ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಪರ್ಯಾಯ ಪುತ್ತಿಗೆ ಮಠದ ವತಿಯಿಂದ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಭಾನುವಾರ ಪಂಚವಾದ್ಯಂ ರಜತಪೀಠಪುರಂ ತಂಡದ 6ನೇ ವಾರ್ಷಿಕೋತ್ಸವ ಅಂಗವಾಗಿ ವಿಶೇಷ ಪಂಚವಾದ್ಯ ಹಾಗೂ ಚೆಂಡೆವಾದ್ಯ ವಾದನ ನಡೆಯಿತು. ಕೇರಳದ ಮಟ್ಟಂಪಾಡಂ ಹರಿ ನೇತೃತ್ವದಲ್ಲಿ ನಡೆದ ಈ ಪಂಚವಾದ್ಯ ಕಾರ್ಯಕ್ರಮ ಜನಮನ ರಂಜಿಸಿತು.ಆಶೀರ್ವಚನ ನೀಡಿದ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು, ಉಡುಪಿ ಸಪ್ತೋತ್ಸವ ಸಂದರ್ಭದಲ್ಲಿ ನಾದಪ್ರಿಯನಿಗೆ ಈ ವಿಶಿಷ್ಟ ಸೇವೆ ಸಮರ್ಪಿತವಾಗಿದೆ. ಪಂಚವಾದ್ಯ ಮೂಲಕ ಭಕ್ತಿರಸ ಸ್ಪುರಣೆ ಸಾಧ್ಯ. ಪ್ರತೀ ದೇವಳಗಳಲ್ಲೂ ಪಂಚವಾದ್ಯ ಮೊಳಗಬೇಕು ಎಂದು ಆಶಿಸಿದರು.ಸಾನ್ನಿಧ್ಯ ವಹಿಸಿದ್ದ ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಭಾಗವತ ದಶಮ ಸ್ಕಂದದ ಪ್ರವಚನ ನೀಡಿದರು. ನಂತರ ಉಭಯ ಶ್ರೀಗಳು ಮಟ್ಟಂಪಾಡಂ ಹರಿ ಅವರಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿದರು.ಪುತ್ತಿಗೆ ಶ್ರೀಗಳ ಬಳಿ ಸುಧಾಮಂಗಳ ನಡೆಸಿದ ತುಮಕೂರು ಮರುತಾಚಾರ್ಯ ಭಾಗವತ ಪ್ರವಚನ ನೀಡಿದರು. ನಾರದರಿಂದ ಪ್ರೇರಣೆಗೊಂಡು ವೇದವ್ಯಾಸರಿಂದ ರಚಿತವಾದ ಭಾಗವತ ಭಕ್ತಿರಸ ಸ್ಪುರಣೆಯ ಮಹಾಗ್ರಂಥ. ಶ್ರೀಕೃಷ್ಣನಿಗೆ ಗೀತೆಯಷ್ಟೇ ಭಾಗವತವೂ ಇಷ್ಟ ಎಂದರು.ಕಾರ್ಯಕ್ರಮ ಪ್ರಾಯೋಜಕರಾದ ಪುತ್ತೂರು ವೆಂಕಟೇಶ ದಂಪತಿ ನೇದಿಕೆ ಮೇಲಿದ್ದರು. ಸುಗುಣಮಾಲಾ ಸಂಪಾದಕ ಮಹಿತೋಷ ಆಚಾರ್ಯ ಸ್ವಾಗತಿಸಿ, ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ರಮೇಶ ಭಟ್ ವಂದಿಸಿದರು. ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಸಹಕರಿಸಿದರು.ಸಪ್ತೋತ್ಸವ ಅಂಗವಾಗಿ ರಥಬೀದಿಯನ್ನು ವೈವಿಧ್ಯಮಯ ರಂಗವಲ್ಲಿಗಳಿಂದ ಸಿಂಗರಿಸಲಾಗಿತ್ತು. 25 ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯಿತು. ಬಳಿಕ ತೆಪ್ಪೋತ್ಸವ ಹಾಗೂ ರಥೋತ್ಸವಗಳು ಸಂಪನ್ನಗೊಂಡವು.