ತೈಲ ಬೆಲೆ ಏರಿಕೆಗೆ ವಿರೋಧ: ಬಿಜೆಪಿ ಪ್ರತಿಭಟನೆ

| Published : Jun 21 2024, 01:02 AM IST

ತೈಲ ಬೆಲೆ ಏರಿಕೆಗೆ ವಿರೋಧ: ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿಂಧನೂರಿನ ಗಾಂಧಿ ವೃತ್ತದಲ್ಲಿ ಬಿಜೆಪಿ ನಗರ ಮತ್ತು ಗ್ರಾಮೀಣ ಮಂಡಲದ ವತಿಯಿಂದ ತೈಲ ಬೆಲೆ ಏರಿಕೆ ಖಂಡಿಸಿ ರಸ್ತೆ ಸಂಚಾರ ತಡೆದು ವಿನೂತನವಾಗಿ ಪ್ರತಿಭಟಿಸಲಾಯಿತು.

ಕನ್ನಡಪ್ರಭ ವಾರ್ತೆ ಸಿಂಧನೂರು

ಕರ್ನಾಟಕ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಹಾಗೂ ರಾಜ್ಯ ಸರ್ಕಾರ ಕೂಡಲೇ ಆದೇಶ ಹಿಂಪಡೆಯಲು ಒತ್ತಾಯಿಸಿ ಬಿಜೆಪಿ ನಗರ ಮತ್ತು ಗ್ರಾಮೀಣ ಮಂಡಲದ ವತಿಯಿಂದ ಗುರುವಾರ ವಿನೂತನವಾಗಿ ಪ್ರತಿಭಟಿಸಲಾಯಿತು.

ಸ್ಥಳೀಯ ಪ್ರವಾಸಿ ಮಂದಿರದಲ್ಲಿ ನೆರೆದ ನೂರಾರು ಬಿಜೆಪಿ ಮುಖಂಡರು, ಕಾರ್ಯಕರ್ತರು ಕಿವಿಯಲ್ಲಿ ಚೆಂಡು ಹೂವು, ಕೈಯಲ್ಲಿ ತೆಂಗಿನಕಾಯಿನ ಚಿಪ್ಪು ಹಿಡಿದು, ಆಟೋವನ್ನು ಹಗ್ಗದಿಂದ ಎಳೆದುಕೊಂಡು ಮೆರವಣಿಗೆ ಮೂಲಕ ಮಹಾತ್ಮ ಗಾಂಧಿ ವೃತ್ತಕ್ಕೆ ಬಂದು ಸುಮಾರು 20 ನಿಮಿಷಗಳ ಕಾಲ ರಸ್ತೆ ಸಂಚಾರ ತಡೆದು ಪ್ರತಿಭಟಿಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕುಷ್ಟಗಿ, ಗಂಗಾವತಿ ಹಾಗೂ ರಾಯಚೂರು ಮುಖ್ಯರಸ್ತೆಗಳಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಯಿತು. ನಂತರ ಮಿನಿ ವಿಧಾನಸೌಧ ಕಚೇರಿಗೆ ಬಂದು ಗ್ರೇಡ್-2 ತಹಸೀಲ್ದಾರ್ ಚಂದ್ರಶೇಖರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಲಾಯಿತು.

ಬಿಜೆಪಿ ಮುಖಂಡರಾದ ಕೆ.ಕರಿಯಪ್ಪ, ರಾಜೇಶ ಹಿರೇಮಠ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ವೆಂಕೋಬ ನಾಯಕ ರಾಮತ್ನಾಳ, ನಗರ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜೀನೂರು ಮಾತನಾಡಿದರು.

ಮುಖಂಡರಾದ ಮಧ್ವರಾಜ್ ಆಚಾರ್, ಲಿಂಗರಾಜ ಹೂಗಾರ್, ಸಿದ್ರಾಮೇಶ ಮನ್ನಾಪುರ, ವೆಂಕನಗೌಡ ಮಲ್ಕಾಪುರ, ಈರೇಶ ಇಲ್ಲೂರು, ಕೆ.ಹನುಮೇಶ, ಶಿವಬಸನಗೌಡ ಗೊರೇಬಾಳ, ಸಹನಾ ಹಿರೇಮಠ ಇದ್ದರು.