ಸಾರಾಂಶ
ಲಕ್ಷ್ಮೇ ಶ್ವರ: ನಮ್ಮ ಹಬ್ಬಗಳು ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಹಿನ್ನೆಲೆ ಹೊಂದಿವೆ. ಜನಪದಗಳ ಜೊತೆಗೆ ಹಬ್ಬಗಳು ಬೆಳೆದುಬಂದಿವೆ. ಹಬ್ಬಗಳೇ ಜಾನಪದ ಸಾಹಿತ್ಯಕ್ಕೆ ಮೂಲಾಧಾರ. ನಮ್ಮ ಹಬ್ಬ ಹರಿದಿನ, ಸಂಸ್ಕೃತಿ, ಸಂಪ್ರದಾಯಗಳು ಜಾನಪದ ಸಾಹಿತ್ಯದ ಮೂಲಕ ಇಂದಿಗೂ ಜೀವಂತವಾಗಿವೆ ಎಂದು ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಾಜ ಹಣಗಿ ಅಭಿಪ್ರಾಯಪಟ್ಟರು.
ಬುಧವಾರ ಸಂಜೆ ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಸದ ಮಾತು ಮಾಲಿಕೆಯಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಹಮ್ಮಿಕೊಂಡ ಜಾನಪದ ಜಾಗರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಹಾಶಿವರಾತ್ರಿ ಜಾಗರಣೆ ಕಾರ್ಯಕ್ರಮದ ಅಂಗವಾಗಿ ನಡೆದ ಜಾನಪದ ಜಾಗರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಜ್ಞಾನ ಸಂಪನ್ಮೂಲ ಶಿಕ್ಷಕ ಈರಣ್ಣ ಗಾಣಿಗೇರ ಮಾತನಾಡಿ, ಶಿವರಾತ್ರಿ ಹಬ್ಬದ ಆಚರಣೆಯ ಹಿಂದೆ ವೈಜ್ಞಾನಿಕ ಕಾರಣವಿದೆ. ಚಳಿಗಾಲ ಕಳೆದು ಬೇಸಿಗೆ ಬರುವ ಸಂದರ್ಭದಲ್ಲಿ ಮನುಷ್ಯನ ದೇಹ ಪ್ರಕೃತಿಯ ಜೊತೆಗೆ ಹೊಂದಾಣಿಕೆ ಮಾಡಲು ಶಿವರಾತ್ರಿ ಸಹಕಾರಿಯಾಗಿರುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪತ್ರಕರ್ತ ಅಶೋಕ ಸೊರಟೂರ, ಶಿವರಾತ್ರಿ ಹಬ್ಬಕ್ಕೆ ಪೌರಾಣಿಕ, ಐತಿಹಾಸಿಕ ಪ್ರಾಮುಖ್ಯತೆ ಇದೆ. ಅದು ನಮ್ಮ ಶ್ರೀಮಂತ ಪರಂಪರೆಯ ಪ್ರತೀಕವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ ಮೆಡ್ಲೇರಿ ಮಾತನಾಡಿ, ಶಿವನ ಸಂಸಾರವು ವೈರುಧ್ಯಗಳ ಸಂಕೇತ. ಈ ವೈರುಧ್ಯಗಳ ಮೂಲಕ ಜಗದ ಸಮಸ್ತ ಜನತೆಗೆ ಸಂಸಾರದ ಭಿನ್ನಾಭಿಪ್ರಾಯ ಬದಿಗಿರಿಸಿ ಬದುಕು ಕಟ್ಟಿಕೊಳ್ಳಬೇಕು ಎಂಬ ಸಂದೇಶ ಶಿವರಾತ್ರಿ ನೀಡುತ್ತದೆ ಎಂದರು.
ಈ ವೇಳೆ ಸಮಾಜ ಸೇವಕ ಈಶ್ವರ ಗದಗ ಮಾತನಾಡಿದರು. ತಿಪ್ಪಣ್ಣ ಹಡಪದ, ಕೊಟ್ರೇಶ ಅಳವಂಡಿ, ಕ.ಸಾ.ಪ ಗೌರವ ಕಾರ್ಯದರ್ಶಿ ಮಂಜುನಾಥ ಚಾಕಲಬ್ಬಿ ಇದ್ದರು. ಜಾಗರಣೆಯ ಅಂಗವಾಗಿ ನಡೆದ ಸಂಗೀತ ಕಚೇರಿಯಲ್ಲಿ ಹನುಮಂತಸಾ ಚೌದರಿ, ಸುರೇಶ ಉಮಚಗಿ, ಪೂಜಾ ಹಬೀಬ ಸುಂದರವಾಗಿ ಹಾಡುವ ಮೂಲಕ ನೆರೆದಿದ್ದ ಪ್ರೇಕ್ಷಕರಿಗೆ ರಸದೌತಣ ಬಡಿಸಿದರು. ತಬಲಾ ವಾದಕ ಮಹಾಬಳೇಶ್ವರ ಕಡ್ಡಿಪೂಜಾರ ಸುಮಾರು ಮೂರು ಗಂಟೆಗಳ ಕಾಲ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶಿಶುನಾಳ ಶರೀಫರ ತತ್ವಪದಗಳು, ಶಿವಶರಣರ ವಚನಗಳು, ಜಾನಪದ ಗೀತೆಗಳು, ದಾಸರ ಪದಗಳು ಹಾಗೂ ಭಾವಗೀತೆ ಹಾಡಿದರು. ಬೆಳಗಿನ ಜಾವದವರೆಗೂ ನೆರೆದಿದ್ದ ಭಕ್ತರು ಭಕ್ತಿ ಭಾವದಲ್ಲಿ ತೇಲಾಡಿದರು. ನಮ್ರತಾ ಸುನೀಲ ಮೆಡ್ಲೇರಿ ಪ್ರಾರ್ಥಿಸಿದರು. ಶಿವರಾಜ ಗುಜರಿ ಸ್ವಾಗತಿಸಿದರು. ಪುರಸಭಾ ಮಾಜಿ ಉಪಾಧ್ಯಕ್ಷ ಗುರುಪುತ್ರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ.ಸಾ.ಪ ಸಂಘಟನಾ ಕಾರ್ಯದರ್ಶಿ ನಾಗರಾಜ್ ಮಜ್ಜಿಗುಡ್ಡ ನಿರೂಪಿಸಿದರು. ಸುಮಾರು ನೂರಾರು ಆಸಕ್ತ ಮಕ್ಕಳು, ಮಹಿಳೆಯರು, ಯುವಕರು, ಹಿರಿಯರು ಇದ್ದರು.