ಸಾರಾಂಶ
ಕಾವೇರಿ ನದಿಪಾತ್ರದಲ್ಲಿರುವ ಕಿರುಸೇತುವೆ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತಿದೆ ಎಂದು ರಾಮನಾಥಪುರದ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಎಚ್.ಎಸ್. ಶಂಕರ್ ಆರೋಪಿಸಿದರು. ಸೇತುವೆ ಕಾಮಗಾರಿಯನ್ನು ಶೀಘ್ರ ಮುಗಿಸಿ ದೇವಾಲಯಗಳಿಗೆ ಭಕ್ತರು ಹಾಗೂ ವಾಹನಗಳು ತಿರುಗಾಡಲು ಅನುವು ಮಾಡಿಕೊಡದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ರಾಮನಾಥಪುರ
ಕಾವೇರಿ ನದಿಪಾತ್ರದಲ್ಲಿರುವ ಕಿರುಸೇತುವೆ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತಿದೆ ಎಂದು ರಾಮನಾಥಪುರದ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಎಚ್.ಎಸ್. ಶಂಕರ್ ಆರೋಪಿಸಿದರು.ರಾಮನಾಥಪುರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ತಿಂಗಳು ಜಾತ್ರೆ ಹಾಗೂ ರಥೋತ್ಸವ ಪ್ರಾರಂಭವಾಗಲಿದೆ. ಅಷ್ಟರಲ್ಲಿ ಈ ಕಾವೇರಿ ನದಿ ದಂಡೆಯಲ್ಲಿರುವ ಕಿರು ಸೇತುವೆ ಕಾಮಗಾರಿ ಮುಗಿಸಬೇಕು. ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಿಂದ ರಾಮೇಶ್ವರ ದೇವಾಲಯಕ್ಕೆ ಹೋಗುವ ಮಧ್ಯ ಸುಮಾರು ಒಂದು ವರ್ಷದಿಂದ ಕಿರು ಸೇತುವೆ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಮುಗಿದಿಲ್ಲ. ಇದರಿಂದ ಸಂಚರಿಸಲು ಭಕ್ತರು ಪರದಾಡುವಂತಾಗಿದೆ ಎಂದು ದೂರಿದರು.
ಸಂಬಂಧಪಟ್ಟ ಅಧಿಕಾರಿಗಳು ಸೇತುವೆ ಕಾಮಗಾರಿಯನ್ನು ಶೀಘ್ರ ಮುಗಿಸಿ ದೇವಾಲಯಗಳಿಗೆ ಭಕ್ತರು ಹಾಗೂ ವಾಹನಗಳು ತಿರುಗಾಡಲು ಅನುವು ಮಾಡಿಕೊಡದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಶಂಕರ್ ಎಚ್ಚರಿಸಿದ್ದಾರೆ.ಫೋಟೋ: ಶಂಕರ್