ಸಾರಾಂಶ
ತಹಸೀಲ್ದಾರ್ ಕಾರ್ಯಾಲಯವನ್ನು ಎಪಿಎಂಸಿಗೆ ಸ್ಥಳಾಂತರಿಸುವ ನಿರ್ಧಾರಕ್ಕೆ ಪ್ರತಿರೋಧವಿದೆ. ಮನವಿಗೆ ಸ್ಪಂದಿಸಿದ್ದರೆ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದು ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಅಮರೇಶ ಬಳಿಗೇರ ಹೇಳಿದರು.
ಗಜೇಂದ್ರಗಡ: ತಹಸೀಲ್ದಾರ್ ಕಾರ್ಯಾಲಯವನ್ನು ಎಪಿಎಂಸಿಗೆ ಸ್ಥಳಾಂತರಿಸುವ ನಿರ್ಧಾರಕ್ಕೆ ಪ್ರತಿರೋಧವಿದೆ. ಮನವಿಗೆ ಸ್ಪಂದಿಸಿದ್ದರೆ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದು ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಅಮರೇಶ ಬಳಿಗೇರ ಹೇಳಿದರು.
ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿನ ತಹಸೀಲ್ದಾರ್ ಕಾರ್ಯಾಲಯವನ್ನು ರೋಣ ರಸ್ತೆಯಲ್ಲಿನ ಕೃಷಿ ಉತ್ಪನ ಮಾರುಕಟ್ಟಿ ಸಮಿತಿಗೆ ಸ್ಥಳಾಂತರಿಸದಂತೆ ಆಗ್ರಹಿಸಿ ಶನಿವಾರ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರಿಗೆ ಮನವಿ ನೀಡಿ ಮಾತನಾಡಿದರು.ತಹಸೀಲ್ದಾರ್ ಕಾರ್ಯಾಲಯದಲ್ಲಿ ಪಾರ್ಕಿಂಗ್ ಸಮಸ್ಯೆ ಹಾಗೂ ಶೀತಲೀಕರಣದ ಕಾರಣವನ್ನಿಟ್ಟು ಎಪಿಎಂಸಿ ಆವರಣದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲು ಮುಂದಾಗಿದ್ದಕ್ಕೆ ನಮ್ಮ ಪ್ರತಿರೋಧವಿದೆ. ಬೇಸಿಗೆ ಮುಗಿದ ಬಳಿಕ ಮಳೆಗಾಲ ಬರುತ್ತದೆ. ಬೇಸಿಗೆಯಲ್ಲಿ ದುರಸ್ತಿ ಮಾಡಿಸಿಕೊಳ್ಳಬಹುದಿತ್ತು. ಅಲ್ಲದೆ ತಹಸೀಲ್ದಾರ್ ಕಾರ್ಯಾಲಯದಲ್ಲಿ ಇರುವಷ್ಟು ಜಾಗ ಎಪಿಎಂಸಿ ಆವರಣದಲ್ಲಿ ಇಲ್ಲ. ಎಪಿಎಂಸಿಗೆ ಬರುವ ವಾಹನಗಳಿಂದಾಗಿ ಸರ್ಕಾರಿ ಆಸ್ಪತ್ರೆ ಹಾಗೂ ಕಾಲಕಾಲೇಶ್ವರ ವೃತ್ತದವರೆಗೆ ಟ್ರಾಫಿಕ್ ಜಾಮ್ ಆಗಿರುತ್ತದೆ. ತಹಸೀಲ್ದಾರ್ ಕಾರ್ಯಾಲಯ ಎಪಿಎಂಸಿ ಆವರಣಕ್ಕೆ ಸ್ಥಳಾಂತರವಾದರೆ ಎಪಿಎಂಸಿಗೆ ಹಾಗೂ ತಹಸೀಲ್ದಾರ್ ಕಾರ್ಯಾಲಯಕ್ಕೆ ಬರುವವರಿಗೆ ಮತ್ತಷ್ಟು ತೊಂದರೆ ಉಂಟಾಗಲಿದೆ ಎಂದರು.ಪಟ್ಟಣದ ತಹಸೀಲ್ದಾರ್ ಕಾರ್ಯಾಲಯ ಸ್ಥಳಾಂತರಕ್ಕೆ ಎಷ್ಟು ಕಚೇರಿಗಳನ್ನು ಪರಿಶೀಲಿಸಿದ್ದೀರಿ ಎಂದು ವರ್ತಕರು ಹಾಗೂ ಶ್ರಮಿಕರು ಪ್ರಶ್ನಿಸಿದಾಗ ಎಪಿಎಂಸಿ ಆವರಣದಲ್ಲಿನ ಕೃಷಿ ಉತ್ಪನ ಮಾರುಕಟ್ಟೆ ಮಾತ್ರ ಪರಿಶೀಲಿಸಿ ಆಯ್ಕೆ ಮಾಡಲಾಗಿದೆ ಎಂದಾಗ ಆಯ್ಕೆ ಮಾಡಿರುವ ಕಾರ್ಯಾಲಯವು ಸಹ ಗಟ್ಟಿಮುಟ್ಟಾಗಿಲ್ಲ. ಅಲ್ಲದೆ ಎಪಿಎಂಸಿ ಆವರಣದಲ್ಲಿನ ತಹಸೀಲ್ದಾರ್ ಕಾರ್ಯಾಲಯವನ್ನು ಸ್ಥಳಾಂತರ ಮಾಡುವ ನಿರ್ಧಾರ ಕೈಗೊಳ್ಳುವ ಮುಂಚೆ ಎಪಿಎಂಸಿಯಲ್ಲಿ ಇರುವ ವರ್ತಕರ ಸಂಘ ಹಾಗೂ ಶ್ರಮಿಕರ ಸಂಘದೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಬಹುದಿತ್ತು. ನೀವು ಹೀಗೆ ಏಕಾಏಕಿ ನಿರ್ಧಾರ ಕೈಗೊಂಡರೆ ಹೇಗೆ ಎಂದು ತಹಸೀಲ್ದಾರ್ ಅವರನ್ನು ಪ್ರಶ್ನಿಸುವುದರ ಜತೆಗೆ ತಹಸೀಲ್ದಾರ್ ಕಾರ್ಯಾಲಯವನ್ನು ಎಪಿಎಂಸಿ ಆವರಣಕ್ಕೆ ಸ್ಥಳಾಂತರ ಮಾಡುವ ಬದಲು ಹಳೆಯ ಪೊಲೀಸ್ ಠಾಣೆ ಸೇರಿ ಇತರ ಸರ್ಕಾರ ಕಚೇರಿಗಳನ್ನು ಪರಿಶೀಲಿಸಿ. ಅದರ ಬದಲಾಗಿ ಕೃಷಿ ಉತ್ಪನ ಮಾರುಕಟ್ಟೆ ಸಮಿತಿಗೆ ಸ್ಥಳಾಂತರದ ನಿರ್ಧಾರ ಅಂತಿಮವಾದರೆ ಪ್ರತಿಭಟನೆಗೆ ನಾವು ಅಣಿಯಾಗುತ್ತೇವೆ ಎಂದು ಎಚ್ಚರಿಸಿದರು. ಎಪಿಎಂಸಿ ವರ್ತಕರು ನೀಡಿದ ಮನವಿ ಸ್ವೀಕರಿಸಿದ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಮನವಿಯನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ರವಾನಿಸುವುದಾಗಿ ತಿಳಿಸಿದರು.ಈ ವೇಳೆ ಬಸಣ್ಣ ವಾಲಿ, ಶಿವಪ್ಪ ಸಂಗನಾಳ, ಪ್ರಭು ಹಿರೇಮಠ, ಮಲ್ಲಿಕಾರ್ಜುನ ಮಲ್ಲನಗೌಡರ, ಮುತ್ತಣ್ಣ ಚಟ್ಟೇರ, ಪರಸಪ್ಪ ಕಟ್ಟಿಮನಿ, ಶರಣಪ್ಪ ಹಿರೇಕೊಪ್ಪ, ಕಳಕಪ್ಪ ಪಟ್ಟಣಶೆಟ್ಟಿ, ನಾಗರಾಜ ಹೊಸಂಗಡಿ, ವಿಜಯ ಬುದಿಹಾಳ, ವೀರೇಶ ಸಂಗಮದ, ಕೆರಿಯಪ್ಪ ಪಟ್ಟಣಶೆಟ್ಟಿ, ಶ್ರೀಕಾಂತ ಡೊಳ್ಳಿನ, ಮಹಾಂತೇಶ ಚಿಕೊಪ್ಪ, ಈಶಪ್ಪ ಮ್ಯಾಗೇರಿ, ಬಸವರಾಜ ಬೇಲೆರಿ, ಸಿದ್ದಪ್ಪ ಚಲವಾದಿ, ಪರಶುರಾಮ ಕಲಾಲ, ಬಸವರಾಜ ಸುರಕೋಡ, ಯಶವಂತ ಪವಾರ ಸೇರಿ ಇತರರು ಇದ್ದರು.