ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಬದುಕಿನ ಸುಖವನ್ನು ಅರಸುತ್ತಾ ಹೋದ ಮಾನವ ಇಂದು ಪ್ರಕೃತಿ ಮೇಲೆ ದಬ್ಬಾಳಿಕೆ ಮಾಡುತ್ತಿರುವುದರಿಂದ ಸೃಷ್ಟಿ ಸಮತೋಲನ ಕಳೆದುಕೊಳ್ಳುತ್ತಿದೆ ಎಂದು ಉಪ ಪ್ರಾಂಶುಪಾಲ ರವಿಕುಮಾರ್ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಶಾಲೆಯ ಹಸಿರು ಪಡೆ-ಇಕೋ ಕ್ಷಬ್ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಗರೀಕರಣದ ಫಲವಾಗಿ ಬೆಟ್ಟ ಗುಡ್ಡಗಳು, ಹಸಿರು ವಲಯಗಳು ನಾಶವಾಗುತ್ತಿದೆ. ಇದು ಮುಂದಿನ ಪೀಳಿಗೆಯ ಜನರ ಭವಿಷ್ಯಕ್ಕೆ ಮಾರಕವಾಗಿದೆ. ನಗರೀಕರಣ ಮತ್ತು ಕೈಗಾರಿಕೀಕರಣದ ಫಲವಾಗಿ ನಮ್ಮ ಜಲಮೂಲಗಳು ಅಪಾಯಕ್ಕೆ ಸಿಲುಕಿದ್ದು ನಾವು ಕುಡಿಯುತ್ತಿರುವ ನೀರು ಮತ್ತು ಗಾಳಿ ಕೂಡ ವಿಷವಾಗುತ್ತಿದೆ ಎಚ್ಚರಿಕೆ ನೀಡಿದರು.

ಮರಗಿಡಗಳ ಮಹತ್ವವನ್ನು ನಮ್ಮ ಹಿರಿಯರು ಅರ್ಥಮಾಡಿಕೊಂಡಿದ್ದರು. ಒಂದು ಮರಕಡಿದರೆ ಬದಲಾಗಿ ಮತ್ತೊಂದು ಗಿಡ ನೆಡುತ್ತಿದ್ದರು. ಮರ ಗಿಡಗಳಲ್ಲೂ ನಮ್ಮ ಹಿರಿಯರು ದೈವವನ್ನು ಕಾಣುತ್ತಿದ್ದರು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಗುರಿಯಾಗಬೇಕು ಎಂದರು.


ಸೃಷ್ಟಿಯ ಸಕಲ ಜೀವಿಗಳು ಬದುಕಲು ಅಗತ್ಯವಾದುದನ್ನು ಭೂಮಿ ತಾಯಿ ನಮಗೆ ನೀಡಿದ್ದಾಳೆ. ನಮ್ಮ ಮನೆ ಮತ್ತು ಸುತ್ತಲ ಪರಿಸರದಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವ ಸಂಸ್ಕೃತಿ ನಮ್ಮದಾಗಬೇಕು. ಆರೋಗ್ಯಕರ ಜೀವನಕ್ಕಾಗಿ ನಮ್ಮ ಸುತ್ತಲ ಪರಿಸರವನ್ನು ನಾವು ಸ್ವಚ್ಚವಾಗಿಟ್ಟುಕೊಳ್ಳಬೇಕು ಎಂದು ಪರಿಸರ ಸಂರಕ್ಷಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳಗ್ರಾಮಾಭಿವೃದ್ಧಿ ಯೋಜನೆ ವಲಯದ ಮೇಲ್ವಿಚಾರಕಿ ಲಕ್ಷ್ಮೀ ಮಾತನಾಡಿ, ಪರಿಸರ ಸಂರಕ್ಷಣೆ ಬಗ್ಗೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನಿಡಿದರು.

ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಪರಿಸರ ಸಂರಕ್ಷಣೆ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪರಿಸರ ರಕ್ಷಣೆಗೆ ಸಂಬಂಧಪಟ್ಟ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು, ಹಣ್ಣಿನ ಗಿಡವನ್ನು ಶಾಲೆ ಆವರಣದಲ್ಲಿ ನಾಟಿ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಗೌರಮ್ಮ, ಧರ್ಮಸ್ಥಳ ಸಂಸ್ಥೆ ಕೃಷಿ ಮೇಲ್ವಿಚಾರಕ ಮಂಜುನಾಥ್ ಸೇರಿದಂತೆ ಸಾಲೆಯ ಶಿಕ್ಷಕ ವೃಂದ ಇದ್ದರು.