ಹಕ್ಕು ಪಡೆಯಲು ಸಂಘಟನೆ ಅಗತ್ಯ: ಪಿ.ಬಿ.ಮಾತಿನ್

| Published : Jun 20 2025, 12:34 AM IST

ಸಾರಾಂಶ

ಆಲಮಟ್ಟಿ: ರಾಜ್ಯದಲ್ಲಿ ಕುರುಬ ಸಮುದಾಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿದ್ದು ನಮ್ಮ ಹಕ್ಕು ನಾವು ಪಡೆಯಲು ಸಂಘಟನೆ ಅಗತ್ಯ ಎಂದು ಕ್ರಾಂತಿ ವೀರಸಂಗೊಳ್ಳಿ ರಾಯಣ್ಣ ವೇದಿಕೆಯ ಮುದ್ದೇಬಿಹಾಳ ತಾಲ್ಲೂಕು ಅಧ್ಯಕ್ಷ ಪಿ.ಬಿ.ಮಾತಿನ್ ಹೇಳಿದರು.

ಆಲಮಟ್ಟಿ: ರಾಜ್ಯದಲ್ಲಿ ಕುರುಬ ಸಮುದಾಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿದ್ದು ನಮ್ಮ ಹಕ್ಕು ನಾವು ಪಡೆಯಲು ಸಂಘಟನೆ ಅಗತ್ಯ ಎಂದು ಕ್ರಾಂತಿ ವೀರಸಂಗೊಳ್ಳಿ ರಾಯಣ್ಣ ವೇದಿಕೆಯ ಮುದ್ದೇಬಿಹಾಳ ತಾಲ್ಲೂಕು ಅಧ್ಯಕ್ಷ ಪಿ.ಬಿ.ಮಾತಿನ್ ಹೇಳಿದರು.

ಆಲಮಟ್ಟಿ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ಕುರುಬ ಸಮಾಜದ ಜನಜಾಗೃತಿ ಸಮಾವೇಶದ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರುಬ ಸಮುದಾಯದ ಬೆಳವಣಿಗೆ ಉದ್ದೇಶದಿಂದ ಅಗಷ್ಟ್‌ ಮೂರನೇ ವಾರದಲ್ಲಿ ಅಖಂಡ ಜಿಲ್ಲೆಯಲ್ಲಿ ಮುಖಂಡರ ಸಮಾವೇಶವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದರು.

ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ನಮ್ಮನ್ನು ಬಳಸಿಕೊಂಡು ನಂತರ ಸಮಾಜದ ಅಭಿವೃದ್ಧಿಗೆ ಯಾವುದೇ ದೀರ್ಘಕಾಲದ ಯೋಜನೆ ಹಾಕಿಕೊಳ್ಳದೇ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.

ರಾಜಕೀಯ ಪಕ್ಷಗಳು ಅಖಂಡ ವಿಜಯಪುರ ಜಿಲ್ಲೆಯಲ್ಲಿ ಕುರುಬ ಸಮುದಾಯವನ್ನು ಕಡೆಗಣಿಸಿವೆ. ಸಮಾಜದ ಕೆಲ ಮುಖಂಡರು ಆಂತರಿಕ ಕಲಹದಿಂದ ಸಮಾಜದ ಹಿನ್ನಡೆಗೂ ಕಾರಣರಾಗಿದ್ದಾರೆ. ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕೆಲ ರಾಜ್ಯ ಮಟ್ಟದ ನಾಯಕರನ್ನು ಶೀಘ್ರವಾಗಿ ಅವಳಿ ಜಿಲ್ಲೆಯ ಮುಖಂಡರ ನೇತೃತ್ವದಲ್ಲಿ ನಿಯೋಗ ಭೇಟಿ ಮಾಡಬೇಕಿದ್ದು, ದಿನಾಂಕ ಮತ್ತು ಸ್ಥಳ ನಿಗದಿಗೊಳಿಸಲಾಗುವದು. ಸಮಾವೇಶವು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆ ಮತ್ತು ಅಹಿಂದ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ನಡೆಯಲಿದೆ ಎಂದು ತಿಳಿಸಿದರು.ಬಸವೇಶ್ವರ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಶಂಕರ ಜಲ್ಲಿ, ಕೆಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಮ್.ರಿಸಾಲ್ದಾರ್‌ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್.ಎಸ್.ಹುಡೇದ, ವೈ.ವೈ.ಪೂಜಾರಿ, ಲಕ್ಷ್ಮಣ ಬೇವೂರ, ಸಲೀಮ್ ಮುಲ್ಲಾ ಮತ್ತಿತರಿದ್ದರು.