ಅನುದಾನ ಹಂಚಿಕೆ ತಾರತಮ್ಯಕ್ಕೆ ಆಕ್ರೋಶ

| Published : Feb 13 2024, 12:45 AM IST / Updated: Feb 13 2024, 12:46 AM IST

ಸಾರಾಂಶ

ಅನುದಾನ, ತೆರಿಗೆ ಹಣ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯವೆಸಗುತ್ತಿದೆ ಎಂದು ಆರೋಪಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕಚೇರಿ ಮುಂಭಾಗ ಸೋಮ‍‍ವಾರ ಪ್ರತಿಭಟನೆ ನಡೆಸಲಾಯಿತು

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಅನುದಾನ, ತೆರಿಗೆ ಹಣ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯವೆಸಗುತ್ತಿದೆ ಎಂದು ಆರೋಪಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕಚೇರಿ ಮುಂಭಾಗ ಸೋಮ‍‍ವಾರ ಪ್ರತಿಭಟನೆ ನಡೆಸಲಾಯಿತು.

ಭದ್ರಾಮೇಲ್ದಂಡೆ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ 5300 ಕೋಟಿ ರುಪಾಯಿ ನೆರವು ನೀಡಿರುವುದಾಗಿ ಹೇಳಿದ ಕೇಂದ್ರ ಇದುವರೆಗೂ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರ ಕೇಂದ್ರದ ಮೇಲೆ ನೆಪ ಹೇಳಿಕೊಂಡು ಕಾಲ ಕಳೆಯುತ್ತಿದ್ದು ಕಾಮಗಾರಿ ಪೂರ್ಣಗೊಳಿಸು ಆಸಕ್ತಿ ಹೊಂದಿಲ್ಲ. ಇದರಿಂದಾಗಿ ಬರಪೀಡಿತ ಜಿಲ್ಲೆ ಚಿತ್ರದುರ್ಗಕ್ಕೆ ನೀರು ಹರಿಯುವುದು ಯಾವಾಗ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು?

ಕಳೆದ ನಾಲ್ಕು ವರ್ಷಗಳಿಂದ ರಾಜ್ಯಕ್ಕೆ ಸಲ್ಲಬೇಕಾದ ಜಿಎಸ್.ಟಿ ತೆರಿಗೆ ಹಣವನ್ನು ನೀಡದೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇದರಿಂದ 45 ಸಾವಿರ ಕೋಟಿ ರು. ನಷ್ಟವಾಗಿದೆ. ಬರ ಪರಿಹಾರದ ಹಣವನ್ನು ಕೂಡಲೆ ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ದ ಮತ ಚಲಾಯಿಸಬೇಕಾಗುತ್ತದೆಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಚಳ್ಳಕೆರೆ ತಾಲೂಕು ಸಿಪಿಐ ಕಾರ್ಯದರ್ಶಿ ದೊಡ್ಡ ಉಳ್ಳಾರ್ತಿ ಕರಿಯಣ್ಣ ಎಚ್ಚರಿಸಿದರು.

ಬಯಲುಸೀಮೆ ಚಿತ್ರದುರ್ಗ ಜಿಲ್ಲೆಗೆ ಹಿಂದಿನಿಂದಲೂ ಕೇಂದ್ರ ಸರ್ಕಾರ ಅನ್ಯಾಯವೆಸಗುತ್ತ ಬರುತ್ತಿದೆ. ಚಿತ್ರದುರ್ಗದಿಂದ ಆಯ್ಕೆಯಾಗಿ ಪಾರ್ಲಿಮೆಂಟ್ ಗೆ ಹೋದ ಯಾವೊಬ್ಬ ಸಂಸದರು ನಮ್ಮ ನಾಡಿನ ಪರ ಧ್ವನಿ ಎತ್ತದಿರುವುದು ವಿಪರ್ಯಾಸ. ಎಷ್ಟು ಕ್ಷೇತ್ರಗಳಲ್ಲಿ ಸಂಸದರ ಅನುದಾನದಿಂದ ಅಭಿವೃದ್ದಿಯಾಗಿದೆ ಎನ್ನುವುದಕ್ಕೆ ಶ್ವೇತಪತ್ರ ಹೊರಡಿಸಬೇಕೆಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ಸಿ.ಸುರೇಶ್‍ಬಾಬು ಒತ್ತಾಯಿಸಿದರು.

ಸಿಪಿಐ ರಾಜ್ಯ ಮಂಡಳಿ ಸದಸ್ಯರುಗಳಾದ ಸಿ.ವೈ.ಶಿವರುದ್ರಪ್ಪ, ಟಿ.ಆರ್.ಉಮಾಪತಿ, ಸಹ ಕಾರ್ಯದರ್ಶಿ ವಿ.ಎಚ್.ಹನುಮಂತಪ್ಪ,ಎಸ್.ಸಿ.ಕುಮಾರ್, ಜಾಫರ್ ಷರೀಫ್, ಎನ್.ಸಿ.ಕುಮಾರಸ್ವಾಮಿ, ಅಮಿನಾಭಿ, ಎಂ.ಬಿ.ಜಯದೇವಮೂರ್ತಿ, ಬಿ.ರಾಜಣ್ಣ, ಸತ್ಯಕೀರ್ತಿ, ಎಂ.ವೆಂಕಟೇಶ್, ಡಿ.ನಿರ್ಮಲ, ಇ. ಚಂದ್ರಮತಿ, ತಿಪ್ಪೇಸ್ವಾಮಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.