ಸಾರಾಂಶ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿರುವ ಸಿಬ್ಬಂದಿ ಯಾವುದೇ ಕಲೆಯ ಹಿನ್ನೆಲೆ ಇಲ್ಲದ ತಮ್ಮ ಕುಟುಂಬದವರ ಹೆಸರಿನಲ್ಲಿ ಕಾರ್ಯಕ್ರಮ ನೀಡಿದ್ದಾರೆ
ಕನ್ನಡಪ್ರಭ ವಾರ್ತೆ ಮೈಸೂರು
ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಕಲಾವಿದರಿಗಾದ ಅನ್ಯಾಯವನ್ನು ಖಂಡಿಸಿ ಕರ್ನಾಟಕ ರಾಜ್ಯ ನೊಂದ ಬಡ ಕಲಾವಿದರ ಒಕ್ಕೂಟದವರು ಮೈಸೂರು ಅರಮನೆ ಕೋಟೆ ಆಂಜನೇಯ ದೇವಸ್ಥಾನ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟಿಸಿದರು.ದಸರಾ ಮಹೋತ್ಸವದಲ್ಲಿ ಒಂದೇ ವ್ಯಕ್ತಿಗೆ ಐದಾರು ಕಾರ್ಯಕ್ರಮಗಳನ್ನು ನೀಡಿ ಸಾಂಸ್ಕೃತಿಕ ಉಪ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅರಮನೆ ಆಡಳಿತ ಮಂಡಳಿಯ ಅಧಿಕಾರಿ ವರ್ಗವು ಬಡ ಕಲಾವಿದರಿಗೆ ಅನ್ಯಾಯ ಎಸಗಿದೆ. 2012ರಿಂದ ಒಂದೇ ವ್ಯಕ್ತಿಗೆ ಕಾರ್ಯಕ್ರಮ ನೀಡುತ್ತಿದ್ದು, ಅವರು ಅಧಿಕಾರಿಗಳಿಗೆ ಲಂಚ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿರುವ ಸಿಬ್ಬಂದಿ ಯಾವುದೇ ಕಲೆಯ ಹಿನ್ನೆಲೆ ಇಲ್ಲದ ತಮ್ಮ ಕುಟುಂಬದವರ ಹೆಸರಿನಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಇಲಾಖೆಯಲ್ಲಿ ನಮ್ಮ ಅರ್ಜಿ ಸ್ವೀಕರಿಸಲು ಹಿಂಜರಿಯುವ ಅಧಿಕಾರಿಗಳು, ಈ ಬಗ್ಗೆ ಯಾಕೆ ಕ್ರಮ ವಹಿಸುತ್ತಿಲ್ಲ. ಹೀಗಾಗಿ, ಸರ್ಕಾರವು ಎಚ್ಚೆತ್ತು ಈ ಅನ್ಯಾಯದ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.ಸಂಗೀತ ನಾದಸ್ವರ, ಡೋಲು, ಜನಪದ ತಂಡದವರು ಎಲ್ಲಾ ಸರ್ಕಾರಿ ಹಾಗೂ ರಾಜಕಾರಣಿಗಳ ಕಾರ್ಯಕ್ರಮಕ್ಕೆ ತೆರಳಿ ಸಹಕರಿಸುತ್ತೇವೆ. ಅವರು ನಮ್ಮ ಸಮಸ್ಯೆಯ ಬಗ್ಗೆ ಗಮನ ನೀಡಬೇಕು. ಇಲಾಖೆಯೊಳಗೆ ಕಲಾವಿದರನ್ನು ಕಡೆಗಣಿಸುತ್ತಿರುವ ಬಗ್ಗೆ ಗಮನ ಹರಿಸಿ, ಕ್ರಮ ಕೈಗೊಳ್ಳುವ ಮೂಲಕ ಬಡ ಕಲಾವಿದರಿಗೆ ಅನ್ಯಾಯ ತಪ್ಪಿಸಬೇಕು ಎಂದು ಅವರು ಆಗ್ರಹಿಸಿದರು.ಒಕ್ಕೂಟದ ಎಂ. ರಮೇಶ್, ಪಿ. ಶ್ರೀನಿವಾಸ, ಶ್ರೀ ಶೇಷಾದ್ರಿ ಸ್ವಾಮೀಜಿ, ರಾಜೇಶ್ ಆದ್ಯಾಪುರ, ಮಂಜುನಾಥ್, ಧನರಾಜ್, ಅಶೋಕ್ ಕುಮಾರ್, ಮಧುಕುಮಾರ್, ಮೋಹನ, ರಾಮಚಂದ್ರ, ಪ್ರದೀಪ್, ಪ್ರಕಾಶ್, ಕುಮಾರ್, ತ್ಯಾಗರಾಜ್ ಮೊದಲಾದವರು ಇದ್ದರು.