ಇಂದು ಆಪರೇಷನ್ ಅಭ್ಯಾಸ್ ಅಣಕು ಕಾರ್ಯಾಚರಣೆ, ಆತಂಕ ಬೇಡ

| Published : May 11 2025, 11:55 PM IST

ಇಂದು ಆಪರೇಷನ್ ಅಭ್ಯಾಸ್ ಅಣಕು ಕಾರ್ಯಾಚರಣೆ, ಆತಂಕ ಬೇಡ
Share this Article
  • FB
  • TW
  • Linkdin
  • Email

ಸಾರಾಂಶ

ಕೈಗಾ ಅಣು ವಿದ್ಯುತ್ ಕೇಂದ್ರದ ಒಳಗೆ ಬೆಂಕಿ ಅವಘಡದಿಂದ ರಕ್ಷಣೆ ಮಾಡುವ ಅಣಕು ಕಾರ್ಯಾಚರಣೆಯನ್ನು ಆಂತರಿಕವಾಗಿ ಮಾಡಲಾಗುತ್ತದೆ.

ಕಾರವಾರ: ಯುದ್ಧದಂತಹ ತುರ್ತು ಸಂದರ್ಭದಲ್ಲಿ ಉಂಟಾಗುವ ಸಂಭವನೀಯ ಅಪಘಾತಗಳಿಂದ ಸಾರ್ವಜನಿಕರನ್ನು ರಕ್ಷಿಸುವ ಕುರಿತಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಕೇಂದ್ರ ಗೃಹಸಚಿವಾಲಯದ ನಿರ್ದೇಶನದಂತೆ ಆಪರೇಷನ್ ಅಭ್ಯಾಸ್ ನಾಗರಿಕ ರಕ್ಷಣಾ ಮಾದರಿ ಅಭ್ಯಾಸವನ್ನು ಸೋಮವಾರ ಕಾರವಾರದ ವಿವಿಧ ಭಾಗಗಳಲ್ಲಿ ಕೈಗೊಳ್ಳಲಾಗುತ್ತಿದೆ. ಇದು ಅಣಕು ಕಾರ್ಯಾಚರಣೆ ಮಾತ್ರವಾಗಿದ್ದು, ಸಾರ್ವಜನಿಕರು ಯಾವುದೇ ಆತಂಕ, ಗಾಬರಿಪಡುವ ಅಗತ್ಯವಿಲ್ಲ.

ಮೇ 12ರಂದು ಸಂಜೆ 4 ಗಂಟೆಗೆ ಬಿಣಗಾದ ಗ್ರಾಸಿಂ ಇಂಡಸ್ಟ್ರೀಸ್‌ನಲ್ಲಿ ಕಟ್ಟಡ ಕುಸಿದು ಬಿದ್ದಾಗ ಸ್ಥಳದಲ್ಲಿದ್ದ ಜನರನ್ನು ರಕ್ಷಣೆ ಮಾಡುವ ಬಗ್ಗೆ ಅಣಕು ಅಣಕು ಕಾರ್ಯಾಚರಣೆ, ಸಂಜೆ 4 ಗಂಟೆಗೆ ಕೈಗಾ ಅಣು ವಿದ್ಯುತ್ ಕೇಂದ್ರದ ಒಳಗೆ ಬೆಂಕಿ ಅವಘಡದಿಂದ ರಕ್ಷಣೆ ಮಾಡುವ ಅಣಕು ಕಾರ್ಯಾಚರಣೆಯನ್ನು ಆಂತರಿಕವಾಗಿ ಮಾಡಲಾಗುತ್ತದೆ. ಸಂಜೆ 5 ಗಂಟೆಗೆ ಅಮದಳ್ಳಿಯ ನೇವಲ್ ಬೇಸ್ ಬಳಿ ಸಿವಿಲಿಯನ್ ಕಾಲೋನಿಯಲ್ಲಿ ಅಗ್ನಿ ಅವಘಡದಿಂದ ರಕ್ಷಣಾ ಕಾರ್ಯಾಚರಣೆ, ಸಂಜೆ 6 ಗಂಟೆಗೆ ಕಾರವಾರದ ರವೀಂದ್ರನಾಥ ಠಾಗೋರ ಬೀಚ್‌ನಲ್ಲಿ ಸಾರ್ವಜನಿಕರನ್ನು ರಕ್ಷಣೆ ಮಾಡುವ ಅಣಕು ಕಾರ್ಯಾಚರಣೆ ಮತ್ತು ಜಿಲ್ಲೆಯಲ್ಲಿರುವ ಡ್ಯಾಂ ಪ್ರದೇಶಗಳಲ್ಲಿ ಸಾರ್ವಜನಿಕರ ರಕ್ಷಣೆ ಕುರಿತಂತೆ ಹರ್ಟುಗಾ ಗ್ರಾಮದಿಂದ ಸಾರ್ವಜನಿರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕುರಿತು ಅಣಕು ಕಾರ್ಯಚರಣೆ ನಡೆಸಲಾಗುತ್ತದೆ.

ಸಂಜೆ 7.30ರಿಂದ 8 ಗಂಟೆಯ ಅವಧಿಯಲ್ಲಿ ಬ್ಲ್ಯಾಕ್ ಔಟ್ ಕಾರ್ಯಾಚರಣೆ ನಡೆಸಲಾಗುತ್ತದೆ. ಈ ಅವಧಿಯಲ್ಲಿ ಸೈರನ್ ಮೊಳಗಿದ ತಕ್ಷಣ ಸಾರ್ವಜನಿಕರು ಮನೆಗಳ ಕಿಟಕಿ, ಬಾಗಿಲು ಮುಚ್ಚಿ, ವಿದ್ಯುತ್ ದೀಪಗಳನ್ನು ಬಂದ್ ಮಾಡಿ ಕತ್ತಲು ಮಾಡಬೇಕು. ವಾಹನಗಳನ್ನು ಚಲಾಯಿಸುತ್ತಿದ್ದರೆ ವಾಹನಗಳನ್ನು ಬಂದ್ ಮಾಡಿ ಹೆಡ್ ಲೈಟ್ ಆರಿಸಿ ಒಂದು ಪಕ್ಕದಲ್ಲಿ ಸುರಕ್ಷಿತವಾಗಿ ನಿಲ್ಲಬೇಕು. ಬ್ಲ್ಯಾಕ್ ಔಟ್ ಕಾರ್ಯಾಚರಣೆಯನ್ನು ಕಾರವಾರ ನಗರಪ್ರದೇಶದಲ್ಲಿ ಹಾಗೂ ಕೈಗಾ ಟೌನ್‌ಶಿಪ್‌ನಲ್ಲಿ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.