ಸಾರಾಂಶ
ಚಾಮರಾಜನಗರದಲ್ಲಿ ಬಸ್ ದರ ಹೆಚ್ಚಳ ಖಂಡಿಸಿ ಕರವೇಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕೆಎಸ್ಆರ್ಟಿಸಿ ಬಸ್ ದರ ಶೇ.15ರಷ್ಟು ಹೆಚ್ಚಿಸಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ನಗರ ಮತ್ತು ತಾಲೂಕು ಘಟಕ ವತಿಯಿಂದ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.ನಗರದ ಚಾಮರಾಜೇಶ್ವರ ಉದ್ಯಾನವನ ಮುಂಭಾಗದಲ್ಲಿ ತಾಲೂಕು ಅಧ್ಯಕ್ಷ ನವೀನ್ ಕ್ವಾಲಿಟಿ ಅವರ ನೇತೃತ್ವದಲ್ಲಿ ಜಮಾಯಿಸಿದ್ದ ಪ್ರತಿಭಟನಾನಿರತರು ಸರ್ಕಾರ, ನಿಗಮದ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ನವೀನ್ ಕ್ವಾಲಿಟಿ ಮಾತನಾಡಿ, ಸರ್ಕಾರ ಬಸ್ ದರವನ್ನು ಶೇ.15ರಷ್ಟು ಹೆಚ್ಚಿಸಿರುವುದರಿಂದ ಸಾರ್ವಜನಿಕರಿಗೆ ತೀವ್ರ ಹೊರೆಯಾಗಿದೆ. ಈಗಾಗಲೇ ಎಲ್ಲ ರೀತಿಯ ದಿನಸಿ ಪದಾರ್ಥಗಳು, ಎಣ್ಣೆ, ಕಾಳುಗಳು, ಆಹಾರ ಪದಾರ್ಥಗಳು ತುಟ್ಟಿಯಾಗಿವೆ. ಡೀಸೆಲ್, ಪೆಟ್ರೋಲ್, ನೋಂದಣಿ ಶುಲ್ಕ ಮತ್ತು ಮುದ್ರಾಂಕ ಶುಲ್ಕಗಳನ್ನು ಹೆಚ್ಚಿಸಲಾಗಿದ್ದು, ಜನತೆಗೆ ತುಂಬಾ ತೊಂದರೆಯಾಗಿದೆ ಕೂಡಲೇ ಬಸ್ ದರ ಹೆಚ್ಚಳವನ್ನು ವಾಪಸ್ ಪಡೆಯಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಉಮ್ಮತ್ತೂರು ಚಂದ್ರು, ತಾಲೂಕು ಪ್ರಧಾನ ಕಾರ್ಯದರ್ಶಿ ಅರ್ಜುನ್, ಉಪಾಧ್ಯಕ್ಷ ರಾಮಸಮುದ್ರ ಬಾಬು, ಅವಿನಾಶ್, ಕಾರ್ಮಿಕ ಘಟಕ ಅಧ್ಯಕ್ಷ ಹರೀಶ್ ನಾಯಕ, ಟೌನ್ ಅಧ್ಯಕ್ಷ ಮಹೇಂದ್ರ, ಸಾಂಸ್ಕೃತಿಕ ಘಟಕ ಅಧ್ಯಕ್ಷ ಮನು, ಮಹಿಳಾ ಘಟಕ ಅಧ್ಯಕ್ಷೆ ಸುಬ್ಬಲಕ್ಷ್ಮಿ, ಗೌರವ ಅಧ್ಯಕ್ಷೆ ಉಷಾ, ರೇಖಾ, ನಟರಾಜು, ಮಹದೇವಸ್ವಾಮಿ,ಗಣೇಶ್, ಸಂತೋಷ, ರಾಜೇಶ್, ರೂಪೇಶ್, ದೊರೆ ಇತರರು ಭಾಗವಹಿಸಿದ್ದರು.