ದೊಡ್ಡಬಳ್ಳಾಪುರ: ಒಬ್ಬ ವ್ಯಕ್ತಿ ಸುತ್ತಲೇ ಸಂಘಟನೆ ಕಟ್ಟಲು ಸಾಧ್ಯವಿಲ್ಲ. ಅದು ಎಲ್ಲರನ್ನು ಒಳಗೊಂಡಿದ್ದರೆ ಮಾತ್ರ ಜನಪರ ಕೆಲಸ ಮಾಡಲು, ಸಂಘಟನೆ ಬಲಗೊಳ್ಳಲು ಸಹಕಾರಿಯಾಗಲಿದೆ. ವ್ಯಕ್ತಿ ಕೇಂದ್ರಿತ ವ್ಯವಸ್ಥೆಗಿಂತ ಜನಕೇಂದ್ರಿತ ವ್ಯವಸ್ಥೆ ಪರಿಣಾಮಕಾರಿ ಎಂದು ನಿವೃತ್ತ ಪ್ರಾಂಶುಪಾಲ ಎಸ್.ಮಹಾಬಲೇಶ್ವರ್ ಹೇಳಿದರು.
ತಾಲೂಕಿನ ಹಾದ್ರಿಪುರ ಸಮೀಪದ ತಬರನತೋಟದಲ್ಲಿ ಕನ್ನಡ ಪಕ್ಷದ ಪದಾಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಪಕ್ಷ ಸಂಘಟನೆಯಲ್ಲಿ ಪದಾಧಿಕಾರಿಗಳ ಪಾತ್ರ ಕುರಿತು ಮಾತನಾಡಿದ ಅವರು, ಗಟ್ಟಿಯಾದ ವಿಚಾರಗಳ ಮೇಲೆ ಸಂಘಟನೆ ಕಟ್ಟಿದಾಗ ದೀರ್ಘಕಾಲ ಮುನ್ನಡೆಯಲಿದೆ. ಸ್ವಾರ್ಥ ಬದಿಗಿಟ್ಟು ಉದ್ದೇಶ ಈಡೇರಿಕೆ ಕಡೆಗೆ ಪದಾಧಿಕಾರಿಗಳು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಜನ ನಂಬುತ್ತಾರೆ. ಹಾಗೆಯೇ ಪದಾಧಿಕಾರಿಗಳು ತ್ಯಾಗಕ್ಕೂ ಸಿದ್ಧರಾಗಿದ್ದರೆ ಮಾತ್ರ ಜನಪರ ಚಳವಳಿ ಯಶಸ್ವಿಯಾಗಲಿದೆ ಎಂದರು.ಹೋರಾಟ ಮತ್ತು ಪಕ್ಷ ಸಂಘಟನೆ ಕುರಿತು ಮಾತನಾಡಿದ ವಕೀಲ ಎಂ.ಕೃಷ್ಣಮೂರ್ತಿ, ಇವತ್ತಿನ ಬಹುತೇಕ ಸಂಘಟನೆಗಳನ್ನು ಬಂಡವಾಳಶಾಹಿಗಳು ನಿಯಂತ್ರಿಸುತ್ತಿದ್ದಾರೆ. ಇದರಿಂದ ಜನಪರ ಹೋರಾಟಗಳು ವಿಫ-ಲವಾಗುತ್ತಿವೆ. ದೇಶದ ಕಾನೂನು ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡಿದರೆ ಸಂಘಟನೆಗಳು ತೀವ್ರ ಹಿನ್ನಡೆ ಕಾಣಲಿವೆ. ಹೋರಾಟಗಳನ್ನು ಗಟ್ಟಿಯಾದ ಸಿದ್ಧಾಂತ ವಿಚಾರ ಮೇಲೆ ಕಟ್ಟಬೇಕು. ತಕ್ಷಣದ ಸಮಸ್ಯೆ, ವಿಚಾರ ವಿರುದ್ಧ ಹೋರಾಟಕ್ಕಾಗಿ ಹುಟ್ಟಿಕೊಳ್ಳುವ ಸಂಘಟನೆಗಳು ದೀರ್ಘಕಾಲ ಉಳಿಯುವುದಿಲ್ಲ. ಇಂತಹ ಸಂಘಟನೆಗಳಿಂದ ಜನರಿಗೆ ದೊರೆಯುವ ಫಲಿತಾಂಶವು ಶೂನ್ಯವಾಗಲಿದೆ ಎಂದರು.
ದೊಡ್ಡಬಳ್ಳಾಪುರದ ಹೋರಾಟಗಳಲ್ಲಿ ಕನ್ನಡ ಸಂಘಟನೆಗಳ ಪಾತ್ರ ಕುರಿತು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಗೋವಿಂದರಾಜ್, 80ರ ದಶಕದಲ್ಲಿ ಇಲ್ಲಿನ ಹಿರಿಯರು ಕನ್ನಡಪರ ಸಂಘಟನೆಗೆ ಹಾಕಿರುವ ಭದ್ರಬುನಾದಿಯಿಂದಾಗಿ ಸ್ಥಳೀಯರಿಗೆ ಉದ್ಯೋಗ ಸೇರಿದಂತೆ ಹಲವಾರು ಸೌಲಭ್ಯ ದೊರೆಯಲು ಸಹಕಾರಿಯಾಗಿದೆ. ಬದಲಾಗಿರುವ ಕಾಲಮಾನದಲ್ಲಿ ಸಂಘಟನೆಗೆ ವಿದ್ಯಾವಂತ ಯುವ ಸಮುದಾಯವನ್ನು ಸೇರಿಸಿಕೊಂಡು ಪದಾಧಿಕಾರಿಗಳ ಸ್ಥಾನ ನೀಡಿದಾಗ ಮಾತ್ರ ಸಂಘಟನೆಯಲ್ಲಿ ಹೊಸ ವಿಚಾರಗಳು ಮೂಡಲು, ಸಂಘಟನೆ ಬಲಗೊಳ್ಳಲು ಸಹಕಾರಿ ಎಂದು ಹೇಳಿದರು.ತರಬೇತಿ ಶಿಬಿರದಲ್ಲಿ ರಾಜ್ಯ ರೈತ ಸಂಘದ ಹಿರಿಯ ಮುಖಂಡ ಕೆ.ಸುಲೋಚನಮ್ಮ ವೆಂಕಟರೆಡ್ಡಿ, ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯ್ಕ, ಪತ್ರಕರ್ತ ಎನ್.ಎಂ.ನಟರಾಜ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
20ಕೆಡಿಬಿಪಿ4-
ದೊಡ್ಡಬಳ್ಳಾಪುರ ತಾಲೂಕಿನ ತಬರನ ತೋಟದಲ್ಲಿ ಕನ್ನಡ ಪಕ್ಷದ ಕಾರ್ಯಕರ್ತರ ತರಬೇತಿ ಶಿಬಿರದಲ್ಲಿ ನಿವೃತ್ತ ಪ್ರಾಂಶುಪಾಲ ಎಸ್.ಮಹಾಬಲೇಶ್ವರ್ ಮಾತನಾಡಿದರು.