ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಹೆತ್ತವರ ಜವಾಬ್ದಾರಿ. ಶಿಕ್ಷಣ ಪಡೆದವರು ದೇಶದ ಅಭ್ಯುದಯ ಹಾಗೂ ಸಮಾಜದ ಏಳಿಗೆಗೆ ಶ್ರಮಿಸುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಬುದುಕು ಸಾರ್ಥಕವಾಗುತ್ತದೆ ಎಂದು ಸಹಕಾರ ಸಚಿವ ಕೆ.ಎನ್ .ರಾಜಣ್ಣ ತಿಳಿಸಿದರು.ಹರಿಹರರೊಪ್ಪ ಗ್ರಾಮದಲ್ಲಿರುವ ಕಾರ್ಡಿಯಲ್ ಇಂಟರ್ ನ್ಯಾಷನಲ್ ಶಾಲಾ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಅತಿ ಹೆಚ್ಚು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ,ಮುಖ್ಯ ಶಿಕ್ಷಕರ ಕಾರ್ಯಾಗಾರ ಹಾಗೂ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಳ್ಳಿಗಾಡಿನ ಮಕ್ಕಳು ಶಾಲೆಗೆ ಗೈರು ಹಾಜರಾಗುವುದರಿಂದ ಪಠ್ಯ ಕ್ರಮವನ್ನು ಸತತವಾಗಿ ಅಧ್ಯಯನ ಮಾಡಲು ಸಾಧ್ಯವಾಗದು.ಆದ ಕಾರಣ ಶಿಕ್ಷಕರು,ಪೋಷಕರು ತಮ್ಮ ಮಕ್ಕಳ ಮನವೊಲಿಸಿ ಶಾಲೆಗೆ ಕರೆ ತರುವ ನಿಟ್ಟಿನಲ್ಲಿ ಹಾಜರಾತಿ ಹೆಚ್ಚಿಸಬೇಕು ಎಂದರು.ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಹೆಚ್ಚಿಸಲು ಶ್ರಮಿಸಿದ ಡಿಡಿಪಿಐ ಹಾಗೂ ಎಲ್ಲ ಅಧಿಕಾರಿಗಳು ಸ್ವಯಂ ಆಗಿ ಕಲಿತ ವಿಧಾನಗಳನ್ನು ಪ್ರಾರಂಭಿಸಿದ್ದು , ಈ ಮಾದರಿಯನ್ನು ಇಡೀ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಅಳವಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಕೀರ್ತಿ ಹೆಚ್ಚಿಸಲು ನಾವು ನೀವು ಎಲ್ಲರೂ ಸೇರಿ ಕೆಲಸ ಮಾಡೋಣ.ಶಿಕ್ಷಣ ಇಲಾಖೆಯಲ್ಲಿ ಯಾವುದೇ ಸಮಸ್ಯಗಳಿದ್ದರೂ ನನ್ನ ಗಮನಕ್ಕೆ ತನ್ನಿ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ಕೊಡಿಸುವುದಾಗಿ ತಿಳಿಸಿದರು.
ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಮಾತನಾಡಿ, ಪ್ರಸ್ತುತ ಫಲಿತಾಂಶದಲ್ಲಿ ಆಗಿರುವ ಲೋಪ-ದೋಷ ವಿಶ್ಲೇಷಣೆ ಮಾಡಿ ಉತ್ತಮ ಫಲಿತಾಂಶ ಪಡೆಯಲು ಶಿಕ್ಷಕರು ಮಕ್ಕಳ ಮನಸ್ಸನ್ನು ಶಿಕ್ಷಣದತ್ತೆ ಸಳೆಯಲು ಯಾವ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದಕ್ಕೆ ಇಂತಹ ಕಾರ್ಯಾಗಾರಗಳನ್ನು ನಡೆಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದರು.ಡಿಡಿಪಿಐ ಎಚ್ ಗಿರಿಜಾ ಮಾತನಾಡಿ, ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಿಸುವ ದೃಷ್ಠಿಯಿಂದ ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಗಾರಗಳನ್ನು ನಡೆಸಿ ಮಕ್ಕಳ ಶಿಕ್ಷಣ ಕಲಿಕೆಗೆ ಭದ್ರ ಭೂನಾದಿ ಹಾಕಿ ಮಕ್ಕಳ ಜ್ಞಾನ ಸಂಪಾದನೆಗೆ ಅಧಿಕ ಒತ್ತು ಕೊಡುವ ಕಾರ್ಯಾಗಾರಗಳನ್ನು ಮಾಡುತ್ತಿದ್ದು,ಉತ್ತಮ ಫಲಿತಾಂಶ ತರಲು ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಡಾ.ಗಣೇಶ್ ಭಟ್, ಕೊರಟಗೆರೆ ಬಿಇಒ ನಟರಾಜು,ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಚನ್ನಿಗರಾಮಯ್ಯ, ಜಿಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಯತಿಕುಮಾರ್ ಮಾತನಾಡಿದರು.ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡರಾಜು, ಎನ್.ಗಂಗಣ್ಣ, ಶಿಕ್ಷಣಾಧಿಕಾರಿ ಎಂ.ವಿ.ರಾಜಣ್ಣ, ಬಿಇಒ ಕೆ.ಎನ್.ಹನುಮಂತರಾಯಪ್ಪ, ಇಂದ್ರಾಣಮ್ಮ, ಕೃಷ್ಣಪ್ಪ, ಡಿವೈಎಸ್ಪಿ ಮಂಜುನಾಥ್, ಖಜಾಂಚಿ ಶೈಲಾಶ್ರೀ, ಸಿಂಡಿಕೇಟ್ ಸದಸ್ಯ ಶಿವಣ್ಣ, ಚಿತ್ತಯ್ಯ,ಇಸಿಒ ರಾಘವೇಂದ್ರ, ಆನಂದ ಕುಮಾರ್, ಮುಖ್ಯ ಶಿಕ್ಷಕ ಗೋವಿಂದ ಮುಜಾಂದಾರ್, ಗುರುಪ್ರಸಾದ್ ಹಾಗೂ ಮುಖ್ಯ ಶಿಕ್ಷಕರು ಇದ್ದರು.