ಆಪರೇಷನ್ ಸಿಂದೂರ ಯಶಸ್ವಿ: 300 ಮೀಟರ್ ಉದ್ದದ ತಿರಂಗ ಯಾತ್ರೆ

| Published : May 24 2025, 12:05 AM IST

ಸಾರಾಂಶ

ರಾಷ್ಟ್ರಧ್ವಜ ಹಿಡಿದು ಭಾರತ್ ಮಾತಾಕಿ ಜೈ, ದೇಶದ ಸೈನಿಕರಿಗೆ ಶುಭವಾಗಲಿ ಎಂದು ಜಯಘೋಷಣೆಗಳನ್ನು ಕೂಗುತ್ತಾ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಆಪರೇಷನ್ ಸಿಂದೂರ ಯಶಸ್ವಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ 300 ಮೀಟರ್ ಉದ್ದದ ತಿರಂಗ ಯಾತ್ರೆ ನಡೆಸಿದ ವಿದ್ಯಾರ್ಥಿಗಳು, ಪಟ್ಟಣದ ನಾಗರಿಕರು ಸೈನಿಕರಿಗೆ ಗೌರವ ಸಲ್ಲಿಸಿದರು.

ರಾಷ್ಟ್ರಧ್ವಜ ಹಿಡಿದು ಭಾರತ್ ಮಾತಾಕಿ ಜೈ, ದೇಶದ ಸೈನಿಕರಿಗೆ ಶುಭವಾಗಲಿ ಎಂದು ಜಯಘೋಷಣೆಗಳನ್ನು ಕೂಗುತ್ತಾ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಸಂಭ್ರಮಿಸಿದರು.

ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಕಾಪನಹಳ್ಳಿ ಗವಿಮಠದ ಶ್ರೀ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿ, ವಿಶ್ರಾಂತ ಸೈನಿಕರಾದ ಸುಕುಮಾರ್, ಜಯರಾಮು, ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಮುಡಾ ಮಾಜಿ ಅಧ್ಯಕ್ಷ ಕೆ. ಶ್ರೀನಿವಾಸ್ ಪಟ್ಟಣದ ಪ್ರವಾಸಿ ಮಂದಿರದ ಆವರಣದಿಂದ ಆರಂಭವಾದ ತಿರಂಗಾ ಯಾತ್ರೆಗೆ ಚಾಲನೆ ನೀಡಿದರು.

ಪಟ್ಟಣದ ಮುಖ್ಯ ರಸ್ತೆಯಲ್ಲಿ ರಾಷ್ಟ್ರಧ್ವಜ ಎತ್ತಿ ಹಿಡಿದು ಜಯ ಘೋಷಣೆಗಳನ್ನು ಕೂಗುತ್ತಾ ತಿರಂಗ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಪಟ್ಟಣದ ಮೈಸೂರು, ಚನ್ನರಾಯಪಟ್ಟಣ ರಸ್ತೆಯ ಎಂ.ಕೆ.ಬೊಮ್ಮೆಗೌಡ ವೃತ್ತಕ್ಕೆ ಸಂಚಾರ ಮುಗಿಸಿ ಯಾತ್ರೆಯನ್ನು ಯಶಸ್ವಿಯಾಗಿ ಅಂತಿಮಗೊಳಿಸಿದರು.

ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇಶದ ಜನರು ಹಾಗೂ ಸೈನಿಕರಿಗೆ ತೊಂದರೆ ನೀಡುತ್ತಿರುವ ಶತ್ರು ರಾಷ್ಟ್ರ ಪಾಕಿಸ್ತಾನ ಭಯೋತ್ಪಾದಕತೆಯನ್ನು ಪ್ರೋತ್ಸಾಹಿಸುತ್ತಿತ್ತು. ಶತ್ರು ರಾಷ್ಟ್ರದ ಸೈನಿಕರ ಅಟ್ಟಹಾಸ ಮಟ್ಟ ಹಾಕುವ ಜೊತೆಗೆ ಭಯೋತ್ಪಾದಕರ ನೆಲೆಗಳನ್ನು ದ್ವಂಸ ಮಾಡಿ ಆಪರೇಷನ್ ಸಿಂದೂರ ಹೆಸರಿನಲ್ಲಿ ನಡೆದ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದರು.

ದೇಶವನ್ನು ಶತ್ರುಗಳಿಂದ ಕಾಪಾಡುತ್ತಿರುವ ಸೈನಿಕರಿಗೆ ನೈತಿಕವಾಗಿ ಬೆಂಬಲ ನೀಡಿ ದೇಶವನ್ನು ಗೌರವಿಸಿ ನಾವೆಲ್ಲಾ ಒಂದು ನಾವು ಭಾರತೀಯರು ಎಂಬ ಸಂದೇಶ ನೀಡಲು ತಿರಂಗ ಯಾತ್ರೆ ನಡೆಸಲಾಗಿದೆ ಎಂದು ಹೇಳಿದರು. ಈ ವೇಳೆ ವಿಶ್ರಾಂತ ಸೈನಿಕರಾದ ಸುಕುಮಾರ್, ಜಯರಾಮ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.