ಸಾರಾಂಶ
ಶಿರ್ವ ಸಮೀಪದ ಕುರ್ಕಾಲು ಗ್ರಾಮದ ಬಿಜಂಟ್ಲ ಉಮೇಶ ಆಚಾರ್ಯರ ಗದ್ದೆಯಲ್ಲಿ ಪಡುಬೆಳ್ಳೆ ಶ್ರೀನಾರಾಯಣಗುರು ಆಂಗ್ಲ ಮಾಧ್ಯಮ ಶಾಲಾ ಇಂಟರ್ಯಾಕ್ಟ್ ಹಾಗೂ ಸ್ಕೌಟ್-ಗೈಡ್ಸ್ನ ಮಕ್ಕಳು ಗದ್ದೆಗಿಳಿದು ಭತ್ತದ ನಾಟಿ ಕಾರ್ಯದ ಬಗ್ಗೆ ಪ್ರಾತ್ಯಕ್ಷಿಕೆಯ ಅನುಭವ ಪಡೆದರು.
ಕನ್ನಡಪ್ರಭ ವಾರ್ತೆ ಕಾಪು
ಇಲ್ಲಿನ ಶಿರ್ವ ಸಮೀಪದ ಕುರ್ಕಾಲು ಗ್ರಾಮದ ಬಿಜಂಟ್ಲ ಉಮೇಶ ಆಚಾರ್ಯರ ಗದ್ದೆಯಲ್ಲಿ ಪಡುಬೆಳ್ಳೆ ಶ್ರೀನಾರಾಯಣಗುರು ಆಂಗ್ಲ ಮಾಧ್ಯಮ ಶಾಲಾ ಇಂಟರ್ಯಾಕ್ಟ್ ಹಾಗೂ ಸ್ಕೌಟ್-ಗೈಡ್ಸ್ನ ಮಕ್ಕಳು ಗದ್ದೆಗಿಳಿದು ಭತ್ತದ ನಾಟಿ ಕಾರ್ಯದ ಬಗ್ಗೆ ಪ್ರಾತ್ಯಕ್ಷಿಕೆಯ ಅನುಭವ ಪಡೆದರು.ಉಮೇಶ ಆಚಾರ್ಯ ಅವರು ಸಿದ್ಧಗೊಳಿಸಿಟ್ಟ ಭತ್ತದ ಸಸಿಗಳನ್ನು ಕೈಯಿಂದ ಗದ್ದೆಯಲ್ಲಿ ನಾಟಿ ಮಾಡಿ ಖುಷಿ ಪಟ್ಟರು. ರೈತರ ಶ್ರಮದಾಯಕ ಕಾಯದ ಬಗ್ಗೆಯೂ ಮಾಹಿತಿ ಪಡೆದರು.
ವಿದ್ಯಾರ್ಥಿಗಳೊಂದಿಗೆ ಶಾಲಾ ಮುಖ್ಯ ಶಿಕ್ಷಕರಾದ ರಾಘವೇಂದ್ರ ಸಾಲಿಯಾನ್, ಇಂಟರ್ಯಾಕ್ಟ್ ಸಂಯೋಜಕಿ ವೀಣಾ ಆಚಾರ್ಯ, ಸ್ಕೌಟ್ ಮಾಸ್ಟರ್ಗಳಾದ ನೀತಾ ಪೂಜಾರಿ, ಸಬಿತಾ, ವಾಣಿ, ಗೈಡ್ಸ್ ಕ್ಯಾಪ್ಟನ್ ಅನಸೂಯಾ ರಾವ್, ದೈಹಿಕ ಶಿಕ್ಷಣ ಶಿಕ್ಷಕಿ ಸ್ವಾತಿ, ಸ್ಕೂಲ್ ಬಸ್ ಸಾರಥಿಗಳಾದ ಮಂಜುನಾಥ ಪೂಜಾರಿ, ವಸಂತ, ಸಹಾಯಕರಾದ ಪ್ರಮೋದಿನಿ, ಶೈಲಜಾ, ದಾಮೋದರ, ವಸಂತ, ಜಯಂತಿ, ಸುನೀತಾ ಮೊದಲಾದವರು ಗದ್ದೆಗಿಳಿದು ವಿದ್ಯಾರ್ಥಿಗಳೊಂದಿಗೆ ಸಾಥ್ ನೀಡಿದರು.ಕಟಪಾಡಿ ಗ್ರಾ.ಪಂ. ಸದಸ್ಯೆ ಶಾಲಿನಿಚಂದ್ರ ಪೂಜಾರಿ ಇವರೂ ಗದ್ದೆಗಿಳಿದು ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡರು. ವಿದ್ಯಾರ್ಥಿ ಸಮೂಹವು ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೂ ಎರಡು ಗದ್ದೆಗಳಲ್ಲಿ ನಾಟಿ ಕಾರ್ಯ ಪೂರೈಸಿದರು. ಯಜಮಾನರಾದ ಉಮೇಶ್ ಆಚಾರ್ಯ, ಲೀಲಾವತಿ ಆಚಾರ್ಯ ದಂಪತಿ ವಿದ್ಯಾರ್ಥಿಗಳಿಗೆ ಉಪಾಹಾರದ ವ್ಯವಸ್ಥೆ ಮಾಡಿದ್ದರು.ಬೆಳಗ್ಗೆ ಜರುಗಿದ ಸರಳ ಕಾರ್ಯಕ್ರಮದಲ್ಲಿ ಸ್ಕೌಟ್ ಮತ್ತು ಗೈಡ್ಸ್ ಇದರ ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಸುಮನ್ಶೇಖರ್, ಜಿಲ್ಲಾ ಸ್ಕೌಟ್ ಆಯುಕ್ತರಾದ ಜನಾರ್ದನ ಕೊಡವೂರು, ಜಿಲ್ಲಾ ಕಾರ್ಯದರ್ಶಿ ಆನಂದ್ ಬಿ. ಅಡಿಗ ಇವರು ಭತ್ತದ ನಾಟಿ ಕಾರ್ಯಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಸಕಾಲಿಕ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಉಮೇಶ್ ಆಚಾರ್ಯರವರನ್ನು ಸನ್ಮಾನಿಸಲಾಯಿತು. ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಚಂದ್ರ ಪೂಜಾರಿ ಸಹಕರಿಸಿದರು. ಶಾಲಾ ಮುಖ್ಯಶಿಕ್ಷಕರಾದ ರಾಘವೇಂದ್ರ ಸಾಲಿಯಾನ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅನಸೂಯ ರಾವ್ ನಿರೂಪಿಸಿದರು. ವಾಣಿ ವಂದಿಸಿದರು.