ಸಾರಾಂಶ
ಗಂಗಾವತಿ ತಾಲೂಕಿನಾದ್ಯಂತ ಧಾರಾಕಾರ ಮಳೆ
ಕನ್ನಡಪ್ರಭ ವಾರ್ತೆ ಗಂಗಾವತಿನಗರ ಸೇರಿದಂತೆ ತಾಲೂಕಿನಾದ್ಯಂತ ಸೋಮವಾರ ರಾತ್ರಿ ಧಾರಾಕಾರ ಮಳೆ ಸುರಿದ ಪರಿಣಾಮವಾಗಿ ಬತ್ತದ ಗದ್ದೆಗಳು ಜಲಾವೃಗೊಂಡಿವೆ. ಅಲ್ಲದೆ ಗಂಗಾವತಿ, ವೆಂಕಟಗಿರಿ ಮತ್ತು ಮರಳಿ ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದೆ.
ಸಮೀಪದ ಜಂಗಮರ ಕಲ್ಗುಡಿ, ಮರಳಿ, ಶ್ರೀರಾಮನಗರ, ಹೊಸಕೇರಾ, ಹೊಸಕೇರಾ ಕ್ಯಾಂಪ್ ಗಳಲ್ಲಿ ಬತ್ತ ನಾಟಿ ಮಾಡಿದ ಗದ್ದೆಗಳಿಗೆ ನೀರು ನುಗ್ಗಿದ್ದರಿಂದ ಜಲಾವೃತಗೊಂಡಿವೆ. ಇದರಿಂದ ನಾಟಿ ಮಾಡಿ ಬತ್ತದ ಫಸಲು ಕಿತ್ತು ಹೋಗಿವೆ.200ಕ್ಕೂ ಹೆಚ್ಚು ಎಕರೆ ಬತ್ತದ ಗದ್ದೆಗಳಲ್ಲಿ ನೀರು ತುಂಬಿದ್ದರಿಂದ ಈಚೇಗೆ ನಾಟಿ ಮಾಡಿದ ಸಸಿಗಳು ಹಾನಿಯಾಗಿವೆ.
ಮನೆಗಳಿಗೆ ಹಾನಿ:ನಗರದ ಜೈ ಭೀಮನಗರ 5, ಹಿರೇಜಂತಗಲ್ 1, ವೆಂಕಟಗಿರಿ ಹೋಬಳಿಗಳಲ್ಲಿ 4, ಮರಳಿ ಹೋಬಳಿಗಳಲ್ಲಿ 6 ಮನೆಗಳು ಸೇರಿದಂತೆ 16 ಮನೆಗಳಿಗೆ ಹಾನಿಯಾಗಿದೆ. ಅಲ್ಲದೆ ಕೆಲ ವಾರ್ಡುಗಳ ಗುಡಿಸಲುಗಳಲ್ಲಿ ನೀರು ನುಗ್ಗಿವೆ. ಸ್ಥಳಕ್ಕೆ ಪೌರಾಯುಕ್ತ ವಿರೂಪಾಕ್ಷಮೂರ್ತಿ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಖಾಸಗಿ ಶಾಲೆಗೆ ರಜೆ:ಧಾರಾಕಾರ ಮಳೆ ಪರಿಣಾಮವಾಗಿ ನಗರದ ಕೆಲ ಶಾಲೆಗಳ ಆವರಣದಲ್ಲಿ ನೀರು ನುಗ್ಗಿದೆ. ಲಿಟಲ್ ಹಾರ್ಟ್ಸ್ ಆಂಗ್ಲ ಮಾಧ್ಯಮ ಶಾಲೆಯ ಆವರಣ ಮತ್ತು ರಸ್ತೆಯಲ್ಲಿ ನೀರು ತುಂಬಿದ್ದರಿಂದ ವಿದ್ಯಾರ್ಥಿಗಳು ಹೋಗಿ ಬರಲು ತೊಂದರೆಯಾಗುತ್ತಿದೆ ಎಂಬ ಕಾರಣಕ್ಕೆ ರಜೆ ಘೋಷಿಸಲಾಗಿತ್ತು.
ಕಿತ್ತು ಹೋದ ರಸ್ತೆಗಳು:ಇಡೀ ರಾತ್ರಿ ಸುರಿದ ಮಳೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ ರಸ್ತೆಗಳು ಕಿತ್ತು ಹೋಗಿವೆ. ತಾಲೂಕಿನ ಮರಳಿ, ಶ್ರೀರಾಮನಗರ, ಡಣಾಪುರ, ಜಂಗಮರ ಕಲ್ಗುಡಿ ಕ್ಯಂಪ್, ಹೊಸಕೇರಾ ಕ್ಯಾಂಪ್ ಗಳಿಗೆ ಹೋಗುವ ರಸ್ತೆಗಳು ಮಳೆಯ ನೀರಿನ ರಭಸಕ್ಕೆ ಕಿತ್ತು ಹೋಗಿವೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದ್ದಲ್ಲದೆ, ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬರುವ ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಸ್ಗಾಗಿ ಪರದಾಡಿದರು.
ನದಿಯಂತೆ ಹರಿದ ಹಳ್ಳಗಳು:ಇಡೀ ರಾತ್ರಿ ಸುರಿದ ಮಳೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿರುವ ಹಳ್ಳಗಳು ನದಿಯಂತಾಗಿ ಹರಿದಿವೆ. ನಗರದ ದುರಗಮ್ಮನ ಹಳ್ಳ, ಮರಳಿ ಹಳ್ಳ, ಹೊಸಕೇರಾ, ಪಚ್ಚೆ ಹಳ್ಳ, ಹಿರೇ ಹಳ್ಳಗಳಿಗೆ ನೀರು ಭರ್ತಿಯಾಗಿದ್ದರಿಂದ ನದಿಯಂತೆ ಹರಿದಿವೆ. ಕೆಲ ಹಳ್ಳು ಆತಿಕ್ರಮಣವಾಗಿದ್ದರಿಂದ ಹಳ್ಳದ ನೀರು ಹೊಲ ಗದ್ದೆಗಳಿಗೆ ನುಗ್ಗಿದ್ದರಿಂದ ಬತ್ತ ಫಸಲು ಕಿತ್ತಿ ಹೋಗಿವೆ.