ಸಾರಾಂಶ
ಅಂಕೋಲಾ; ಭಯೋತ್ಪಾದನೆ ವಿರುದ್ಧದ ಹೋರಾಟ ಕೇವಲ ಸೇನೆಯ ಹೊಣೆಗಾರಿಕೆಯಾಗಿರದೆ, ಪ್ರತಿ ನಾಗರಿಕನೂ ರಾಷ್ಟ್ರಭಕ್ತಿಯ ಮೂಲಕ ತನ್ನ ಗುರುತರ ಜವಾಬ್ದಾರಿ ಮೆರೆಯಬೇಕಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಹೇಳಿದರು.
ಶೆಟಗೇರಿಯ ವಾಸುದೇವ ಸಭಾಭವನದಲ್ಲಿ ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ಸಂಘಟನೆಯ ಆಶ್ರಯಲ್ಲಿ ಆಯೋಜಿಸಲಾದ ಆಪರೇಷನ್ ಸಿಂದೂರ ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನ ಹೋರಾಟ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತವನ್ನು ಅಸ್ಥಿರಗೊಳಿಸುವ ಹುನ್ನಾರದ ಭಾಗವಾಗಿ ನಡೆದ ಆ ಭಯಾನಕ ಕೃತ್ಯಕ್ಕೆ ಭಾರತ ತಕ್ಕ ಪ್ರತೀಕಾರ ನೀಡುವುದರ ಮೂಲಕ ತನ್ನ ಶಕ್ತಿಯನ್ನು ಜಗತ್ತಿಗೆ ತೋರಿಸಿದೆ. ಈ ಘಟನೆಯು ಭಾರತೀಯ ಸೇನೆಯ ತ್ಯಾಗ ಮತ್ತು ದೇಶಭಕ್ತಿಯ ಪ್ರತೀಕವನ್ನು ದಿಕ್ಸೂಚಿಸುತ್ತದೆ ಎಂದರು.ಮಾಂಗಲ್ಯ ಕೇವಲ ಆಭರಣವಲ್ಲ, ಕುಂಕುಮ ಕೇವಲ ಅಲಂಕಾರವಲ್ಲ. ಇವು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕಗಳು. ಉಗ್ರರು ಈ ಭಾವನೆಗಳನ್ನೇ ನಿಗ್ರಹಿಸಲು ಮುಂದಾಗಿದ್ದರು. ಆಪರೇಷನ್ ಸಿಂದೂರ ಈ ಭಾವನೆಗಳ ರಕ್ಷಣೆಗೆ ನಿದರ್ಶನವಾಗಿದೆ ಎಂದರು.
ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ನಾಗರಾಜ್ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಹಲ್ಗಾಮ್ದಲ್ಲಿ ಭಯೋತ್ಪಾದಕರ ದಾಳಿಗೆ ಭಾರತದ ತಕ್ಷಣದ ಮತ್ತು ಕಠಿಣ ಪ್ರತಿಕ್ರಿಯೆ, ದೇಶದ ಭದ್ರತಾ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ. ಭಯೋತ್ಪಾದನೆ ದೇಶದ ನೆಲೆಯ ಮೇಲೆ ನಡೆಯುವ ದಾಳಿ ಮಾತ್ರವಲ್ಲ, ಅದು ಸಂಸ್ಕೃತಿಯ ಮೇಲೆ ನಡೆಯುವ ಆಕ್ರಮಣವಾಗಿದೆ ಎಂದರು.ನಿವೃತ್ತ ಯೋಧ ಕೃಷ್ಣಾನಂದ ದಾಮುದ್ದೇಕರ ಮಾತನಾಡಿದರು. ಮಹೇಶ ಮಹಾಲೆ ಒಂದೇ ಮಾತಂ ಗೀತೆ ಪ್ರಸ್ತುತ ಪಡಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಕುಮಟಾ ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕರಾದ ರೂಪಾಲಿ ನಾಯ್ಕ, ಸುನೀಲ ಹೆಗಡೆ, ಮಾಜಿ ಸಚಿವ ಶಿವಾನಂದ ನಾಯ್ಕ, ಜಿಲ್ಲಾ ವಕ್ತಾರ ನಾಗರಾಜ್, ಭಾಸ್ಕರ ನಾರ್ವೇಕರ, ರಾಜೇಂದ್ರ ನಾಯ್ಕ, ಸಂಜಯ ನಾಯ್ಕ, ಬಿಂದೇಶ ನಾಯಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಆಪರೇಷನ್ ಸಿಂದೂರ ಹೆಸರಿನಲ್ಲಿ ನಡೆದ ಈ ಕಾರ್ಯಾಚರಣೆಯಿಂದ ಕೇವಲ ನಮ್ಮ ಭದ್ರತಾ ವಿಚಾರ ಗಮನಾರ್ಹವಾಗಿದೆ. ನಾಗರಿಕರ ಸಹಕಾರದ ಭೂಮಿಕೆಯನ್ನು ಎತ್ತರಕ್ಕೇರಿಸಿದೆ. ಸೇನೆಯ ಶೌರ್ಯ ಮತ್ತು ತ್ಯಾಗದ ಜೊತೆಗೆ ಸಾಮಾನ್ಯ ನಾಗರಿಕನ ದೇಶ ಪ್ರೇಮದ ಬೆಂಕಿಯ ಕೆನ್ನಾಲಿಗೆಯು ಆಪರೇಷನ್ ಸಿಂದೂರದ ಯಶಸ್ಸಿಗೆ ಭದ್ರ ಬುನಾದಿಯ ಕನ್ನಡಿಯಾಗಿದೆ ಎನ್ನುತ್ತಾರೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ.