ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಗಣರಾಜ್ಯೋತ್ಸವವು ಕೇವಲ ಮೆರವಣಿಗೆಗಳು ಮತ್ತು ಆಚರಣೆಗಳಲ್ಲ. ಈ ಮಹಾನ್ ದೇಶದ ಪ್ರಜೆಗಳಾಗಿ ನಮ್ಮ ಕರ್ತವ್ಯಗಳ ಬಗ್ಗೆ ಯೋಚಿಸುವ ದಿನವು ಇದಾಗಿದೆ. ನಿರಂತರವಾಗಿ ಒಬ್ಬರೊನ್ನಬ್ಬರು ಗೌರವಿಸುವುದನ್ನು ಮತ್ತು ನಮ್ಮ ದೇಶವನ್ನು ಹೆಮ್ಮೆಪಡುವಂತೆ ಮಾಡಲು ನಾವು ಶ್ರಮಿಸಬೇಕು ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ, ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಕವಾಯತು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಭಾರತದಲ್ಲಿ ಸಂವಿಧಾನ ಜಾರಿಗೆ ಬಂದ ಕಾರಣ ದೇಶದ ಪ್ರತಿಯೊಬ್ಬ ಪ್ರಜೆಗೂ ಸಹ ಸಮಾನ ಶಿಕ್ಷಣ, ಪ್ರತಿಯೊಬ್ಬರಿಗೂ ಬೇಕಾದ ಮೂಲಭೂತ ಹಕ್ಕುಗಳು, ಧಾರ್ಮಿಕ ಹಕ್ಕುಗಳು ಇವೆಲ್ಲವೂ ಸಹ ದೊರಕಿದ್ದು, ಈ ದಿನಕ್ಕೆ ಇನ್ನಷ್ಟು ಮೆರುಗು ನೀಡುತ್ತವೆ. ಭಾರತದ ಸಂವಿಧಾನ ಭರವಸೆಯ ದಾರಿದೀಪವಾಗಿದೆ. ಎಲ್ಲಾ ಪ್ರಜೆಗಳಿಗೂ ನ್ಯಾಯ, ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವ ನಮ್ಮ ಬದ್ಧತೆಯ ಸಂಕೇತವಾಗಿದೆ ಎಂದರು.ಈ ದಿನ ಭಾರತವನ್ನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯವಾಗಿ ಪರಿವರ್ತಿಸಲು ಯಶಸ್ವಿಯಾದ ದಿನವೆಂದು ಮತ್ತು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಮತ್ತು ದಾರ್ಶನಿಕರ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ತ್ಯಾಗದ ಸಂಕೇತವಾಗಿದ್ದಕ್ಕೆ ನಾವು ಕೃತಜ್ಞತೆಗಳನ್ನು ಸಲ್ಲಿಸೋಣ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಜನರಿಗೆ ನೆರವಾಗಿದೆ. ಬರ ಹಿನ್ನೆಲೆ ಸಾಲ ಬಡ್ಡಿ ಮನ್ನಾಗೆ ಕ್ರಮ ಕೈಗೊಂಡಿದೆ. ಉತ್ತಮ ನಾಡು ಕಟ್ಟಲು ಸರ್ಕಾರ ಪಣತೊಟ್ಟಿದೆ. ರೈತರಲ್ಲಿ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದರು.ಈ ಸಂದರ್ಭದಲ್ಲಿ ಯಾದಗಿರಿ ವಿಧಾನಸಭಾ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ, ಜಿಪಂ ಸಿಇಒ ಗರೀಮಾ ಪನ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ್, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತರು ಹಂಪಣ್ಣ ಸಜ್ಜನ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.ಸನ್ಮಾನ
ಸಮಾಜ ಸೇವೆ, ಕಲೆ, ಸಾಹಿತ್ಯ, ಸಂಗೀತ, ಇತ್ಯಾದಿ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದಕ್ಕಾಗಿ, ರಾಷ್ಟ್ರಮಟ್ಟಕ್ಕೆ ಬಾಲವಿಜ್ಞಾನಿಯಾಗಿ ಸೈದಾಪೂರ ವಿದ್ಯಾವರ್ಧಕ ಪ್ರೌಢ ಶಾಲೆ ಕು.ಕಾವೇರಿ 10ನೇ ತರಗತಿ ಆಯ್ಕೆಯಾದ ವಿದ್ಯಾರ್ಥಿನಿಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹೊಯ್ಸಳ ಮತ್ತು ಕೆಳದಿ ಚನ್ನಮ್ಮ ಪ್ರಶಸ್ತಿಗೆ ಆಯ್ಕೆಯಾದವರಿಗೆ, ಆರೋಗ್ಯ ಇಲಾಖೆ ಸಂಬಂಧಿಸಿದ ಯೋಜನೆಯಡಿ ಅತ್ಯತ್ತಮವಾಗಿ ಕಾರ್ಯ ನಿರ್ವಹಿಸುವ ಆರೋಗ್ಯ ಸಂಸ್ಥೆಗಳಿಗೆ, ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತದಿಂದ ಆಯೋಜನೆಯಾದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೂ ಜಿಲ್ಲಾಡಳಿತದಿಂದ ಸೇವಾ ಪ್ರಶಸ್ತಿ ಪುರಸ್ಕರಿಸಲಾಯಿತು.ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಥಮ ಪ್ರಶಸ್ತಿ ವಡಗೇರಾ ಮೊರಾರ್ಜಿ ದೇಸಾಯಿ ವಸತಿ ಶಾಲೆ, ದ್ವಿತೀಯ ಪ್ರಶಸ್ತಿ ಯಾದಗಿರಿ ಸಭಾ ಪ್ರೌಢ ಶಾಲೆ ಹಾಗೂ ತಂಡ, ತೃತೀಯ ಪ್ರಶಸ್ತಿ ಯಾದಗಿರಿ ಇಕ್ರಾ ಪ್ರೌಢ ಶಾಲೆ ಮಕ್ಕಳ ತಂಡ, ಸಮಾಧನಕರ ಪ್ರಶಸ್ತಿ ಯಾದಗಿರಿ ಲಿಂಗೇರಿ ಕೋನಪ್ಪ ಪ್ರೌಢ ಶಾಲೆ ಹಾಗೂ ತಂಡ, ಹಸೇನ್ ನದಾಫ್ ಹಾಗೂ ತಂಡ ಕರಾಟೆ ತಂಡಗಳಿಗೆ ಪ್ರಶಸ್ತಿ ನೀಡಲಾಯಿತು.
ಮಾಧ್ಯಮ ಕ್ಷೇತ್ರದಲ್ಲಿ ಶಹಾಪೂರ ತಾಲೂಕಿನಲ್ಲಿ ದೋರನಹಳ್ಳಿಯ ಪತ್ರಕರ್ತ ವಿಶಾಲ ಕುಮಾರ ಶಿಂಧೆ, ಶಿಕ್ಷಣ ಕ್ಷೇತ್ರ ಯಾದಗಿರಿ ಜಿಲ್ಲೆಯ ಅಂಬೇಡ್ಕರ್ ನಗರ ದುರ್ಗಪ್ಪ ಎಚ್. ಪೂಜಾರಿ, ಕಲಾ ವಿಭಾಗ ಯಾದಗಿರಿ ಜಿಲ್ಲೆಯ ಮೈಲಾಪೂರ ಅಗಸಿ ತಪಡಗೇರ ಮಧುಕುಮಾರ ಮಲ್ಲಪ್ಪ, ಜಾನಪದ ಕಲೆ ಶಹಾಪೂರ ತಾಲೂಕಿನ ದೋರನಹಳ್ಳಿ ಭಾಗೀರಥ ಸಂಗಣ್ಣ ಮಲಗೊಂಡ ಸನ್ಮಾನಿಸಲಾಯಿತು.