ಬಾಯಿ ಆರೋಗ್ಯ, ದಂತ ವೈದ್ಯಕೀಯಕ್ಕೆ ಪ್ರತ್ಯೇಕ ಮಿಷನ್‌ ಬೇಕು

| Published : Jun 01 2025, 11:48 PM IST

ಬಾಯಿ ಆರೋಗ್ಯ, ದಂತ ವೈದ್ಯಕೀಯಕ್ಕೆ ಪ್ರತ್ಯೇಕ ಮಿಷನ್‌ ಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಆರೋಗ್ಯ ಮಿಷನ್ ಮಾದರಿಯಲ್ಲೇ ರಾಷ್ಟ್ರೀಯ ಬಾಯಿ ಆರೋಗ್ಯ ಮತ್ತು ದಂತ ವೈದ್ಯಕೀಯಕ್ಕಾಗಿ ಪ್ರತ್ಯೇಕ ಮಿಷನ್ ಸ್ಥಾಪಿಸುವ ಅಗತ್ಯವಿದೆ ಎಂದು ದಂತವೈದ್ಯರೂ ಆಗಿರುವ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ.

- ದಂತವೈದ್ಯರ ಸೊಸೈಟಿ ರಾಜ್ಯಮಟ್ಟದ 11ನೇ ಸಮ್ಮೇಳನದಲ್ಲಿ ಸಂಸದೆ ಡಾ.ಪ್ರಭಾ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಷ್ಟ್ರೀಯ ಆರೋಗ್ಯ ಮಿಷನ್ ಮಾದರಿಯಲ್ಲೇ ರಾಷ್ಟ್ರೀಯ ಬಾಯಿ ಆರೋಗ್ಯ ಮತ್ತು ದಂತ ವೈದ್ಯಕೀಯಕ್ಕಾಗಿ ಪ್ರತ್ಯೇಕ ಮಿಷನ್ ಸ್ಥಾಪಿಸುವ ಅಗತ್ಯವಿದೆ ಎಂದು ದಂತವೈದ್ಯರೂ ಆಗಿರುವ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ನಗರದಲ್ಲಿ ಬಾಪೂಜಿ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಭಾಂಗಣದಲ್ಲಿ ಶನಿವಾರ ದಂತ ವೈದ್ಯಕೀಯ ಕಾಲೇಜುಗಳಿಂದ ಹಮ್ಮಿಕೊಂಡಿದ್ದ ಭಾರತೀಯ ದಂತವೈದ್ಯರ ಸೊಸೈಟಿ (ಭಾರತೀಯ ಪ್ರಾಸ್ತೋಡಾಂಟಿಕ್ ಸೊಸೈಟಿ)ಯ ರಾಜ್ಯಮಟ್ಟದ 11ನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯ ಇಲಾಖೆಯಲ್ಲಿ ಆಯುರ್ವೇದಕ್ಕೆ ಹೇಗೆ ಪ್ರತ್ಯೇಕ ವಿಭಾಗವಿದೆಯೋ ಅದೇ ರೀತಿ ಬಾಯಿ ಆರೋಗ್ಯ ಮತ್ತು ದಂತ ವೈದ್ಯಕೀಯಕ್ಕೂ ಪ್ರತ್ಯೇಕ ವಿಭಾಗದ ಅವಶ್ಯಕತೆ ಇದೆ ಎಂದರು.

ಬಾಯಿ ಆರೋಗ್ಯ ಮತ್ತು ದಂತ ವೈದ್ಯಕೀಯ ವಿಭಾಗ ಸ್ಥಾಪಿಸುವಂತೆ ದಂತವೈದ್ಯರ ಸಂಸ್ಥೆಯಿಂದ ಸರ್ಕಾರದ ಮುಂದೆ ಬೇಡಿಕೆ ಇಡಬೇಕು. ವ್ಯಕ್ತಿಯ ಆತ್ಮವಿಶ್ವಾಸ ಮತ್ತು ಘನತೆ ಬದುಕಿಗೆ ದಂತ ಆರೋಗ್ಯ ಅತಿ ಮುಖ್ಯವಾಗಿದೆ. ದೇಶದಲ್ಲಿ ಶೇ.85ರಷ್ಟು ಯುವಸಮೂಹ ಹಾಗೂ ಶೇ.80ರಷ್ಟು ಮಕ್ಕಳು ದಂತ ಸಂಬಂಧಿ ಸಮಸ್ಯೆ ಎದುರಿಸುತ್ತಿದೆ. ಇಂತಹವರಿಗೆ ಸರಿಯಾದ, ಗುಣಮಟ್ಟದ ಚಿಕಿತ್ಸೆ ಸಿಗುತ್ತಿಲ್ಲ. ಈ ಬಗ್ಗೆಯೂ ಸರ್ಕಾರಗಳು, ದಂತ ವೈದ್ಯರು ಗಮನ ಹರಿಸಬೇಕಿದೆ ಎಂದು ತಿಳಿಸಿದರು.

ದೇಶಾದ್ಯಂತ ಸಾವಿರಾರು ದಂತ ವೈದ್ಯಕೀಯ ಪದವೀಧರರು ಹೊರಬರುತ್ತಿದ್ದಾರೆ. ಆದರೆ, ಬಾಯಿ ಆರೋಗ್ಯ ಕ್ಷೇತ್ರದ ಸಂಶೋಧನೆಗೆ ಸೂಕ್ತ ಪ್ರೋತ್ಸಾಹದ ಕೊರತೆ ಇದೆ. ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಕ್ಷೇತ್ರದಲ್ಲಿ ಭಾರತೀಯರ ಕೊಡುಗೆ ಹೇಳಿಕೊಳ್ಳುವಂತಿಲ್ಲ. ಈ ನಿಟ್ಟಿನಲ್ಲಿ ಬಾಯಿ ಆರೋಗ್ಯ ಸಂಶೋಧನೆಯತ್ತಲೂ ನಮ್ಮ ವೈದ್ಯರು ಗಮನಹರಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ರಾಷ್ಟ್ರೀಯ ದಂತ ವೈದ್ಯರ ಸೊಸೈಟಿ ಅಧ್ಯಕ್ಷೆ ಡಾ.ಶಿಲ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಕಾರ್ಯದರ್ಶಿ ಡಾ.ಜಂಗಾಲ ಹರಿ, ರಾಜ್ಯ ಅಧ್ಯಕ್ಷ ಡಾ.ಸುನಿಲ್ ಧಡೇದ, ಕಾರ್ಯದರ್ಶಿ ಡಾ. ಉಮೇಶ ಪೈ, ಬಾಪೂಜಿ ದಂತ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಡಿ.ಬಿ. ನಂದೀಶ್ವರ, ಡಾ. ಐ.ಎಂ. ಅಲಿ, ಡಾ. ಎಚ್.ಎಸ್‌. ಶಶಿಧರ, ಡಾ.ಮನೋಜ ಶೆಟ್ಟಿ, ಡಾ.ಕೆ.ಟಿ.ರೂಪಾ ಇತರರು ಇದ್ದರು.

- - -

(ಕೋಟ್‌) ದಂತ ವೈದ್ಯರ ಕೈಯಲ್ಲಿ ಕೇವಲ ಸಾಧನಗಳು ಅಥವಾ ತಂತ್ರಜ್ಞಾನವಲ್ಲ ಮಾತ್ರವಲ್ಲ ಗೌರವ, ಆತ್ಮವಿಶ್ವಾಸ ಮತ್ತು ಉತ್ತಮ ಜೀವನಮಟ್ಟ ಮರುಸ್ಥಾಪಿಸುವ ಶಕ್ತಿಯೂ ಇದೆ. ದಂತವೈದ್ಯರು ಆರೋಗ್ಯ ಸೇವೆ ಒದಗಿಸುವುದಷ್ಟೇ ಅಲ್ಲ. ರೂಪ ಮತ್ತು ಕಾರ್ಯದ ಕಲೆಗಾರರೂ ಆಗಿದ್ದಾರೆ. ಜನರ ಆರೋಗ್ಯ ಕಾಪಾಡುವವರು, ಬದಲಾವಣೆಯ ರೂವಾರಿಗಳೂ ಆಗಿದ್ದಾರೆ. ಭಾರತವು ಹೊಸ ತಂತ್ರಜ್ಞಾನ ಸ್ವೀಕರಿಸುತ್ತಿರುವಾಗ ಮತ್ತು ಆಳವಾದ ದಂತ ಆರೋಗ್ಯ ಸವಾಲನ್ನು ಎದುರಿಸುತ್ತಿರುವಾಗ ಇಂತಹ ಸಮ್ಮೇಳನವು ಹೊಸ ಕಲ್ಪನೆಗಳನ್ನು ಹುಟ್ಟು ಹಾಕಲಿ.

- ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ, ದಾವಣಗೆರೆ ಕ್ಷೇತ್ರ

- - -

-1ಕೆಡಿವಿಜಿ1:

ದಾವಣಗೆರೆಯಲ್ಲಿ ಶನಿವಾರ ನಡೆದ ಭಾರತೀಯ ಪ್ರಾಸ್ತೋಡಾಂಟಿಕ್ ಸೊಸೈಟಿಯ 11ನೇ ರಾಜ್ಯಮಟ್ಟದ ಸಮ್ಮೇಳನವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿದರು.