ಸಾರಾಂಶ
ಹುಬ್ಬಳ್ಳಿ:ಆನ್ಲೈನ್ ಗೇಮ್ ಗೀಳಿಗೆ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಶಿರಡಿನಗರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನಡೆದಿದೆ.
ವಿಜಯಪುರದ ರಾಕೇಶ ಶ್ರೀಶೈಲ್ ಜಂಬಲದಿನ್ನಿ (22) ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ. ಈತ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ (ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್) 6ನೇ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿದ್ದ. ಬುಧವಾರ ಸಂಜೆ ಹಾಸ್ಟೆಲ್ನ ಕೊಠಡಿಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾನೆ.ಜುಲೈ 8ರಂದು ಪರೀಕ್ಷೆ ಮುಗಿದಿದ್ದವು. ಅವನ ಕೊಠಡಿಯಲ್ಲಿದ್ದ ಮೂವರು ವಿದ್ಯಾರ್ಥಿಗಳು ಊರಿಗೆ ಹೋಗಿದ್ದರು. ಬುಧವಾರ ಎಷ್ಟು ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಕೊಠಡಿಯ ಬಾಗಿಲು ಮುರಿದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿಯಿತು ಎಂದು ಹಾಸ್ಟೆಲ್ ವಿದ್ಯಾರ್ಥಿಯೋರ್ವ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.ರಾಕೇಶನಿಗೆ ಆನ್ಲೈನ್ ಗೇಮ್ ಆಡುವ ಚಟುವಿತ್ತು. ಏವಿಯೇಟರ್ ಸೇರಿದಂತೆ ವಿವಿಧ ಆನ್ಲೈನ್ ಗೇಮಿಂಗ್ ಆ್ಯಪ್ ಹಾಕಿಕೊಂಡು ಆಡುತ್ತಿದ್ದ. ಇದರಲ್ಲಿ ಸಾಕಷ್ಟು ಹಣ ಕಳೆದುಕೊಂಡಿದ್ದ. ಜತೆಗೆ ಆನ್ಲೈನ್ ಗೇಮಿಂಗ್ ಗಾಗಿಯೇ ಸ್ನೇಹಿತರ ಬಳಿ ಸಾಕಷ್ಟು ಸಾಲ ಕೂಡ ಮಾಡಿಕೊಂಡಿದ್ದ. ಅತ್ತ ಗೇಮಿಂಗ್ ನಲ್ಲೊ ಹಣ ಕಳೆದುಕೊಂಡಿದ್ದ ಜತೆಗೆ ಸಾಲಕೊಟ್ಟ ಸ್ನೇಹಿತರು ಕೂಡ ಹಣ ಮರಳಿ ಕೊಡುವಂತೆ ಒತ್ತಾಯಿಸುತ್ತಿದ್ದರು. ಅಲ್ಲದೇ ಸ್ನೇಹಿತನೊಬ್ಬ ಈತನ ಸಾಲದ ಹಣಕ್ಕಾಗಿ ಲ್ಯಾಪ್ಟ್ಯಾಪ್ ಕೂಡ ಈತನಿಂದ ಕಸಿದುಕೊಂಡಿದ್ದ. ಹಣಕೊಟ್ಟರೂ ಲ್ಯಾಪ್ಟ್ಯಾಪ್ ಮರಳಿ ಕೊಟ್ಟಿರಲಿಲ್ಲ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾರಣರಾದವರನ್ನು ಶಿಕ್ಷೆಗೊಳಪಡಿಸುವಂತೆ ರಾಕೇಶನ ತಂದೆ ಶ್ರೀಶೈಲ್ ಜಂಬಲದಿನ್ನಿ ದೂರಿನಲ್ಲಿ ತಿಳಿಸಿದ್ದಾರೆ.ಈ ದೂರಿನನ್ವಯ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.