ಹಾನಗಲ್ಲ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಪರಶುರಾಮ ಖಂಡೂನವರ ರಾಜೀನಾಮೆ

| Published : Jun 01 2025, 02:41 AM IST

ಸಾರಾಂಶ

ಹಾನಗಲ್ಲ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಪರಶುರಾಮ ಖಂಡೂನವರ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್‌ನ ರಾಧಿಕಾ ದೇಶಪಾಂಡೆ ಅವರಿಗೆ ಅಧ್ಯಕ್ಷ ಸ್ಥಾನ ಒಲಿಯುವ ಕಾಲ ಸನ್ನಿಹಿತವಾಗಿದೆ. ಉಪಾಧ್ಯಕ್ಷರಾಗಿ ವೀಣಾ ಗುಡಿ ಮುಂದುವರಿಯಲಿದ್ದಾರೆ.

ಹಾನಗಲ್ಲ: ಹಾನಗಲ್ಲ ಪುರಸಭೆ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ನ ರಾಧಿಕಾ ದೇಶಪಾಂಡೆ ಅವರಿಗೆ ಒಲಿಯುವ ಕಾಲ ಸನ್ನಿಹಿತವಾಗಿದ್ದು, ಒಪ್ಪಂದದಂತೆ ಹಾಲಿ ಅಧ್ಯಕ್ಷ ಪರಶುರಾಮ ಖಂಡೂನವರ ರಾಜಿನಾಮೆ ಸಲ್ಲಿಸಿದ್ದಾರೆ. ಹಂಗಾಮಿ ಅಧ್ಯಕ್ಷರಾಗಿ ಉಪಾಧ್ಯಕ್ಷೆ ವೀಣಾ ಗುಡಿ ಅವರಿಗೆ ಅವಕಾಶವಾಗಿದೆ.

ಹಾನಗಲ್ಲ ಪುರಸಭೆಯ ಈ ಅವಧಿಯ ಚುನಾವಣೆ 2018ರಂದು ಪೂರ್ಣಗೊಂಡು ಫಲಿತಾಂಶ ಪ್ರಕಟವಾಗಿತ್ತಾದರೂ, ಅಧ್ಯಕ್ಷ ಮೀಸಲಾತಿ ಸಾಮಾನ್ಯ ಎಂದಾಗಿತ್ತು. ಮೊದಲ ಅಧ್ಯಕ್ಷರಾಗಿ ಖುರ್ಷಿದ್‌ ಅಹಮ್ಮದ್ ಹುಲ್ಲತ್ತಿ 2020ರ ನವೆಂಬರ್ 9ರಂದು ಅಧಿಕಾರ ಸ್ವೀಕರಿಸಿದ್ದರು. ಹೈಕಮಾಂಡ ಒಪ್ಪಂದದಂತೆ ಮೊದಲರ್ಧ ಅವಧಿಯಲ್ಲಿ ಖುರ್ಷಿದ್‌ ಅಹಮ್ಮದ್ ಹುಲ್ಲತ್ತಿ, ನಾಗಪ್ಪ ಸವದತ್ತಿ, ಅನಂತವಿಕಾಸ ನಿಂಗೋಜಿ ಅಧ್ಯಕ್ಷರಾದರು. 2ಎ ವರ್ಗ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಆಗಿದ್ದರಿಂದ ಒಪ್ಪಂದದಂತೆ ಮಹೇಶ ಪವಾಡಿ, ರವಿ ಹನುಮನಕೊಪ್ಪ, ಶಂಶಿಯಾಬಾನು ಬಾಳೂರ ಈ ಮೂವರು ಅವಧಿಯನ್ನು ಹಂಚಿಕೊಂಡರು.

ಎರಡನೇ ಅರ್ಧ ಅವಧಿಯೂ ಅಧ್ಯಕ್ಷ ಸ್ಥಾನ ಸಾಮಾನ್ಯ ಎಂದು ಘೋಷಣೆಯಾಗಿ ಮಮತಾ ಆರೆಗೊಪ್ಪ, ಪರಶುರಾಮ ಖಂಡೂನವರ ಅಧ್ಯಕ್ಷರಾಗಿದ್ದರು. ಈಗ ಪರಶುರಾಮ ಖಂಡೂನವರ ರಾಜಿನಾಮೆ ನೀಡಿದ್ದು, ರಾಧಿಕಾ ದೇಶಪಾಂಡೆ ಅಧ್ಯಕ್ಷರಾಗುವುದು ಖಚಿತವಾಗಿದೆ. ಜೂ. 10ರ ಒಳಗಾಗಿ ಅಧ್ಯಕ್ಷರ ಚುನಾವಣೆ ನಡೆಯಲಿದೆ ಎನ್ನಲಾಗಿದೆ. ಈ ಅವಧಿಗೆ ಉಪಾಧ್ಯಕ್ಷ ಸ್ಥಾನ ಬ ಮಹಿಳೆ ವರ್ಗಕ್ಕೆ ಮೀಸಲಾಗಿದ್ದು, ಈ ವರ್ಗದ ವೀಣಾ ಗುಡಿ ಮಾತ್ರ ಇದ್ದು, ಅವರೇ ಎರಡನೇ ಅವಧಿ ಪೂರ್ಣ ಉಪಾಧ್ಯಕ್ಷರಾಗಿದ್ದಾರೆ.

ರಾಜಿನಾಮೆ ನೀಡಿರುವ ಮಾಜಿ ಅಧ್ಯಕ್ಷ ಪರಶುರಾಮ ಖಂಡೂನವರ ಸುದ್ದಿಗಾರರೊಂದಿಗೆ ಮಾತನಾಡಿ, ಅವಧಿ ಹಂಚಿಕೆಯಾದರೂ ಎಲ್ಲರೂ ಒಟ್ಟಾಭಿಪ್ರಾಯದಲ್ಲಿ ಸೇವೆ ಸಲ್ಲಿಸಿದ್ದೇವೆ. ನಮಗೆ ಯಾರು ಅಧ್ಯಕ್ಷರು ಎನ್ನುವುದಕ್ಕಿಂತ ಅಧ್ಯಕ್ಷರಾದವರಿಗೆ ಎಲ್ಲರೂ ಸಹಕಾರ ನೀಡಿದ್ದಾರೆ. ಪಟ್ಟಣದ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಿದ್ದೇವೆ. ಆಂತರಿಕ ಒಪ್ಪಂದದಂತೆ ಅಧಿಕಾರಾವಧಿ ಹೈಕಮಾಂಡ ಹಂಚಿಕೆ ಮಾಡಿದ್ದನ್ನು ಎಲ್ಲರೂ ಒಪ್ಪಿ ಅದರಂತೆ ನಡೆದುಕೊಂಡಿದ್ದೇವೆ. ಈಗ ರಾಧಿಕಾ ದೇಶಪಾಂಡೆ ಅವರು ಅಧ್ಯಕ್ಷರಾಗಲಿದ್ದಾರೆ. ಅವರ ಅವಧಿ ಸೆ. 20ಕ್ಕೆ ಮುಕ್ತಾಯವಾಗಲಿದೆ ಎಂದು ಹೇಳಿದರು.

ನನ್ನ ಅವಧಿಯಲ್ಲಿ ಕುಡಿಯುವ ನೀರು, ಸ್ವಚ್ಛತೆಗೆ ಆದ್ಯತೆ ನೀಡಿ ಕೆಲಸ ಮಾಡಿದ್ದೇನೆ. ಹಾನಗಲ್ಲಿನ ಅತಿ ದೊಡ್ಡ ಸಂಭ್ರಮದ ಹಬ್ಬ ಗ್ರಾಮದೇವಿ ಜಾತ್ರೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಇದೇ ಅವಧಿಯಲ್ಲಿ ₹35 ಕೋಟಿ ವೆಚ್ಚದಲ್ಲಿ ಧರ್ಮಾ ಜಲಾಶಯದಿಂದ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಫಿಲ್ಟರ್ ಬೇಡ್‌ಗೆ ನೀರೊದಗಿಸುವ ಯೋಜನೆ ಕಾಮಗಾರಿ ಆರಂಭವಾಗಿದೆ. ರೈತ ವೃತ್ತ, ಆದರ್ಶ ಶಿಕ್ಷಕ ಬಿ.ಬಿ. ಪದಕಿ ವೃತ್ತಗಳನ್ನು ಮಾಡಲಾಗಿದೆ. ಕಾರ್ನರ್ ಸೈಟ್‌ಗಳ ಹಂಚಿಕೆಯಿಂದ ಪುರಸಭೆಗೆ ₹1.25 ಕೋಟಿ ಆದಾಯ ಬಂದಿದೆ. ನನ್ನ ಅವಧಿ ತೃಪ್ತಿ ತಂದಿದೆ ಎಂದು ಖಂಡೂನವರ ಹೇಳಿದರು.ಸ್ಥಾನ ಸಿಗುವ ಭರವಸೆ ಇದೆ: ಕಾಂಗ್ರೆಸ್ ಸದಸ್ಯರು ಶಾಸಕರ ಒಪ್ಪಂದದಂತೆ ನನಗೆ ಈ ಅವಧಿಯ ಕೊನೆಯ ಅಧ್ಯಕ್ಷಳಾಗುವ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ನಮ್ಮಲ್ಲಿ ಎಲ್ಲರ ಸಹಮತದಿಂದ ಈ ಎಲ್ಲ ಪ್ರಕ್ರಿಯೆಗಳು ನಡೆದಿವೆ. ಒಪ್ಪಂದದಂತೆ ಎಲ್ಲರೂ ನಡೆದುಕೊಂಡಿದ್ದಾರೆ. ಇದೇ ನಮ್ಮಲ್ಲಿ ಸಹಮತವಿದೆ ಎಂಬುದಕ್ಕೆ ಸಾಕ್ಷಿ. ಎಲ್ಲರ ಸಹಕಾರದಿಂದ ಮೇ 10ರ ಒಳಗಾಗಿ ಚುನಾವಣೆ ನಡೆದು, ನನಗೆ ಅಧ್ಯಕ್ಷ ಸ್ಥಾನ ಸಿಗುವ ಭರವಸೆ ಇದೆ ಎಂದು ಪುರಸಭೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರಾಧಿಕಾ ದೇಶಪಾಂಡೆ ಹೇಳಿದರು.