ನರಸಿಂಹರಾಜಪುರಸಾಮಾಜಿಕ ಜಾಲತಾಣದಿಂದ ಮಹಿಳೆಯರಿಗೆ ಈಗ ಅವಕಾಶಗಳು ಹೆಚ್ಚಾಗಿದೆ ಎಂದು ಚಿಕ್ಕಮಗಳೂರು ಕಲ್ಕಟ್ಟೆ ಪುಸ್ತಕದ ಮನೆಯ ಮುಖ್ಯಸ್ಥೆ ರೇಖಾ ನಾಗರಾಜರಾವ್ ತಿಳಿಸಿದರು.

- 10 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳಾ ಗೋಷ್ಠಿಯಲ್ಲಿ ಉಪನ್ಯಾಸ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಸಾಮಾಜಿಕ ಜಾಲತಾಣದಿಂದ ಮಹಿಳೆಯರಿಗೆ ಈಗ ಅವಕಾಶಗಳು ಹೆಚ್ಚಾಗಿದೆ ಎಂದು ಚಿಕ್ಕಮಗಳೂರು ಕಲ್ಕಟ್ಟೆ ಪುಸ್ತಕದ ಮನೆಯ ಮುಖ್ಯಸ್ಥೆ ರೇಖಾ ನಾಗರಾಜರಾವ್ ತಿಳಿಸಿದರು.

ಭಾನುವಾರ ಬೆಳ್ಳೂರಿನಲ್ಲಿ ನಡೆದ 10 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆ ಮತ್ತು ಸಮೂಹ ಮಾದ್ಯಮ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಹಿಂದೆ ಮಹಿಳೆಗೆ ಅವಕಾಶಗಳು ಕಡಿಮೆ ಇತ್ತು. ಸಮೂಹ ಮಾದ್ಯಮಗಳಾದ ದಿನ ಟಿವಿ, ಪತ್ರಿಕೆ, ರೇಡಿಯೋ ಇದ್ದವು. ಆದರೆ, ಸಮೂಹ ಮಾದ್ಯಮ ಏಕಮುಖವಾಗಿತ್ತು. ಈಗ ಸಾಮಾಜಿಕ ಜಾಲ ತಾಣ ದಿಂದ ಮೊಬೈಲ್ ಮೂಲಕ ನಾವೇ ನಾಯಕಿಯಾಗಿದ್ದೇವೆ. ವಾಟ್ಸಾಪ್, ಫೇಸ್ ಬುಕ್, ಇನ್ ಸ್ಟಾಂ ಗ್ರಾಂ, ಟ್ವೀಟರ್ ಉಪಯೋಗಿ ಸಿಕೊಳ್ಳುತ್ತಿದ್ದೇವೆ. ಸಾಮಾಜಿಕ ಜಾಲ ತಾಣದಿಂದ ಮಹಿಳೆಯರ ಪ್ರತಿಭೆಗಳು ಹೊರ ಬರುತ್ತಿವೆ. ಈಗ ಅವಕಾಶಗಳಿಗೆ ಕಾಯದೆ ಅವಕಾಶಗಳನ್ನು ನಾವೇ ಸೃಷ್ಠಿಸಬಹುದು. ಪ್ರತಿಭಾವಂತರಿಗೆ ಅವಕಾಶ ಸಿಗುತ್ತಿಲ್ಲ ಎಂದು ಮಹಿಳೆಯರು ಕೊರಗಬೇಕಾಗಿಲ್ಲ. ಅಡುಗೆ ಮನೆಯ ಹೊಸ ರುಚಿ, ಯೋಗ,ಸಂಗೀತ, ನೃತ್ಯ ಎಲ್ಲವೂ ಸಾಮಾಜಿಕ ಜಾಲ ತಾಣ ದಲ್ಲಿ ಸಿಗುತ್ತಿದೆ. 2025 ರ ಅಂಕಿ ಅಂಶಗಳ ಪ್ರಕಾರ ₹95 ಕೋಟಿ ಸಾಮಾಜಿಕ ಜಾಲತಾಣದಲ್ಲಿ ಶೇ.47 ರಷ್ಟು ಮಹಿಳೆಯರು ಉಪಯೋಗಿಸಿಕೊಳ್ಳುತ್ತಿದ್ದಾರೆ. ವೃದ್ಧಾಪ್ಯದಲ್ಲಿ ಸಾಮಾಜಿಕ ಜಾಲತಾಣ ಸಂಗಾತಿಯಾಗಿದೆ. ಜಾಲತಾಣದಲ್ಲಿ ಧನಾತ್ಮಕ, ಋಣಾತ್ಮಕ ಅಂಶವೂ ಇದೆ. ಜಾಗ್ರತೆಯಿಂದ ಬಳಸಿ ಎಂದು ಕಿವಿ ಮಾತು ಹೇಳಿದರು.

ಡಿಸಿಎಂಸಿ ಶಾಲೆ ಕನ್ನಡ ಉಪನ್ಯಾಸಕಿ ಮಧುರ ಮಂಜುನಾಥ್ ಮಲೆನಾಡಿನ ಸಾಹಿತ್ಯ ಸಂಸ್ಕಾರ, ಸಂಸ್ಕೃತಿ ಬಗ್ಗೆ ಮಾತ ನಾಡಿ, ಮಕ್ಕಳನ್ನು ಸಾಹಿತ್ಯ ಸಮ್ಮೇಳನದಂತಹ ಕನ್ನಡ ಜಾತ್ರೆಗೆ ಕರೆತರಬೇಕು. ಮಕ್ಕಳಲ್ಲಿ ಪುಸ್ತಕ ಪ್ರೀತಿ ಬೆಳೆಸಬೇಕು. ಮಹಿಳೆಯರಿಗೆ ಸಮಸ್ಯೆ ಬಂದಾಗ ಶ್ರೀಮಂತವಾದ ಚಿಂತನೆ ಮಾಡಿ ಸರಳವಾಗಿ ಬದುಕಬೇಕು.ಮಕ್ಕಳಿಗೆ ಸಂಸ್ಕಾರವಂತ ಶಿಕ್ಷಣ ಕೊಡಿಸಬೇಕು ಎಂದು ಕರೆ ನೀಡಿದರು.

ಸಭೆ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನ ಅಂಜುಮ್ ಮಾತನಾಡಿ, ಹಿಂದೆ ಅವಿಭಕ್ತ ಕುಟುಂಬಗಳು ಇತ್ತು. ಈಗ ಅವಿಭಕ್ತ ಕುಟುಂಬಗಳು ಇಲ್ಲ. ಇದರಿಂದ ಹಲವು ಸಮಸ್ಯೆಗಳು ಉದ್ಭವವಾಗಿದೆ. ಕುಟುಂಬದ ಹೆಣ್ಣಿನ ಜವಬ್ದಾರಿ ಹೆಚ್ಚಾಗಿದೆ. ಪ್ರಸ್ತುತ ವರ್ಷಗಳಲ್ಲಿ ಮಹಿಳೆಯರು ಹಲವು ಸವಾಲು ಎದುರಿಸಿಯೂ ಸಾಧನೆ ಮಾಡಿದ್ದಾರೆ. ಯಾವುದೇ ಜವಬ್ದಾರಿ ನೀಡಿದರೂ ಮಹಿಳೆಯರು ಸಮರ್ಥವಾಗಿ ನಿರ್ವಹಿಸುತ್ತಾಳೆ. ಕುಟುಂಬದಲ್ಲೂ ನಗು, ನಗುತ್ತಾ ತನ್ನ ಜವಾಬ್ದಾರಿ ನಿರ್ವಹಿಸಿದ್ದಾಳೆ ಎಂದರು.

ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಜಯಮ್ಮ, ಸಾಹಿತಿ ಮೀನಾಕ್ಷಿ ಕಾಂತರಾಜ್, ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಪದ್ಮಸತೀಶ್, ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶ್ಯಾಮಲ ಸತೀಶ್, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಭವ್ಯಸಂತೋಷ್ ಬೆಳ್ಳೂರು ಪ್ರೌಢ ಶಾಲೆ ಮುಖ್ಯೋಪಾಧ್ಯಾಯಿನಿ ಸುಧಾ, ಕರವೇ ಅಧ್ಯಕ್ಷೆ ಪ್ರೇಮ ಶ್ರೀನಿವಾಸ್,ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಜಯಶ್ರೀ ಮೋಹನ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಸಿ.ಟಿ.ರೇವತಿ, ಕಸಾಪ ಸಂಚಾಲಕಿ ಕೊಪ್ಪದ ಚಂದ್ರಕಲಾ, ಸುಷ್ಮಾ ಯುಂಗಾಂಧರ್, ನಂದಿನಿ,ಮಮತಾ, ನಿರ್ಮಲ ಮಂಚೇಗೌಡ, ಶ್ರೀ ನಿಧಿ ದಿನೇಶ್ ಇದ್ದರು.