ಪದಾಳ ಸುಬ್ರಹ್ಮಣ್ಯ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ರಚನೆ ಸಭೆ

| Published : Jul 23 2024, 12:31 AM IST

ಪದಾಳ ಸುಬ್ರಹ್ಮಣ್ಯ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ರಚನೆ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಉಪ್ಪಿನಂಗಡಿಯ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವಳದ ಬ್ರಹ್ಮಕಲಶೋತ್ಸವ ನಿಮಿತ್ತ ಉಪ ಸಮಿತಿಗಳ ರಚನೆ ಮತ್ತು ಸಂಚಾಲಕರ ನೇಮಕ ಸಭೆ ನಡೆಯಿತು. ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಜಿ ಅಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಬ್ರಹ್ಮಕಲಶೋತ್ಸವ ಎಂದರೆ ಕ್ಷೇತ್ರದಲ್ಲಿ ದೇವರ ಸಾನಿಧ್ಯ ವೃದ್ಧಿಯಾಗುವುದಲ್ಲದೆ ಊರಿನ ಪ್ರತಿ ಮನೆಯೂ ಮನವೂ ಅಭಿವೃದ್ಧಿಯಾಗುವುದು. ಬ್ರಹ್ಮಕಲಶೋತ್ಸವದ ದಿನ ದೇವಾಲಯಕ್ಕೆ ಬಂದ ಪ್ರತಿಯೊಬ್ಬ ಭಕ್ತರಿಗೂ ಮಂತ್ರಾಕ್ಷತೆ ಸಹಿತ ತೀರ್ಥಪ್ರೋಕ್ಷಣೆಗೈಯುವ ಕಾರ್ಯ ನಡೆಯಬೇಕೆಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು. ಅವರು ಭಾನುವಾರ ಉಪ್ಪಿನಂಗಡಿಯ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವಳದ ಬ್ರಹ್ಮಕಲಶೋತ್ಸವ ನಿಮಿತ್ತ ಉಪ ಸಮಿತಿಗಳ ರಚನೆ ಮತ್ತು ಸಂಚಾಲಕರ ನೇಮಕ ಸಭೆಯಲ್ಲಿ ಮಾತನಾಡಿದರು. ಶ್ರೇಷ್ಠಮಟ್ಟದಲ್ಲಿರಬೇಕು. ಬ್ರಹ್ಮಕಲಶೋತ್ಸವದ ಎಲ್ಲಾ ದಿನಗಳಲ್ಲಿ ಊರವರಿಗೆ ಮತ್ತು ಬಂದ ಭಕ್ತಾದಿಗಳಿಗೆ ದೇವಾಲಯದಲ್ಲಿಯೇ ಮೂರು ಹೊತ್ತಿನ ಊಟೋಪಚಾರ ಲಭಿಸುವಂತಾಗಬೇಕು. ಪ್ರತಿ ಮನೆಯಿಂದಲೂ ಕನಿಷ್ಠ ೫ಸಾವಿರ ವಂತಿಗೆಯನ್ನು ಸ್ವಯಂಪ್ರೇರಿತರಾಗಿ ನೀಡಿದರೆ ಕಾರ್ಯಕ್ರಮವನ್ನು ಉತ್ತಮವಾಗಿ ನಡೆಸಬಬಹುದು ಎಂದರು. ಅನ್ನಸಂತರ್ಪಣೆಗೆ ತಮ್ಮ ವೈಯಕ್ತಿಕ ನೆಲೆಯಲ್ಲಿ 1 ಲಕ್ಷ ರು. ಘೋಷಿಸಿದರು.

ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಜಿ ಅಶೀರ್ವಚನ ನೀಡಿ, ಊರ ದೇವಾಲಯದ ಅಭಿವೃದ್ಧಿಯಿಂದ ಊರಿನ ಸಮಸ್ತರ ಅಭಿವೃದ್ಧಿಯೂ ಆಗುವುದು. ಈ ನಿಟ್ಟಿನಲ್ಲಿ ಭಕ್ತರು ತ್ರಿಕರಣಪೂರ್ವಕ ಶ್ರೀ ದೇವರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಸಭೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಮುಂದಾಳು ಅರುಣ್ ಕುಮಾರ್ ಪುತ್ತಿಲ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಡಾ. ರಾಜಾರಾಮ ಕೆ.ಬಿ., ನಿವೃತ್ತ ಸೇನಾಧಿಕಾರಿ ಚಂದಪ್ಪ ಮೂಲ್ಯ ಮಾತನಾಡಿದರು.

ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಉದಯಶಂಕರ್ ಭಟ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಜಗದೀಶ್ ರಾವ್ ಮಣಿಕ್ಕಳ, ಸಮಿತಿ ಉಪಾಧ್ಯಕ್ಷ ಪ್ರತಾಪ್ ಪೆರಿಯಡ್ಕ, ಪ್ರಧಾನ ಕಾರ್ಯದರ್ಶಿ ಎನ್. ಜಯಗೋವಿಂದ ಶರ್ಮ, ಕೇಶವ ಗೌಡ ರಂಗಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅವನೀಶ್ ಪಿ. ಮತ್ತು ಸುರೇಶ್ ಅತ್ರಮಜಲು ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ಮುಂದಾಳುಗಳಾದ ಕಂಗ್ವೆ ವಿಶ್ವನಾಥ ಶೆಟ್ಟಿ, ರಾಮಚಂದ್ರ ಮಣಿಯಾಣಿ, ಸುನಿಲ್ ಕುಮಾರ್ ದಡ್ಡು, ಶಾಂಭವಿ ರೈ, ಹರೀಶ್ವರ ಮೊಗ್ರಾಲ್, ಬೊಳ್ಳಾವು ಶಂಕರ ನಾರಾಯಣ ಭಟ್, ಲಕ್ಷ್ಮಣ ಗೌಡ ನೆಡ್ಚಿಲ್, ವಿದ್ಯಾಧರ ಜೈನ್, ನವೀನ್ ಕುಮಾರ್ ಕಲ್ಯಾಟೆ, ಸುರೇಶ್ ಗೌಂಡತ್ತಿಗೆ, ಚಂದ್ರಶೇಖರ್ ಮಡಿವಾಳ ಮತ್ತಿತರರು ಭಾಗವಹಿಸಿದ್ದರು.