ಕನ್ನಡಪ್ರಭ ವಾರ್ತೆ ಶಿರಾ
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪೇಪರ್ ಲೆಸ್ ಪತ್ರಗಳ ನೋಂದಣಿ ಪ್ರಕ್ರಿಯೆಯಲ್ಲಿ ರೈತಾಪಿ ಕುಟುಂಬದವರಿಗೆ ಹಾಗೂ ನೋಂದಣಿ ಮಾಡಿಸಲು ಬರುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ, ಆದ್ದರಿಂದ ಕೂಡಲೇ ಸರ್ಕಾರ ಈ ಆದೇಶ ವಾಪಸ್ಸು ಪಡೆಯಬೇಕು ಎಂದು ತಾಲೂಕು ದಸ್ತಾವೇಜು ಪತ್ರ ಬರಹಗಾರರ ಸಂಘದ ಅಧ್ಯಕ್ಷ ನಾಗೇಂದ್ರ ಒತ್ತಾಯಿಸಿದರು.ಅವರು ದಸ್ತಾವೇಜು ಪತ್ರಬರಹಗಾರರ ಸಂಘ ಶಿರಾ ತಾಲೂಕು ವತಿಯಿಂದ ಸರ್ಕಾರದ ಆದೇಶದ ವಿರುದ್ಧ ಹಮ್ಮಿಕೊಂಡಿದ್ದ ಒಂದು ದಿನದ ಸಾಂಕೇತಿಕ ಮುಷ್ಕರದಲ್ಲಿ ಭಾಗವಹಿಸಿ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಕ್ರಯಪತ್ರ, ದಾನಪತ್ರ, ಆಧಾರಸಾಲ, ವಿಭಾಗಪತ್ರ, ವಿಲ್ ಪತ್ರ ಇನ್ನೂ ಮುಂತಾದ ಪತ್ರಗಳನ್ನು ನೋಂದಣಿ ಮಾಡಿಸಲು ರಾಜ್ಯ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಪೇಪರ್ ಲೆಸ್ ನೋಂದಣಿ ಪ್ರಕ್ರಿಯೆಯಲ್ಲಿ ಹಲವಾರು ಲೋಪದೋಷಗಳಿದ್ದು, ಮಾರಾಟಗಾರರಿಗೂ ಹಾಗೂ ಖರೀದಿಗಾರರಿಗೂ ಮೋಸ ಆಗುವ ಸಂಭವವಿದೆ. ಸಾರ್ವಜನಿಕರ ಹಿತಾಸಕ್ತಿಯಿಂದ ಈ ತಂತ್ರಾಂಶ ಜಾರಿಗೆ ತರುವುದನ್ನು ನಾವು ವಿರೋಧಿಸುತ್ತೇವೆ ಎಂದರು.ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಕಲಾ ಮಾತನಾಡಿ, ರೈತಾಪಿ ಕುಟುಂಬ, ಸಾಮಾನ್ಯ ಬಡಕುಟುಂಬದವರು ದಿನ ನಿತ್ಯ ಉಪನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ನೋಂದಣಿಗೆ ಬಂದಾಗ ಪೇಪರ್ ಲೆಸ್ ನೋಂದಣಿ ಪತ್ರದಲ್ಲಿ ಯಾವುದೇ ಸಹಿಯಾಗಲಿ ಇರುವುದಿಲ್ಲ. ಎಲ್ಲವೂ ಡಿಜಿಟಲೀಕರಣವಾಗಿದ್ದು, ಓಟಿಪಿ ಮೂಲಕವೇ ಸಹಿ ಪಡೆಯುತ್ತಿದ್ದು, ಈ ಹಿಂದೆ ಪೇಪರ್ ಮೂಲಕ ವಹಿವಾಟುಗಳು ನಡೆಯುತ್ತಾ ಬಂದಿದ್ದವು, ಆದರೆ ಈಗ ಯಾವುದೇ ಪೇಪರ್ ಹಾಗೂ ಪೆನ್ ತೆಗೆದುಕೊಂಡು ಹೋಗದೇ ನೋಂದಣಿ ಮಾಡಿಸಿಕೊಂಡು ಬರಬೇಕಾದ ಪರಿಸ್ಥಿತಿ ಬಂದೊದಗಿದೆ. ನಮ್ಮ ದೇಶದಲ್ಲಿ ಹೆಚ್ಚು ಅನಕ್ಷರಸ್ಥರೇ ಇರುವುದರಿಂದ ಅವರಿಗೆ ಮೊಬೈಲ್ ಅರಿವು ಸಹ ಇಲ್ಲ, ನೋಂದಣಿ ಮಾಡಿಕೊಂಡ ಪತ್ರಗಳನ್ನು ತಮ್ಮ ಮೊಬೈಲ್ನಲ್ಲಿ ಸ್ಟೋರ್ ಮಾಡಿಕೊಂಡು ಹೋಗಬೇಕಾಗಿರುವುದರಿಂದ ಜನರಿಗೆ ಸರಿಯಾದ ತಿಳಿವಳಿಕೆ ಇರುವುದಿಲ್ಲ. ಪೇಪರ್ ಲೆಸ್ ನೋಂದಣಿಯಾದರೆ ನೋಂದಣಿ ಕಾರ್ಯ ಆಗುವುದೇ ಗೊತ್ತಾಗುವುದಿಲ್ಲ. ಯಾರದ್ದೋ ಆಸ್ತಿ ಯಾರು ಬೇಕಾದರೂ ಪರಭಾರೆ ಮಾಡಿ ಮೋಸ ಮಾಡಬಹುದು, ಆದ್ದರಿಂದ ಪೇಪರ್ ಲೆಸ್ ನೋಂದಣಿ ಸ್ಥಗಿತಗೊಳಿಸಿ ಈ ಹಿಂದೆ ಇದ್ದಂತೆ ನೋಂದಣಿ ಪ್ರಕ್ರಿಯೆ ಮುಂದುವರೆಸಿ ಎಂದು ಆಗ್ರಹಿಸಿದರು.
ಪ್ರತಿಭಟನೆಗೂ ಮುನ್ನ ನಗರದ ಅಂಬೇಡ್ಕರ್ ಉದ್ಯಾನವನದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಅಂಬೇಡ್ಕರ್ ಸರ್ಕಲ್ನಲ್ಲಿ ಮಾನವ ಸರಪಳಿ ಮಾಡಿ ಪ್ರತಿಭಟನೆ ನಡೆಸಿ, ತಾಲೂಕು ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು. ಜಿಲ್ಲಾ ಪತ್ರ ಬರಹಗಾರರ ರಾಜ್ಯ ಒಕ್ಕೂಟದ ಸಂಚಾಲಕ ತುರುವೇಕೆರೆ ಮಂಜುನಾಥ, ಜಿಲ್ಲಾ ಪತ್ರಬರಹಗಾರ ಸಂಘದ ತಾಲೂಕು ಉಪಾಧ್ಯಕ್ಷ ಶ್ರೀರಂಗಪ್ಪ, ಖಜಾಂಚಿ ನರಸಪ್ಪ, ನರಸಿಂಹಮೂರ್ತಿ, ಶಿವಲಿಂಗಯ್ಯ, ಮಂಜುನಾಥ ಎಸ್., ಅನುಸೂಯಮ್ಮ, ಏಕಾಂತಮ್ಮ, ಶಿವಕುಮಾರ್, ಕೃಷ್ಣಮೂರ್ತಿ ಈಶ್ವರ, ಗಾದ್ರಪ್ಪ, ಸುಧೀಂದ್ರ, ಕೆಂಚಪ್ಪ ರಂಗಸ್ವಾಮಿ ಸೇರಿ ಹಲವು ಪತ್ರಬರಹಗಾರರು ಭಾಗವಹಿಸಿದ್ದರು.