ಕನ್ನಡಪ್ರಭ ವಾರ್ತೆ ಮದ್ದೂರು

ನಗರಸಭೆಗೆ ಗ್ರಾಮ ಪಂಚಾಯ್ತಿ ಸೇರ್ಪಡೆ ವಿರೋಧಿಸಿ ತಾಲೂಕಿನ ಗೆಜ್ಜಲಗೆರೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ವಿರೋಧ ಪಕ್ಷದವರ ಕೈವಾಡವಿದೆ ಎಂದು ಶಾಸಕ ಕೆ.ಎಂ.ಉದಯ್ ಆರೋಪಿಸಿದರು.

ತಾಲೂಕಿನ ನಗರರಕೆರೆ ಬಳಿ ಶನಿವಾರ ರಸ್ತೆ ಅಭಿವೃದ್ಧಿಗೆ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಗ್ರಾಪಂ ಸೇರ್ಪಡೆ ವಿರುದ್ಧ ಗೆಜ್ಜಲಗೆರೆ ಗ್ರಾಪಂ ಆವರಣದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಂದಿರುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಪ್ರತಿಭಟನಾ ವಿಷಯದಲ್ಲಿ ಯಾವುದೇ ವಿಶೇಷತೆ ಇಲ್ಲ. ಒಬ್ಬರಾದ ಮೇಲೊಬ್ಬರಂತೆ ವಿರೋಧ ಪಕ್ಷದ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ನನ್ನ ಬೆಂಬಲವಿದೆ ಎಂದು ಹೇಳುತ್ತಿದ್ದಾರೆ. ಇದು ರಾಜಕೀಯ ಪ್ರೇರಿತದ ಸ್ವರೂಪ ಪಡೆದುಕೊಳ್ಳುತ್ತಿದೆ ಎಂದರು.

ಗ್ರಾಪಂ ನಗರಸಭೆಗೆ ಸೇರ್ಪಡೆ ಸಂಬಂಧ ಸ್ವಲ್ಪ ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು, ನಾನು ಹಾಗೂ ಜಿಲ್ಲಾಧಿಕಾರಿಗಳು ಪ್ರತಿಭಟನೆ ಮುಖಂಡರ ಜೊತೆಗೆ ಸಭೆ ನಡೆಸಿ ಮಾತನಾಡಿದ್ದೇವೆ. ಅದರಂತೆ ಅವರು ಕಾಯಬೇಕು ಎಂದು ತಿಳಿಸಿದರು.


ಆದರೆ, ಅವರು ಕಾಯುವುದನ್ನು ಬಿಟ್ಟು ಶಾಂತಿಯುತ ಪ್ರತಿಭಟನೆಯನ್ನು ನಡೆಸದೆ ಗೇಟ್‌ನ ಬೀಗ ಒಡೆಯುವುದು, ರಸ್ತೆ ತಡೆ ಮಾಡುವುದು, ರಾಜಕೀಯ ಮಾಡುವುದು ಸೇರಿದಂತೆ ಇತ್ಯಾದಿಗಳು ಗೂಂಡಾಗಿರಿ ಪ್ರದರ್ಶನ ಮಾಡಿದಂತೆ ಅಲ್ಲವೇ ಎಂದು ಪ್ರಶ್ನಿಸಿದರು.

ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ನಗರಕೆರೆ ಸಂದೀಪ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಮುಖಂಡರಾದ ಚಾವಿ, ಅಶೋಕ್, ಸುರೇಶ್ ಸೇರಿದಂತೆ ಹಲವರು ಹಾಜರಿದ್ದರು.

ಮಾರ್ಚ್ 3ರಂದು ಪ್ರತಿಭಟನೆಗೆ ತೀರ್ಮಾನ

ಶ್ರೀರಂಗಪಟ್ಟಣ:

ಸರ್ಕಾರದ ಅವೈಜ್ಞಾನಿಕ ಒಳಮೀಸಲಾತಿ ಜಾರಿ ಹಾಗೂ ರೋಸ್ಟರ್ ಬಿಂದುವಿನಲ್ಲಿನಲ್ಲಿನ ನ್ಯೂನತೆ ಸರಿಪಡಿಸುವಂತೆ ಅಗ್ರಹಿಸಿ ಸರ್ಕಾರದ ಗಮನ ಸೆಳೆಯಲು ತಾಲೂಕು ಬಲಗೈ ಸಮುದಾಯಗಳ ಒಕ್ಕೂಟದಿಂದ ಪೂರ್ವಭಾವಿ ಸಭೆ ನಡೆಯಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ವಿವಿಧ ಬಲಗೈ ಸಮುದಾಯಗಳ ಮುಖಂಡರು ಸಾಮೂಹಿಕ ನಾಯಕತ್ವದಲ್ಲಿ ಸೇರಿ ಚರ್ಚೆ ನಡೆಸಿದರು. ಸರ್ಕಾರದಿಂದ ಬಲಗೈ ಸಮುದಾಯಕ್ಕೆ ಒಳ ಮೀಸಲಾತಿಯಿಂದಾಗುವ ಅನ್ಯಾಯದ ವಿರುದ್ಧ ಮಾರ್ಚ್ 3ರಂದು ಪಟ್ಟಣದಲ್ಲಿ ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಮಹದೇವಸ್ವಾಮಿ ಮಹದೇವಪುರ, ಗಂಜಾಂ ರವಿಚಂದ್ರ, ಪಾಂಡು, ನಗುವನಹಳ್ಳಿ ಮಹದೇವಸ್ವಾಮಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಚನ್ನನಕೆರೆ ಶಿವು, ನಂದೀಶ್, ಅಪ್ಪಾಜಿ, ಶ್ರೀಕಂಠು, ಶೆಟ್ಟಹಳ್ಳಿ ಸುರೇಶ್, ಶಂಕರ್ ಲಾಳಿ ಪಾಳ್ಯ, ನಾಗರಾಜು ಸೇರಿದಂತೆ ಇತರರ ಬಲಗೈ ಸಮುದಾಯಗಳ ಮುಖಂಡರು ಇದ್ದರು.