ಸ್ವಂತ ನಿವೇಶನ ಹೊಂದಬೇಕು ಎಂಬುದು ಪ್ರತಿಯೊಬ್ಬರ ಕನಸು

ಬಳ್ಳಾರಿ: ಕೊರವಿ ಡೆವಲಪರ್ಸ್‌ ಸಂಸ್ಥೆಯು ಬಡ ಹಾಗೂ ಮಧ್ಯಮ ವರ್ಗದ ಜನರಿಗೂ ಸ್ವಂತ ನಿವೇಶನ ಹೊಂದುವ ಅವಕಾಶ ಕಲ್ಪಿಸುವ ಉದ್ದೇಶದಿಂದ ಬಡಾವಣೆ ಅಭಿವೃದ್ಧಿಪಡಿಸುತ್ತಿರುವುದು ಶ್ಲಾಘನೀಯ. ಸಂಸ್ಥೆಯ ಈ ಉತ್ತಮ ಆಶಯಕ್ಕೆ ಮಹಾನಗರ ಪಾಲಿಕೆಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್‌ ಗಾದೆಪ್ಪ ಹೇಳಿದರು.

ನಗರದ ಬಳ್ಳಾರಿ–ಹಿರಿಯೂರು ಹೆದ್ದಾರಿಗೆ ಹೊಂದಿಕೊಂಡಿರುವ ಮಿಂಚೇರಿ ಸಮೀಪ ಕೊರವಿ ಡೆವಲಪರ್ಸ್‌ ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ಕೊರವಿ ಸನ್‌ಶೈನ್‌ ಬಡಾವಣೆಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಂತ ನಿವೇಶನ ಹೊಂದಬೇಕು ಎಂಬುದು ಪ್ರತಿಯೊಬ್ಬರ ಕನಸು. ಆದರೆ ನಿವೇಶನಗಳ ಬೆಲೆ ಏರಿಕೆಯಿಂದ ಬಡವರು ಮತ್ತು ಮಧ್ಯಮ ವರ್ಗದವರಿಗೆ ಆ ಕನಸು ನನಸಾಗುವುದು ಕಷ್ಟವಾಗಿದೆ.ಇಂತಹ ಸಂದರ್ಭದಲ್ಲಿ ಕೈಗೆಟುಕುವ ದರದಲ್ಲಿ ನಿವೇಶನ ಒದಗಿಸುವ ಪ್ರಯತ್ನಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಕಮ್ಮರಚೇಡು ಕಲ್ಯಾಣ ಸ್ವಾಮಿ ಸಂಸ್ಥಾನಮಠದ ಕಲ್ಯಾಣ ಮಹಾಸ್ವಾಮೀಜಿ ಮಾತನಾಡಿ, ಕೊರವಿ ಕುಟುಂಬವು ಎಲ್ಲರಿಗೂ ನಿವೇಶನ ದೊರೆಯಬೇಕು ಎಂಬ ಉದ್ದೇಶದಿಂದ ಈ ಬಡಾವಣೆ ಅಭಿವೃದ್ಧಿಪಡಿಸುತ್ತಿದೆ. ಕುಟುಂಬದ ಸದಸ್ಯರು ತಮ್ಮ ತಂದೆ–ತಾಯಿಯನ್ನು ಸದಾ ಸ್ಮರಿಸುತ್ತಾ ಪರಸ್ಪರ ಸೌಹಾರ್ದತೆಯಿಂದ ಒಗ್ಗಟ್ಟಾಗಿ ಮುನ್ನಡೆಯುತ್ತಿರುವುದು ಇತರರಿಗೆ ಆದರ್ಶವಾಗಿದೆ ಎಂದರು.

ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಹಾಗೂ ಸ್ವಂತ ನಿವೇಶನ ಹೊಂದುವ ಆಸೆ ಹೊಂದಿರುವವರಿಗೆ ಇಂತಹ ಯೋಜನೆಗಳು ಅನುಕೂಲವಾಗಲಿವೆ. ಅಭಿವೃದ್ಧಿ ಕಾರ್ಯಗಳ ಜತೆಗೆ ಸಾಮಾಜಿಕ ಕಾಳಜಿ ಹೊಂದಿರುವುದು ಮೆಚ್ಚುವಂತಹದ್ದು ಎಂದು ಹೇಳಿದರು.

ಬಾಬು ಜಗಜೀವನರಾಮ್‌ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್ ಮಾತನಾಡಿ, ಕೊರವಿ ಡೆವಲಪರ್ಸ್‌ ಸಂಸ್ಥೆಯು ಉತ್ತಮ ಯೋಜನೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಸಂಸ್ಥೆ ಕೈಗೆತ್ತಿಕೊಳ್ಳುವ ಮುಂದಿನ ಎಲ್ಲ ಯೋಜನೆಗಳಿಗೂ ನಮ್ಮ ಬೆಂಬಲವಿರಲಿದೆ ಎಂದರು.

ಕೊರವಿ ಡೆವಲಪರ್ಸ್‌ನ ಹಿತ್ತರಗಿ ಮಾತನಾಡಿ, ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ನಿವೇಶನ ಒದಗಿಸುವ ಉದ್ದೇಶ ಹೊಂದಲಾಗಿದೆ. ತಿಂಗಳಿಗೆ ₹6,000 ಇಎಂಐ ಪಾವತಿಸುವ ಮೂಲಕ ನಿವೇಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಪ್ರತಿದಿನ ಕನಿಷ್ಠ ₹200 ಉಳಿತಾಯ ಮಾಡಿದರೂ ತಿಂಗಳ ಕಂತು ಪಾವತಿಸಲು ಸಾಧ್ಯವಾಗಲಿದ್ದು, ಸ್ವಂತ ನಿವೇಶನ ಹೊಂದುವ ಕನಸನ್ನು ನನಸಾಗಿಸಿಕೊಳ್ಳಬಹುದು ಎಂದು ತಿಳಿಸಿದರು.

ನಿವೇಶನ ಖರೀದಿಯು ಸಾಮಾನ್ಯ ಕುಟುಂಬಗಳಿಗೆ ದೊಡ್ಡ ಆರ್ಥಿಕ ಹೊರೆ ಆಗದಂತೆ ಕಂತು ಆಧಾರಿತ ವ್ಯವಸ್ಥೆ ರೂಪಿಸಲಾಗಿದೆ. ವಿವಿಧ ಅಳತೆಯ ನಿವೇಶನ ಒದಗಿಸುವ ಮೂಲಕ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

35 ಎಕರೆಯಲ್ಲಿ 566 ನಿವೇಶನ

ಕೊರವಿ ಸನ್‌ಶೈನ್‌ ಬಡಾವಣೆಯು ಒಟ್ಟು 35 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಬಡಾವಣೆಯಲ್ಲಿ ಒಟ್ಟು 566 ನಿವೇಶನ ರೂಪಿಸಲಾಗಿದ್ದು, 30x40, 60x40 ಹಾಗೂ 20x30 ಅಡಿ ಅಳತೆಯ ನಿವೇಶನಗಳು ಲಭ್ಯವಿವೆ. ಬಳ್ಳಾರಿ–ಹಿರಿಯೂರು ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ಸಂಪರ್ಕದ ದೃಷ್ಟಿಯಿಂದಲೂ ಬಡಾವಣೆ ಅನುಕೂಲಕರ ಸ್ಥಳದಲ್ಲಿದೆ ಎಂದು ಸಂಸ್ಥೆ ತಿಳಿಸಿದೆ.

ಸದ್ಯ ನಿವೇಶನಗಳಿಗಾಗಿ ಉಚಿತ ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ಪಡೆದು ನಿವೇಶನ ಕಾಯ್ದಿರಿಸಿಕೊಳ್ಳಬಹುದು ಎಂದು ಸಂಸ್ಥೆಯ ಪ್ರತಿನಿಧಿಗಳು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಡಾ.ವಿಶ್ವನಾಥ್‌ ಕೊರವಿ ಸ್ವಾಗತಿಸಿದರು. ರಾಜಣ್ಣ ಕೊರವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಧರ್‌ ಕೊರವಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ವೆಂಕಟೇಶ ಜಾಧವ್ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಗಂಗಾವತಿ ಪ್ರಾಣೇಶ್‌ ಮತ್ತು ತಂಡದವರಿಂದ ಹಾಸ್ಯ ಕಾರ್ಯಕ್ರಮ ನಡೆಯಿತು.