ಸಾರಾಂಶ
ಯಾರಿಗೇ ಆದರೂ ದೇಶದ ಬಗ್ಗೆ ಅಭಿಮಾನ ಬೇಕು । ಜನರ ದುಡ್ಡಲ್ಲಿ ಕಾಂಗ್ರೆಸ್ನಿಂದ ಸಮಾವೇಶ
ಕನ್ನಡಪ್ರಭ ವಾರ್ತೆ ಹಾಸನಬೇರೆ ದೇಶದ ಪರ ಘೋಷಣೆ ಕೂಗುವುದು ಯಾವುದೇ ಕಾರಣಕ್ಕೂ ಸರಿಯಲ್ಲ. ವಿಧಾನಸೌದದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಬೇಸರ ತಂದಿದ್ದು, ಕಿಡಿಗೇಡಿಗಳು ಮಾತ್ರ ಹೀಗೆ ಮಾಡುತ್ತಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಸಂಸದರ ನಿವಾಸದಲ್ಲಿ ಬುಧವಾರ ಮಾಧ್ಯಮದೊಂದಿಗೆ ರಾಜ್ಯಸಭೆ ಚುನಾವಣೆ ಬಳಿಕ ವಿಧಾನಸಭೆಯಲ್ಲಿ ಪಾಕ್ ಪರ ಘೋಷಣೆ ವಿಚಾರವಾಗಿ ಮಾತನಾಡಿ, ‘ಯಾರೇ ಆಗಿದ್ದರೂ ಕೂಡ ನಮ್ಮ ದೇಶದ ಬಗ್ಗೆ ಅಭಿಮಾನ ಇರಬೇಕು. ಬೇರೆ ದೇಶದ ಪರ ಕೂಗೋದು ಯಾವುದೇ ಕಾರಣದಿಂದ ಸರಿಯಲ್ಲ. ನೂತನವಾಗಿ ಆಯ್ಕೆಯಾದ ನಾಸಿರ್ ಅವರು ಗೆದ್ದ ಬಳಿಕ ಅವರು ನಡೆದುಕೊಂಡ ರೀತಿ ಸರಿಯಲ್ಲ, ಅವರು ಭಾರತೀಯನಾಗಿ ಗೆದ್ದಿದ್ದನ್ನು ಅರಿತು ಹಾಗೆ ಕೂಗಿದವರಿಗೆ ತಿಳಿ ಹೇಳಬೇಕಿತ್ತು. ಅದು ಬಿಟ್ಟು ಮಾದ್ಯಮದ ಬಗ್ಗೆ ಅವರ ಪರ ಹೇಳಿಕೆ ನೀಡಿದ್ದು ಬೇಸರ ತರಿಸಿದೆ. ಪ್ರತಿಯೊಬ್ಬ ಮುಸ್ಲಿಂ ಕೂಡ ರಾಷ್ಟ್ರೀಯ ಹಬ್ಬ ಆಚರಿಸಿ ನಮ್ಮ ಹಬ್ಬಗಳ ಬಗ್ಗೆಯೂ ಸೌಹಾರ್ದವಾಗಿ ನಡೆದುಕೊಳ್ಳುತ್ತಾರೆ. ಆದರೆ ಕೆಲ ಕಿಡಿಗೇಡಿಗಳು ಹೀಗೆ ಮಾಡುತ್ತಾರೆ. ಆದರೆ ನಾಯಕರಾದವರು ಇಂತಹವರಿಗೆ ಸರಿಯಾದ ತಿಳಿ ಹೇಳಬೇಕು. ಅದು ಬಿಟ್ಟು ಅವರು ಮಾದ್ಯಮದ ಮೇಲೆ ಸಿಟ್ಟು ಹೊರ ಹಾಕಿದ್ದು ಸರಿಯಲ್ಲ. ನಾವು ಭಾರತೀಯರಾಗಲು ಹೆಮ್ಮೆ ಇರಬೇಕು’ ಎಂದು ಹೇಳಿದರು.‘ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಒಂದು, ಕಾಂಗ್ರೆಸ್ ಮೂರು ಹಾಗೂ ಜೆಡಿಎಸ್ ಒಂದು ಅಭ್ಯರ್ಥಿ ಇದ್ದರು. ಅವರ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಶ್ರಮ ಹಾಕಿದ್ದಾರೆ. ಸ್ವತಂತ್ರ ಶಾಸಕರು ಈ ಸರ್ಕಾರದ ದುರಾಡಳಿತದ ವಿರುದ್ಧ ಮತ ಚಲಾಯಿಸುವ ನಿರೀಕ್ಷೆ ಇತ್ತು. ಆದರೆ ಎಲ್ಲೋ ಒಂದು ಕಡೆ ನಮ್ಮ ನಿರೀಕ್ಷೆ ಫಲ ನೀಡಿಲ್ಲ. ಕಾಂಗ್ರೆಸ್ನವರು, ಜೆಡಿಎಸ್ ಒಡೆದು ಹೋಗಿದೆ, ನಮ್ಮ ಶಾಸಕರು ಅಡ್ಡ ಮತದಾನ ಮಾಡುತ್ತಾರೆ ಎಂದುಕೊಂಡಿದ್ದರು. ಆದರೆ ಈ ವಿಚಾರದಲ್ಲಿ ಕಾಂಗ್ರೆಸ್ಗೆ ಸೋಲಾಗಿದೆ. ನಮ್ಮ ಶಾಸಕರು ಒಗ್ಗಟ್ಟಿನಿಂದ ಇದ್ದೇವೆ ಎಂದು ತೋರಿಸಿಕೊಟ್ಟಿದ್ದಾರೆ. ಚುನಾವಣೆಯಲ್ಲಿ ಸೋಲು ಗೆಲುವು ಸಹಜವಾಗಿದೆ, ಅಡ್ಡ ಮತದಾನ ಮಾಡಿರುವವರ ವಿರುದ್ಧ ಕ್ರಮಕ್ಕಾಗಿ ಸ್ಪೀಕರ್ ಅವರಿಗೆ ದೂರು ನೀಡಲಾಗಿದೆ. ಸ್ಪೀಕರ್ ಅವರು ಪಾರದರ್ಶಕವಾಗಿ ನಡೆದುಕೊಳ್ಳಬೇಕು’ ಎಂದು ತಿಳಿಸಿದರು.
‘ಹಾಸನಕ್ಕೆ ಸಿಎಂ ಬರುತ್ತಿದ್ದಾರೆ ಸಂತೋಷ. ಆದರೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಶಂಕುಸ್ಥಾಪನೆ ಆದ ಯೋಜನೆಗೆ ಮತ್ತೆ ಶಂಕುಸ್ಥಾಪನೆ ಮಾಡಲು ಹೊರಟಿರುವುದು ಖಂಡನೀಯ. ಇವರು ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಅನುದಾನ ಕೊಟ್ಟಿಲ್ಲ. ಹಾಸನದ ರೈಲ್ವೆ ಮೇಲ್ಸೇತುವೆಗೆ ಇವರು ೪೮ ಕೋಟಿ ರು, ಅನುದಾನ ಕೊಡಲು ಆಗಲಿಲ್ಲ. ಇವರು ಜಿಲ್ಲೆಗೆ ಯಾವ ಅನುದಾನ ಕೊಟ್ಟಿದ್ದಾರೆ. ಸಿಎಂ ಭೇಟಿ ಕೇವಲ ರಾಜಕೀಯ ಪ್ರಚಾರ ತಂತ್ರ. ಬಜೆಟ್ನಲ್ಲಿ ಇವರಿಗೆ ಹಾಸನದ ಬಗ್ಗೆ ಇರುವ ಪ್ರೀತಿ ಗೊತ್ತಾಗುತ್ತದೆ. ಇದಕ್ಕೆಲ್ಲಾ ಜನರು ಮುಂದಿನ ದಿನಗಳಲ್ಲಿ ಉತ್ತರ ಕೊಡುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.‘ಸರ್ಕಾರದ ಹಣದಲ್ಲಿ ಸಭೆ ಮಾಡಿ ಹೇಗೆ ರಾಜಕೀಯ ಭಾಷಣ ಮಾಡುತ್ತಾರೆ. ರಾಜಕೀಯ ಮಾತಾಡುವುದಾದರೆ ಇವರು ಕಾಂಗ್ರೆಸ್ ಸಮಾವೇಶ ಮಾಡಲಿ. ಸರ್ಕಾರಿ ಯಂತ್ರ ಉಪಯೋಗಿಸಿ ಇವರು ರಾಜಕೀಯ ಹೇಗೆ ಮಾತನಾಡುತ್ತಾರೆ. ಎಲ್ಲವನ್ನೂ ಜನರು ಗಮನಿಸುತ್ತಾರೆ. ಸಿಎಂ ಅವರ ಮಾರ್ಚ್ನ ಕಾರ್ಯಕ್ರಮಕ್ಕೆ ಮೂರು ಕೋಟಿ ರು. ಖರ್ಚಾಗುತ್ತದೆ. ಇದು ಜನರ ದುಡ್ಡು ಅಲ್ಲವೇ? ಇವರು ಕಾರ್ಯಕ್ರಮಕ್ಕೆ ಖರ್ಚು ಮಾಡಿದಷ್ಟು ಹಣವನ್ನಾದರೂ ಹಾಸನದ ಜನತೆಗೆ ಅನುದಾನ ಕೊಟ್ಟಿಲ್ಲ, ಜನರ ದುಡ್ಡಲ್ಲಿ ಕಾಂಗ್ರೆಸ್ ಸಮಾವೇಶ ಮಾಡುತ್ತಿದ್ದಾರೆ. ಇಂತಹ ಕಾರ್ಯಕ್ರಮದ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದು ಜೆಡಿಎಸ್ ಸಂಸದ ಪ್ರಜ್ವಲ್ ಕಿಡಿಕಾರಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ.