ಮಡಿಕೇರಿ: ನೆಲಜಿ ಮಲ್ಮ ಬೆಟ್ಟ ತಪ್ಪಲಿನಲ್ಲಿ ಖರೀದಿಸಿರುವ 70 ಎಕರೆ ಜಾಗ ವಿವಾದ ಸಂಬಂಧಿಸಿದಂತೆ, ಉದ್ದೇಶಿತ ಸಂಪೂರ್ಣ ಯೋಜನೆ ಕೈ ಬಿಡುವಂತೆ ಕೊಡವ ಸಮುದಾಯದ ಪರವಾಗಿ ಯುಕೊ ಸಂಘಟನೆ, ಮತ್ತು ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ಮುಮ್ತಾಜ್ ಅಲಿ ಖಾನ್ ಅವರಿಗೆ ಪತ್ರ ಬರೆದು ಒತ್ತಾಯಿಸಲಾಗಿದೆ. ಈ ಕುರಿತು ಯುಕೊ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮತ್ತು ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ತೋಲಪಂಡ ಸುಬ್ಬಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಲ್ಮ ಬೆಟ್ಟದ ತಪ್ಪಲಿನಲ್ಲಿ ಕೊಡವ ಕುಟುಂಬಗಳಿಗೆ ಸಂಬಂಧಿಸಿದ ಸುಮಾರು 70 ಏಕರೆ ಜಾಗವನ್ನು ಮುಮ್ತಾಜ್ ಆಲಿ ಖಾನ್ ಖರೀದಿಸಿದ್ದರು. ಈ ವಿಷಯ ಗೊತ್ತಾಗುತ್ತಿದ್ದಂತೆಯೇ ಸ್ಥಳೀಯವಾಗಿ ಗ್ರಾಮಸ್ಥರಿಂದ ಹಾಗು ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು. ಈ ಜಾಗವು ಸೂಕ್ಮಾತಿ ಸೂಕ್ಮ ಸಾಂಸ್ಕೃತಿಕ ಪ್ರದೇಶದಲ್ಲಿದ್ದು, ಕೊಡವರ ಧಾರ್ಮಿಕ ಭಾವನೆಗೆ ಧಕ್ಕೆ ತರುವ ವಿಷಯವಾಗಿದ್ದು, ಜಾಗದಲ್ಲಿ ಉದ್ದೇಶಿತ ಯೋಜನೆಯಿಂದ ಕೊಡವ ಪರಂಪರೆ ಹಾಗು ಅಸ್ತಿತ್ವದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿದ್ದಾರೆ.ಪಶ್ಚಿಮ ಘಟ್ಟಗಳಲ್ಲಿನ ಭೂಕುಸಿತದಂತಹ ದುರಂತಗಳಿಗೆ ಈ ಯೋಜನೆಯು ಕಾರಣವಾಗಲಿದ್ದು, ಈ ಯೋಜನೆ ಕೂಡಲೇ ಸ್ಥಗಿತಗೊಳಿಸಿ ಸಂಪೂರ್ಣ ಯೋಜನೆಯನ್ನು ಶಾಶ್ವತವಾಗಿ ಕೈಬಿಡಬೇಕು ಎಂದು ಪತ್ರದ ಮೂಲಕ ಜಾಗ ಖರೀದಿಸಿದ ಮುಮ್ತಾಜ್ ಅಲಿ ಖಾನ್ ಅವರನ್ನು ಒತ್ತಾಯಿಸಲಾಗಿದೆ.ಜಾಗಕ್ಕೆ ಸಂಬಂಧಿಸಿದಂತೆ ನೆಲಜಿ ಹಾಗು ಸುತ್ತಮುತ್ತಲಿನ ಗ್ರಾಮಸ್ಥರ ಸಂಪೂರ್ಣ ವಿರೋಧವಿದ್ದು ಗ್ರಾಮಸ್ಥರ ಹೋರಾಟಕ್ಕೆ ಸಂಪೂರ್ಣ ಬೆಂಬಲವಿರಲಿದೆ ಎಂದೂ ಅವರು ತಿಳಿಸಿದ್ದಾರೆ. ಕೊಡಗಿನ ಪ್ರಶಾಂತತೆ ಹಾಗು ಪಾವಿತ್ರ್ಯತೆಗೆ ಆದ್ಯತೆ ನೀಡಿ, ಕೊಡವ ಸಂಸ್ಕೃತಿಗೆ ಯಾವುದೇ ತೊಂದರೆಯುಂಟುಮಾಡುವ ಯೋಜನೆಗಳನ್ನು ನಿರಂತರ ವಿರೋಧಿಸುವುದಾಗಿ ತಿಳಿಸಿರುವ ಅವರು, ನೆಲಜಿ ಗ್ರಾಮದ ಜಾಗದಲ್ಲಿ ಉದ್ಧೇಶಿತ ಎಲ್ಲಾ ಯೋಜನೆಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಿ, ಶಾಶ್ವತವಾಗಿ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷರಾದ ತೇಲಪಂಡ ಸುಬ್ಬಯ್ಯ, ಪಾಲೇಂಗಡ ಅಮಿತ್ ಭೀಮಯ್ಯ, ಚೊಟ್ಟೆಯಂಡ ಸಂಜು ಕಾವೇರಪ್ಪ ಮೊದಲಾದವರು ಪತ್ರಕ್ಕೆ ಸಹಿಹಾಕಿದ್ದು ಪ್ರತಿಯೊಬ್ಬರೂ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿದ್ದಾರೆ ಎಂದು ಅವರು ಹೇಳಿದ್ದಾರೆ.