ಆಪರೇಷನ್‌ ಕಮಲ ಹೊಸದಲ್ಲ; ಆದರೆ, ಈ ಸಲ ಫಲಪ್ರದವಾಗಲ್ಲ: ಲಾಡ್‌

| Published : Nov 16 2024, 12:34 AM IST

ಆಪರೇಷನ್‌ ಕಮಲ ಹೊಸದಲ್ಲ; ಆದರೆ, ಈ ಸಲ ಫಲಪ್ರದವಾಗಲ್ಲ: ಲಾಡ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 16 ತಿಂಗಳಿಂದಲೇ ಬಿಜೆಪಿ ಆಪರೇಷನ್‌ ಕಮಲಕ್ಕೆ ಪ್ರಯತ್ನ ಮಾಡುತ್ತಲೇ ಇದೆ. ಈಗಲೂ ಅದೇ ಪ್ರಯತ್ನದಲ್ಲಿದೆ. ಮುಂದೆಯೂ ಮಾಡುತ್ತಲೇ ಇರುತ್ತದೆ.

ಹುಬ್ಬಳ್ಳಿ:

ಕಳೆದ 16 ತಿಂಗಳಿಂದಲೇ ಬಿಜೆಪಿ ಆಪರೇಷನ್‌ ಕಮಲಕ್ಕೆ ಪ್ರಯತ್ನ ಮಾಡುತ್ತಲೇ ಇದೆ. ಈಗಲೂ ಅದೇ ಪ್ರಯತ್ನದಲ್ಲಿದೆ. ಮುಂದೆಯೂ ಮಾಡುತ್ತಲೇ ಇರುತ್ತದೆ. ಆದರೆ, ಅದು ಫಲಪ್ರದವಾಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.

ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿ ₹ 50 ಕೋಟಿ ಆಫರ್‌ ಕೊಟ್ಟಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ಇದೇನು ಹೊಸದಲ್ಲ, ಕಳೆದ 16 ತಿಂಗಳಿಂದಲೇ ಬಿಜೆಪಿ ಅದನ್ನೇ ಮಾಡುತ್ತಿದೆ. ಆಪರೇಷನ್‌ ಕಮಲ ಮಾಡುವುದರಲ್ಲಿ ಬಿಜೆಪಿ ನಿಸ್ಸೀಮವಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಅದನ್ನೇ ಮಾಡಿ ಬಿಜೆಪಿ ಸರ್ಕಾರಗಳನ್ನು ಅಸ್ತಿತ್ವಕ್ಕೆ ತಂದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಶಾಸಕರ ಸಂಖ್ಯೆ ಜಾಸ್ತಿ ಇರುವುದರಿಂದ ಅದಕ್ಕೆ ಕಷ್ಟವಾಗುತ್ತಿದೆ. ಎಲ್ಲಿವರೆಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುತ್ತದೆಯೋ ಅಲ್ಲಿವರೆಗೂ ಈ ಪ್ರಯತ್ನವನ್ನು ಅದು ಬಿಡುವುದಿಲ್ಲ ಎಂದರು.

ಕೋವಿಡ್‌ ಹಗರಣದ ತನಿಖೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಹಗರಣವಾಗಿರುವುದರಂತೂ ಸತ್ಯ. ಅದಕ್ಕಾಗಿ ಕಮಿಟಿ ಮಾಡಿದ್ದೇವೆ. ಅವರ ಪಕ್ಷದ ಯತ್ನಾಳ ಅವರೇ ಕೋವಿಡ್‌ನಲ್ಲಿ ಹಗರಣ ಆಗಿದೆ ಎಂದು ಹೇಳಿಲ್ವಾ? ಎಂದು ಪ್ರಶ್ನಿಸಿದರು.

ಇವರು ಬೇಕಾದರೆ ಜಸ್ಟಿಸ್‌ ಕುನ್ಹಾ ವರದಿಯನ್ನು ಚಾಲೆಂಜ್‌ ಮಾಡಲಿ, ಯಾರು ಬೇಡ ಅಂದವರು? ಚಾಲೆಂಜ್‌ ಮಾಡಲು ಅವಕಾಶವಿದೆ ಅಲ್ವ? ಎಂದರು.

ಅವರ ಮೇಲೆ ಯಾವುದೇ ವಿಚಾರಣೆ ಮಾಡಬಾರದಾ? ನ್ಯಾಯಾಂಗಕ್ಕೆ ಪ್ರತಿಯೊಬ್ಬರು ಗೌರವ ನೀಡಬೇಕು ಎಂದ ಅವರು, ಪ್ರಹ್ಲಾದ ಜೋಶಿ ಅವರು ನ್ಯಾಯಾಂಗಕ್ಕೆ ಅಗೌರವ ತೋರುವಂತೆ ಮಾತನಾಡುವುದು ಸರಿಯಲ್ಲ ಎಂದರು.

ಉಪಚುನಾವಣೆ:

ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪರ ಒಲವು ಇದೆ. ಮೂರು ಕಡೆಗಳಲ್ಲಿ ಕಾಂಗ್ರೆಸ್‌ ಗೆಲ್ಲುವ ಸಾಧ್ಯತೆ ಇದೆ ಎಂದರು.

ಸಿ.ಪಿ.ಯೋಗೇಶ್ವರ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರು ಯಾಕೆ ಆ ರೀತಿ ಹೇಳಿದರೋ ಗೊತ್ತಿಲ್ಲ. ಅವರನ್ನೇ ಕೇಳಿ ಎಂದರು. ಆದರೆ ಜಮೀರ್‌ ಹೇಳಿಕೆಯಿಂದ ಡ್ಯಾಮೇಜ್‌ ಆಗಿದೆ ಎಂಬ ಅವರ ಹೇಳಿಕೆಗೆ ಸಹಮತ ಇಲ್ಲ ಎಂದಷ್ಟೇ ಹೇಳಿದರು.

ಸ್ಮಾರ್ಟ್‌ಸಿಟಿ ಕಾಮಗಾರಿ ಬಗ್ಗೆ ಟೀಕಿಸಿದ ಲಾಡ್‌, ದೇಶದಲ್ಲಿ 70 ವರ್ಷದಿಂದ ನಾವು ಹಾಕಿದ ಬುನಾದಿ ಏನೂ ಆಗಿಲ್ಲ. ಆದರೆ ಬಿಜೆಪಿಯವರು 11 ವರ್ಷದಲ್ಲಿ ಕಟ್ಟಿದ ಕಟ್ಟಡಗಳು ಕುಸಿಯುತ್ತಿವೆ. ಮಹಾರಾಷ್ಟ್ರದಲ್ಲಿ ಶಿವಾಜಿ ಮೂರ್ತಿಯೇ ಕುಸಿದಿದೆ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಕ್ಷಮೆ ಕೇಳಿದ್ದಾರೆ ಎಂದರು.

ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿನ ಕಾಮಗಾರಿಯಲ್ಲಿನ ಗುಣಮಟ್ಟಕ್ಕೆ ಕುರಿತಂತೆ ಶೀಘ್ರದಲ್ಲೇ ಸಭೆ ನಡೆಸುವುದಾಗಿ ತಿಳಿಸಿದರು.ಸಿಎಂ ಮುಟ್ಟಿದರೆ ಜನ ಸುಮ್ಮನಿರಲ್ಲ ಎಂಬ ಹೇಳಿಕೆಯ ಅರ್ಥ ಜನ ಅವರ ಹಿಂದೆ ಇದ್ದಾರೆ ಅಂತ. ಬಿಜೆಪಿಯವರಿಗೆ ಟೀಕೆ ಮಾಡಲು ಅವಕಾಶವಿದೆ ಮಾಡಲಿ. ನಮಗೆ ಹೇಳುವ ಅಧಿಕಾರವಿದೆ ಹೇಳ್ತೇವೆ ಎಂದು ಸಂತೋಷ ಲಾಡ್‌ ಹೇಳಿದರು.