ಶೋಷಿತರ ರಕ್ಷಣೆಗೆ ನಿಂತಿದ್ದು ಅಂಬೇಡ್ಕರ್ ಮಾತ್ರ

| Published : Dec 22 2024, 01:33 AM IST

ಸಾರಾಂಶ

ರಾಮನಗರ: ದೇಶದಲ್ಲಿ ಜಾತಿವಾದಿಗಳ ಅಟ್ಟಹಾಸಕ್ಕೆ ಸಿಲುಕಿ, ಮನುಷ್ಯರಾಗಿ ಬದುಕುವ ಎಲ್ಲ ಹಕ್ಕುಗಳನ್ನೂ ಕಳೆದುಕೊಂಡಿದ್ದ ಶೋಷಿತ ಸಮುದಾಯಗಳ ರಕ್ಷಣೆಗೆ ನಿಂತು, ಮನುಷ್ಯರಂತೆ ಬದುಕುವ ಹಕ್ಕು ಕಲ್ಪಿಸಿಕೊಟ್ಟಿದ್ದು ಅಂಬೇಡ್ಕರ್ ಎಂಬ ಜ್ಞಾನ ಶಕ್ತಿಯೇ ಹೊರತು ಯಾವ ದೈವ ಬಲವೂ ಅಲ್ಲ ಎಂದು ಸ್ವಾಭಿಮಾನಿ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೊತ್ತೀಪುರ ಗೋವಿಂದರಾಜು ಅಭಿಪ್ರಾಯಪಟ್ಟರು.

ರಾಮನಗರ: ದೇಶದಲ್ಲಿ ಜಾತಿವಾದಿಗಳ ಅಟ್ಟಹಾಸಕ್ಕೆ ಸಿಲುಕಿ, ಮನುಷ್ಯರಾಗಿ ಬದುಕುವ ಎಲ್ಲ ಹಕ್ಕುಗಳನ್ನೂ ಕಳೆದುಕೊಂಡಿದ್ದ ಶೋಷಿತ ಸಮುದಾಯಗಳ ರಕ್ಷಣೆಗೆ ನಿಂತು, ಮನುಷ್ಯರಂತೆ ಬದುಕುವ ಹಕ್ಕು ಕಲ್ಪಿಸಿಕೊಟ್ಟಿದ್ದು ಅಂಬೇಡ್ಕರ್ ಎಂಬ ಜ್ಞಾನ ಶಕ್ತಿಯೇ ಹೊರತು ಯಾವ ದೈವ ಬಲವೂ ಅಲ್ಲ ಎಂದು ಸ್ವಾಭಿಮಾನಿ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೊತ್ತೀಪುರ ಗೋವಿಂದರಾಜು ಅಭಿಪ್ರಾಯಪಟ್ಟರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಸ್ವಾಭಿಮಾನಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ರಾಷ್ಟ್ರಪತಿಗಳಿಗೆ ಜಿಲ್ಲಾಧಿಕಾರಿ ಡಾ.ಯಶವಂತ್‌ ಗುರುಕರ್‌ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಭಾರತದಲ್ಲಿನ ಜಾತಿವಾದಿಗಳು ಸಾವಿರಾರು ವರ್ಷಗಳಿಂದಲು ಮನುವಾದವನ್ನು ಬಲವಂತವಾಗಿ ಹೇರಿ, ಜಾತಿ ತಾರತಮ್ಯವನ್ನು ಸೃಷ್ಟಿಸಿ, ಅಮಾಯಕ ದಲಿತರನ್ನು ಹಿಂಸಿಸುತ್ತ ವಿಕೃತಿ ಮೆರೆಯುತ್ತಿದ್ದಾರೆ ಎಂದು ಟೀಕಿಸಿದರು.

ಅಮಿತ್ ಶಾ ಅವರಂತಹ ಮಾನಸಿಕ ರೋಗಿಗಳಲ್ಲಿ ಸಮಾನತೆ ಭಾವನೆಯನ್ನು ಮೂಡಿಸಿ, ಇವರಲ್ಲಿನ ಮೇಲು ಕೀಳು ಎಂಬ ಹುಚ್ಚುತನ ನಿವಾರಣೆಗಾಗಿ ಅಂಬೇಡ್ಕರ್‌ ಸಂವಿಧಾನವೆಂಬ ದಿವ್ಯೌಷಧವನ್ನು ದೇಶಕ್ಕೆ ಸಮರ್ಪಿಸಿದ್ದಾರೆ. ಆದರೆ ನಮ್ಮ ದೇಶವನ್ನು ಆಳುತ್ತಿರುವ ಸರ್ಕಾರಗಳು ಈ ದಿವ್ಯೌಷಧವನ್ನು ಸಮರ್ಪಕವಾಗಿ ಬಳಸದ ಕಾರಣ ಇಂದಿಗೂ ನಮ್ಮ ದೇಶ ಅಮಿತ್ ಶಾ ರಂತಹ ಮಾನಸಿಕ ರೋಗಿಗಳ ಹುಚ್ಚಾಟದಿಂದ ನರಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಂಬೇಡ್ಕರ್ ಕೊಟ್ಟ ಸಂವಿಧಾನದಡಿಯಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಸಂಸತ್‌ನಲ್ಲಿ ನಿಂತು ಸಂವಿಧಾನ ಶಿಲ್ಪಿಯ ಸ್ಮರಣೆಯನ್ನು ತಪ್ಪು ಎಂದು ವ್ಯಾಖ್ಯಾನಿಸಿರುವ ಅಮಿತ್ ಶಾ ಅವರಂತಹ ಸಂವಿಧಾನ ವಿರೋಧಿಯನ್ನು ಸಚಿವ ಸಂಪುಟದಿಂದ ಕೈಬಿಟ್ಟು, ದೇಶದಿಂದ ಗಡಿಪಾರು ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ದಲಿತಪರ ಸಂಘಟನೆಗಳಿಂದ ದೇಶದಾದ್ಯಂತ ಕೇಂದ್ರ ಸರ್ಕಾರ ಉಗ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಗೋವಿಂದರಾಜು ಎಚ್ಚರಿಕೆ ನೀಡಿದರು.

ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಪರಮೇಶ್ ಮಾತನಾಡಿ, ಅಂಬೇಡ್ಕರ್ ಎಂಬುದು ಕೇವಲ ಹೆಸರಲ್ಲ. ಅದು ಈ ದೇಶದ ಕೋಟಿ ಕೋಟಿ ದಲಿತ ಸಮುದಾಯಗಳ ಉಸಿರು. ಈ ದೇಶಕ್ಕೆ ಈ ದೇಶದ ದಲಿತ ಸಮುದಾಯಗಳಿಗೆ ಅಂಬೇಡ್ಕರ್ ನೀಡಿರುವ ಕೊಡುಗೆಯನ್ನು ಯಾವ ದೇವರು ಇಲ್ಲಿಯವರೆಗೆ ನೀಡಲು ಸಾಧ್ಯವಾಗಿಲ್ಲ. ವಿಶ್ವವೇ ಗೌರವಿಸುವ ಅಂಬೇಡ್ಕರ್‌ರವರ ಬಗ್ಗೆ ಕೇವಲವಾಗಿ ಮಾತನಾಡಿರುವ ಅಮಿತ್ ಶಾ, ಕೋಟ್ಯಂತರ ಅಂಬೇಡ್ಕರ್ ಅನುಯಾಯಿಗಳಿಗೆ ನೋವುಂಟು ಮಾಡಿದ್ದಾರೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸ್ವಾಭಿಮಾನಿ ದಲಿತ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ಇಟ್ಟಮಡು ರಮೇಶ್, ಉಪಾಧ್ಯಕ್ಷ ಅಂಜನಾಪುರ ವಾಸು, ಬಾನಂದೂರು ಶಿವಕುಮಾರ್, ಶಂಕರ್, ಕೇತೊಹಳ್ಳಿ ಚೆಲುವರಾಜು, ಶಂಕರ್, ಸದಾನಂದ, ಸುರೇಶ್, ದಾಸಪ್ಪ, ಸುನೀಲ್, ಮಂಜುನಾಥ್, ನಂಜುಂಡ, ವೈರಮುಡಿ, ಕುಮಾರ್ ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಮುಖಂಡರು ಹಾಜರಿದ್ದರು.

21ಕೆಆರ್ ಎಂಎನ್ 1.ಜೆಪಿಜಿ

ಸ್ವಾಭಿಮಾನಿ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೊತ್ತೀಪುರ ಗೋವಿಂದರಾಜು ನೇತೃತ್ವದಲ್ಲಿ ಪದಾಧಿಕಾರಿಗಳು ರಾಮನಗರ ಜಿಲ್ಲಾಧಿಕಾರಿ ಡಾ. ಯಶವಂತ್‌ ಗುರುಕರ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.