ಸಾರಾಂಶ
- ಕಡೂರು ನಿಲ್ದಾಣದಲ್ಲಿ ಆರ್ಪಿಎಫ್ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಕಾರ್ಯಾಚರಣೆ
- - -- ಉತ್ತರ ಭಾರತದಿಂದ ದಿನನಿತ್ಯ ಬೆಂಗಳೂರಿಗೆ ಸಾಗಣೆ - ನೈಋತ್ಯ ರೈಲ್ವೆ ಪೊಲೀಸರಿಂದ ಕಾರ್ಯಾಚರಣೆ: ಜಪ್ತಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ಉತ್ತರ ಭಾರತದಿಂದ ದಿನನಿತ್ಯ ಕರ್ನಾಟಕ ರಾಜಧಾನಿ ಬೆಂಗಳೂರಿಗೆ ರೈಲಿನಲ್ಲಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಮಾದಕ ವಸ್ತುಗಳನ್ನು ನೈಋತ್ಯ ರೈಲ್ವೆ ಪೊಲೀಸರು "ಆಪರೇಷನ್ ನಾರ್ಕೋಸ್ " ಕಾರ್ಯಾಚರಣೆಯಡಿ ಜಪ್ತಿ ಮಾಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾವಣಗೆರೆ, ಅರಸಿಕೆರೆ, ಮೈಸೂರು ರೈಲ್ವೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಜಾರ್ಖಂಡ್ನ ಟಾಟಾ ನಗರ- ಯಶವಂತಪುರ ರೈಲು ಸಂಖ್ಯೆ 18111ರಲ್ಲಿ ದಾವಣಗೆರೆ -ಕಡೂರು ಮಾರ್ಗ ಮಧ್ಯೆ ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ಪತ್ತೆಯಾದ ಬ್ಯಾಗ್ ಅನ್ನು ಅನುಮಾನಾಸ್ಪದವಾಗಿ ಪರಿಶೀಲಿಸಲಾಯಿತು.ಈ ವೇಳೆ ಬ್ಯಾಗ್ನಲ್ಲಿ ಬ್ಯಾಗ್ನಲ್ಲಿ ಸುಮಾರು ₹1,25,000 ಮೌಲ್ಯದ 25 ಗ್ರಾಂ ಕೃತಕ ಮಾದಕ ವಸ್ತು ಎಂಡಿಎಂಎ, ₹90,000 ಮೌಲ್ಯದ 1.522 ಕೆ.ಜಿ. ಗಾಂಜಾ ಮತ್ತು ₹1,850 ಮೌಲ್ಯದ 210 ಗ್ರಾಂ ತೂಕದ 37 ಭಾಂಗ್ ಚಾಕೊಲೇಟ್ಗಳು ಪತ್ತೆಯಾದವು. ಈ ಮಾದಕ ವಸ್ತುಗಳ ಒಟ್ಟು ಮೌಲ್ಯ ₹2,16,850 ಎಂದು ಅಂದಾಜಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ರೈಲ್ವೆ ನಿಲ್ದಾಣದಲ್ಲಿ ನೈಋತ್ಯ ರೈಲ್ವೆ ವಿಭಾಗದ ಆರ್ಪಿಎಫ್ ಮುಖ್ಯ ಆಯುಕ್ತ ಆರ್ಎಸ್ಪಿ ಸಿಂಗ್ ನೇತೃತ್ವದಲ್ಲಿ ಮಧ್ಯಾಹ್ನ 1.55ಕ್ಕೆ ರೇಲ್ವೆ ಪೊಲೀಸರು ತನಿಖೆ ನಡೆಸಲಾಯಿತು. ಈ ಬ್ಯಾಗ್ ವಾರಸುದಾರರು ಯಾರು ಎಂಬುದು ಮಾತ್ರ ಪತ್ತೆಯಾಗಿಲ್ಲ.ಮಾದಕ ವಸ್ತು ಜಪ್ತಿ ಕುರಿತಂತೆ ಹಿರಿಯ ವಿಭಾಗೀಯ ಸುರಕ್ಷತಾ ಆಯುಕ್ತ ಜೆ.ಆರ್. ಸ್ಯಾಮ್ ಪ್ರಶಾಂತ್ ಮಾತನಾಡಿ, ಮಾದಕ ದ್ರವ್ಯಗಳ ಸಾಗಣೆಯನ್ನು ತಡೆಗಟ್ಟಲು, ರೈಲ್ವೆ ಮತ್ತು ಸಾರ್ವಜನಿಕರ ಸುರಕ್ಷತೆಗೆ ಆರ್ಪಿಎಫ್ ಬದ್ಧವಾಗಿದೆ. ಈ ಯಶಸ್ವಿ ಕಾರ್ಯಾಚರಣೆ ನಮ್ಮ ಪೂರ್ವಭಾವಿ ಮತ್ತು ರಕ್ಷಣೆ ಕ್ರಮಗಳ ಪ್ರತೀಕವಾಗಿದೆ ಎಂದು ತಿಳಿಸಿದ್ದಾರೆ.
- - -(ಸಾಂದರ್ಭಿಕ ಚಿತ್ರ)