ಸಾರಾಂಶ
ಕಾರ್ಕಳ ಉಮಿಕಲ್ ಬೆಟ್ಟದ ದೈವಸಾನ್ನಿಧ್ಯ ನೆಲಸಮ ಮಾಡಿದ್ದೇ ವಿವಾದಕ್ಕೆ ಕಾರಣವಿರಬಹುದು?
ಕನ್ನಡಪ್ರಭ ವಾರ್ತೆ ಉಡುಪಿಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಉಮಿಕಲ್ ಬೆಟ್ಟದ ಮೇಲಿದ್ದ ದೈವಸಾನ್ನಿಧ್ಯವನ್ನು ನಾಶ ಮಾಡಿದ್ದೇ ಅಲ್ಲಿ ನಿರ್ಮಿಸಲಾದ ಪರಶುರಾಮ ಥೀಮ್ ಪಾರ್ಕ್ನ ವಿವಾದಕ್ಕೆ ಕಾರಣವಾಗಿದೆ. ಆದ್ದರಿಂದ ಅಷ್ಟಮಂಗಲ ಪ್ರಶ್ನೆ ಮೂಲಕ ಈ ವಿವಾದವನ್ನು ಬಗೆಹರಿಸಬೇಕು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಸಲಹೆ ನೀಡಿದ್ದಾರೆ.ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಶುರಾಮ ಮೂರ್ತಿಯ ವಿವಾದ ಅಂತ್ಯ ಯಾವಾಗ ಎಂದು ಜನ ಪ್ರಶ್ನಿಸುತಿದ್ದಾರೆ. ಅಲ್ಲಿ ಸ್ಥಾಪಿಸಿ, ನಂತರ ತೆರವುಗೊಳಿಸಿದ ಪರಶುರಾಮ ದೇವರ ಮೂರ್ತಿ ಅಸಲಿಯೋ, ನಕಲಿಯೋ ಎಂಬ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಗುತ್ತಿಗೆ ಪಡೆದಿದ್ದ ಅಧಿಕಾರಿಯನ್ನು ಅಮಾನತುಗೊಳಿಸಲ್ಪಟ್ಟಿದ್ದಾರೆ. ಮೂರ್ತಿಯ ಶಿಲ್ಪಿ ಬಂಧಿಸ್ಪಟ್ಟಿದ್ದರು. ಹೀಗಾಗಿ ವಿಗ್ರಹ ಪ್ರತಿಷ್ಠಾಪನೆಯ ಆರಂಭದಲ್ಲಿಯೇ ನಡೆದಿರುವ ಇಂತಹ ಅನಾಹುತಗಳಿಂದ ಜನ ಭಯಭೀತರಾಗಿದ್ದಾರೆ ಎಂದವರು ಹೇಳಿದರು.ಥೀಮ್ ಪಾರ್ಕ್ ನಿರ್ಮಾಣದ ಮೊದಲು ಉಮಿಕಲ್ ಬೆಟ್ಟದಲ್ಲಿ ದೈವ ಸಾನ್ನಿಧ್ಯವಿತ್ತು. ಅದನ್ನು ನೆಲಸಮ ಮಾಡಿ ಕಾಮಗಾರಿಗಳನ್ನು ನಡೆಸಲಾಗಿದೆ. ಇದೀಗ ಅದರ ದೋಷವೇ ಇಂತಹ ದುರಂತಗಳಿಗೆ ಕಾರಣವಾಗಿದ್ದಿರಬಹುದು ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಎಲ್ಲ ಪ್ರಶ್ನೆಗಳನ್ನು ಅಷ್ಟಮಂಗಲದ ಮೂಲಕ ಪರಿಹರಿಸಿಕೊಳ್ಳಬೇಕೆಂದು ನನ್ನ ಸಲಹೆ ಎಂದರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕೃಷ್ಣಮೂರ್ತಿ ಆಚಾರ್ಯ, ಅಜಿತ್ ಹೆಗ್ಡೆ ಉಪಸ್ಥಿತರಿದ್ದರು.