ಸಾರಾಂಶ
ಬೆಳಗಾವಿ : ಉತ್ತರಾಖಂಡದಲ್ಲಿರುವ ಕೇದಾರದ ಭದ್ರಿನಾಥ ದೇವಸ್ಥಾನದಲ್ಲಿ ವೇದಪಂಡಿತರಾಗಿ ಸೇವೆ ಸಲ್ಲಿಸುತ್ತಿದ್ದ ಪಂಡಿತ ಮೃತ್ಯುಂಜಯ ಗುರುಲಿಂಗ ಪೂಜಾರ ಹಿರೇಮಠ ಅವರು ಕೇದಾರದಲ್ಲಿ ಹೃದಯಾಘಾತದಿಂದ ಲಿಂಗೈಕ್ಯರಾದರು.
ಮೂಲತಃ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದರಾದ ಪಂ.ಮೃತ್ಯುಂಜಯ ಹಿರೇಮಠ ಅವರ ಕುಟುಂಬ ಕಳೆದ ಐದು ದಶಕಗಳದಿಂದ ಕೇದಾರದಲ್ಲಿಯೇ ನೆಲೆಸಿತ್ತು. ಇವರ ತಂದೆ ಗುರುಲಿಂಗ ಪೂಜಾರ ಹಿರೇಮಠ ಅವರು ಸಣ್ಣವಯಸ್ಸಿನಲ್ಲೇ ಕೇದಾರಕ್ಕೆ ತೆರಳಿ ಅಲ್ಲಿಯೇ ನೆಲೆಸಿ, ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು.
ಮೃತರಿಗೆ ಒಟ್ಟು ಮೂರು ಜನ ಸಹೋದರರಿದ್ದು, ಮೃತ್ಯುಂಜಯ ಮೂರನೇಯವರು. ಹಿರಿಯ ಸಹೋದರ ಶಂಕರಲಿಂಗ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡನೇ ಸಹೋದರ ಡಾ.ಶಿವಕಾಂತೇಶ ಕೇದಾರದಲ್ಲಿಯೇ ಸರ್ಕಾರಿ ವೈದ್ಯರಾಗಿದ್ದು, ಕೊನೆಯ ಸಹೋದರ ಉಮೇಶ್ವರ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಮೃತ್ಯಂಜಯ ಹಿರೇಮಠ ಅವರು ಎಸ್ಎಸ್ಎಲ್ಸಿ ವರೆಗೆ ಕೇದಾರದಲ್ಲಿ ವ್ಯಾಸಂಗ ಮಾಡಿ, ಬಳಿಕ ಗುಲ್ಬರ್ಗಾದಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿದ್ದಾರೆ. ದೇವರ ಸೇವೆ ಸಲ್ಲಿಸಬೇಕೆಂಬ ಉದ್ದೇಶದಿಂದ ವೇದಗಳ ಅಧ್ಯಯನದಲ್ಲಿ ಹೆಚ್ಚು ಪ್ರಾವೀಣ್ಯತೆ ಪಡೆದು ಬೋಧನೆ ಮಾಡುತ್ತಿದ್ದರು. ಶುಕ್ರವಾರ ರಾತ್ರಿ 9 ಗಂಟೆಯ ಸುಮಾರಿಗೆ ಶೌಚಾಲಯಕ್ಕೆ ಹೋಗಿದ್ದ ಸಮಯದಲ್ಲಿ ಏಕಾಎಕಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಕೇದಾರ ಓಕಿಮಠದಲ್ಲಿ ಮಾಡಲಾಗಿದೆ. ಇವರ ಮನೆ ಹಾಗೂ ಜಮೀನು ಚಿಕ್ಕಬಾಗೇವಾಡಿ ಗ್ರಾಮದಲ್ಲಿಯೇ ಇದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೃತರಿಗೆ ತಂದೆ ಗುರುಲಿಂಗ ಪೂಜಾರಿಜೀ ಹಿರೇಮಠ, ತಾಯಿ ಸುಮಿತ್ರಾದೇವಿ, ಮೂವರು ಸಹೋದರರು ಇದ್ದಾರೆ.