ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ರಾತ್ರೋರಾತ್ರಿ ರಸ್ತೆಬದಿ ಚರಂಡಿ ಹಾಗೂ ನೀರಿಗೆ ಕಸ ಹಾಕುವವರನ್ನು ಗುರ್ತಿಸಿ ದಾಖಲೆ ನೀಡಿದರೆ ಒಂದು ಸಾವಿರ ರುಪಾಯಿ ಬಹುಮಾನ ನೀಡುವುದಾಗಿ ಶಾಸಕ ಸಿ.ಎನ್. ಬಾಲಕೃಷ್ಣ ಘೋಷಣೆ ಮಾಡಿದ್ದಾರೆ.ಪಟ್ಟಣದ ಅಮಾನಿಕೆರೆ ಬಳಿ ಅಗ್ನಿಪಥ ಯುವಕರ ತಂಡ, ಮಕ್ಕಳ ಸಾಹಿತ್ಯ ಪರಿಷತ್, ಭೂಮಿ ಉಳಿಸಿ ಆಂದೋಲನ, ಪುರಸಭೆ ಇನ್ನಿತರ ಸಂಘಟನೆಗಳ ವತಿಯಿಂದ ನಡೆಯುತ್ತಿರುವ ನಮ್ಮ ಕೆರೆ ನಮ್ಮ ಸ್ವಚ್ಛತೆ, ನಮ್ಮ ಕೆರೆ ಉಳಿಸೋಣ ಬನ್ನಿ ಕಾರ್ಯಕ್ರಮದಲ್ಲಿ ಸ್ವಚ್ಛತಾ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ ಅವರು, ರೋಗರುಜಿನಗಳು ಸ್ವಚ್ಛತೆಯ ಕೊರತೆಯಿಂದ ಬರುತ್ತವೆ. ಈ ಬಗ್ಗೆ ಸಾಮಾಜಿಕ ಕಳಕಳಿ ಬೇಕಾಗಿದೆ ಎಂದರು.ಪುರಸಭೆಯ ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಉತ್ತಮ ಸೇವಾ ಕಾರ್ಯ ಮಾಡುತ್ತಿದ್ದಾರೆ. ಪುರಸಭೆ ಸಂಗಡ ಸಾರ್ವಜನಿಕರೂ ಸಹಕಾರ ನೀಡಬೇಕು. ಶ್ರವಣಬೆಳಗೊಳ ಐತಿಹಾಸಿಕ ಪ್ರದೇಶವಾಗಿದ್ದು, ಬೆಳಗೊಳಕ್ಕೆ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ತ್ಯಾಜ್ಯ ವಸ್ತುಗಳನ್ನು ಮೂಟೆ ಕಟ್ಟಿ ಎಸೆಯಲಾಗುತ್ತಿದೆ. ನೀರಿನ ಕೆನಾಲ್, ಏರಿ ಮೇಲೆ, ದೇವಾಲಯಗಳ ಬಳಿ, ಪ್ರಮುಖ ರಸ್ತೆಗಳಲ್ಲಿ, ವಿದ್ಯುತ್ ಕಂಬಗಳ ಬಳಿ ಕಸವನ್ನು ಎಸೆಯಲಾಗುತ್ತಿದೆ. ಎಷ್ಟೇ ಜಾಗೃತಿ ಮೂಡಿಸಿದರೂ ಈ ಕಾರ್ಯ ನಿರಂತರವಾಗಿ ನಡೆಯುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.ತ್ಯಾಜ್ಯ ಸಂಗ್ರಹಕ್ಕಾಗಿ ಪುರಸಭೆಯು ವಾಹನಗಳ ಏರ್ಪಾಡು ಮಾಡಿದ್ದರೂ ಕೆಲವರು ರಸ್ತೆಗೆ ಕಸ ಎಸೆಯುವುದನ್ನು ಬಿಟ್ಟಿಲ್ಲ. ಹಾಗಾಗಿ ಕಸ ಎಸೆಯುವವರ ಬಗ್ಗೆ ಮಾಹಿತಿ ನೀಡಿದರೆ ಪುರಸಭೆ ವತಿಯಿಂದ ೧೦೦೦ ರೂ. ಬಹುಮಾನ ನೀಡಲಾಗುವುದು ಎಂದು ಹೇಳಿದರು. ಚನ್ನರಾಯಪಟ್ಟಣಕ್ಕೆ ಗುಣಮಟ್ಟದ ಪರಿಸರ ಪ್ರದೇಶ ಎಂದು ಪ್ರಶಸ್ತಿ ಲಭಿಸಿದ್ದು, ಆ ಗೌರವವನ್ನು ಹೆಚ್ಚಿಸಿಕೊಳ್ಳಬೇಕು. ಪುರಸಭೆ ವತಿಯಿಂದ ನಡೆಯುತ್ತಿರುವ ಘನ ತ್ಯಾಜ್ಯ ನಿರ್ವಹಣಾ ಘಟಕ ನಲ್ಲೂರಿನಲ್ಲಿದ್ದು, ಈಗಾಗಲೇ ೩೫೦ ಟನ್ ಗೊಬ್ಬರ ಮಾರಾಟವಾಗಿದೆ. ೩೦೦ ಟನ್ ಗೊಬ್ಬರವನ್ನು ಮಾರಾಟ ಮಾಡಲು ಸಿದ್ಧಪಡಿಸಲಾಗಿದೆ. ಚನ್ನರಾಯಪಟ್ಟಣದ ಅಮಾನಿ ಕೆರೆಯ ಸ್ವಚ್ಛತಾ ನಿರ್ವಹಣಾ ಕಾರ್ಯ ನಡೆಸಲು ೧ ಕೋಟಿ ೪೦ ಲಕ್ಷ ರು. ಹಣವನ್ನು ಅಂದಾಜು ಮಾಡಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಒಂದು ವಾರಗಳ ಕಾಲ ನಿರಂತರವಾಗಿ ಸ್ವಯಂ ಸೇವಕರು ಕೆರೆಯ ಆವರಣ ಸ್ವಚ್ಛಗೊಳಿಸುತ್ತಿದ್ದು, ಪುರಸಭೆ ಸಹಕಾರ ನೀಡಲಿದೆ ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಮೋಹನ್ ಕುಮಾರ್, ಉಪಾಧ್ಯಕ್ಷೆ ರಾಣಿಕೃಷ್ಣ, ಸದಸ್ಯರಾದ ಗಣೇಶ್, ಪುರಿ ಮಂಜಣ್ಣ, ಮುಖ್ಯ ಅಧಿಕಾರಿ ಯತೀಶ್ಕುಮಾರ್, ಪರಿಸರ ಎಂಜಿನಿಯರ್ ಕಾವ್ಯ, ಆರೋಗ್ಯ ಅಧಿಕಾರಿಗಳಾದ ಉಮಾ, ಮಂಜುನಾಥ್, ಮಕ್ಕಳ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಅಗ್ನಿಪಥ ಸೈನಿಕ ತರಬೇತಿ ಪಡೆಯುತ್ತಿರುವ ಯುವ ಪಡೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಶಾಸಕರು ಹಾಗೂ ಗಣ್ಯರು ಅರಳಿ ಗಿಡವನ್ನು ಕೆರೆಯ ಬಳಿ ನೆಟ್ಟರು.