿಯವರು ಉದ್ಯೋಗ ನೀಡಲಿಲ್ಲ ಅವರು ಮಾಡಿದ ತಪ್ಪಿಗೆ ನಮ್ಮ ಸರ್ಕಾರ ಔಟ್‌ ಸೋರ್ಸಸ್‌ನಲ್ಲಿ ಕೆಲಸಕ್ಕೆ ತೆಗೆದುಕೊಂಡಿದೆ ಎಂದರು.

ಉತ್ತರ ವೇಸ್ಟ್‌:

ಗುಂಡ್ಲುಪೇಟೆ ಕ್ಷೇತ್ರದ ಬಿಜೆಪಿಗರ ಟೀಕೆ, ಟಿಪ್ಪಣಿಗಳಿಗೆ ಉತ್ತರ ಕೊಡೋದೇ ವೇಸ್ಟ್‌, ಯಾಕೆಂದರೆ ಸುಖಾ ಸುಮ್ಮನೇ ಸುಳ್ಳು ಹೇಳುವ ಕಾರಣ ಉತ್ತರ ಕೊಡುವ ಕೆಲಸ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.