ಜಗತ್ತಿನಾದ್ಯಂತ ವಿವಿಧ ಸ್ಥಳಗಳಲ್ಲಿ ಲಯನ್ಸ್ ಕ್ಲಬ್‌ಗಳು ಆರೋಗ್ಯ ಶಿಬಿರ ನೇತ್ರಚಿಕಿತ್ಸೆ ಮತ್ತು ಶಿಕ್ಷಣ ಹಾಗೂ ಸಮಾಜ ಸೇವೆಗೆ ಆದ್ಯತೆ ನೀಡುತ್ತಿ

ಸಿದ್ದಾಪುರದಲ್ಲಿ ದಂತ ತಪಾಸಣೆ, ಉಚಿತ ಚಿಕಿತ್ಸಾ ಶಿಬಿರ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆ ಆರೋಗ್ಯ ಪಾಲನೆಯ ಚಟುವಟಿಗೆಯತ್ತ ವಿಶೇಷ ಗಮನ ಕೊಡುತ್ತಿದೆ ಎಂದು ಲಯನ್ಸ್‌ ಮಾಜಿ ಜಿಲ್ಲಾ ಗವರ್ನರ್‌ ಹಾಗೂ ಆಶಾಕಿರಣ ಟ್ರಸ್ಟ್‌ ಅಧ್ಯಕ್ಷ ಡಾ. ರವಿ ಹೆಗಡೆ ಹೂವಿನಮನೆ ಹೇಳಿದರು.

ಅವರು ಸ್ಥಳೀಯ ಲಯನ್ಸ್‌ ಕ್ಲಬ್‌ನ ವತಿಯಿಂದ ಕತ್ರಗಾಲ-ವಿದ್ಯಾಗಿರಿಯ ಶ್ರೀ ರಮಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ದಂತ ತಪಾಸಣೆ ಹಾಗೂ ಉಚಿತ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನಾದ್ಯಂತ ವಿವಿಧ ಸ್ಥಳಗಳಲ್ಲಿ ಲಯನ್ಸ್ ಕ್ಲಬ್‌ಗಳು ಆರೋಗ್ಯ ಶಿಬಿರ ನೇತ್ರಚಿಕಿತ್ಸೆ ಮತ್ತು ಶಿಕ್ಷಣ ಹಾಗೂ ಸಮಾಜ ಸೇವೆಗೆ ಆದ್ಯತೆ ನೀಡುತ್ತಿದ್ದು, ತಮ್ಮ ಆರೋಗ್ಯವನ್ನು ಉಳಿಸಿಕೊಳ್ಳುವಲ್ಲಿ ತಜ್ಞ ವೈದ್ಯರ ಸೂಕ್ತ ಸಲಹೆಗಳನ್ನು ಪಡೆದುಕೊಳ್ಳುವುದು ಅಗತ್ಯವಿದ್ದು, ಅವುಗಳತ್ತ ಸಾರ್ವಜನಿಕರು ಹೆಚ್ಚಿನ ಗಮನ ನೀಡಬೇಕು ಎಂದು ಹೇಳಿದರು.

ಜಿ.ಜಿ. ಹೆಗಡೆ ಬಾಳಗೋಡು ಮಾತನಾಡಿ, ಸಂಪತ್ತು ಕಳೆದುಹೋದರೆ, ಆರೋಗ್ಯ ಕಳೆದುಹೋದರೆ ಮತ್ತೆ ಗಳಿಸಬಹುದು, ಇಲ್ಲವೇ ಚಿಕಿತ್ಸೆಯ ಮೂಲಕ ಗುಣಪಡಿಸಬಹುದು. ನಡತೆಯನ್ನು ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ. ಅದಕ್ಕಾಗಿ ವಿದ್ಯಾರ್ಥಿಗಳು ತಮ್ಮ ನಡತೆ, ಚಾರಿತ್ರ್ಯ ರಕ್ಷಿಸಿಕೊಂಡು ಬರಬೇಕು ಎಂದರು.

ರಮಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶ್ರೀಪಾದ ಪಿ. ಭಟ್ಟ ಮಾತನಾಡಿ, ತಮ್ಮ ಶಿಕ್ಷಣ ಸಂಸ್ಥೆಯ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮವಾದ ವಿದ್ಯಾಭ್ಯಾಸ, ಆರೋಗ್ಯ ಸಲಹೆ, ಯೋಗ, ಸಂಗೀತ, ಕರಾಟೆ, ಯಕ್ಷಗಾನ ಮುಂತಾದ ಚಟುವಟಿಕೆ ಕಲಿಸಲಾಗುತ್ತಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ಉನ್ನತಿಗಾಗಿ ಶ್ರಮಿಸಲಾಗುತ್ತಿದೆ ಎಂದರು.

ಅಧ್ಯಕ್ಷತೆವಹಿಸಿದ್ದ ಲಯನ್ಸ್‌ ಕ್ಲಬ್ ಅಧ್ಯಕ್ಷ ರಾಘವೇಂದ್ರ ಭಟ್ಟ ಕಲ್ಲಾಳ ಮಾತನಾಡಿ, ಸ್ಥಳೀಯ ಲಯನ್ಸ್‌ ಕ್ಲಬಿನ ಮೂಲಕ ೫೪ ವರ್ಷದಿಂದ ಆರೋಗ್ಯ, ಶಿಕ್ಷಣ, ಸೇವೆ ನೀಡುತ್ತ ಬಂದಿದ್ದು, ವಿದ್ಯಾರ್ಥಿಗಳಿಗೆ ದಂತ ಆರೋಗ್ಯ ಕುರಿತು ಹೆಚ್ಚಿನ ಮಾಹಿತಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದರು. ವಿದ್ಯಾರ್ಥಿಗಳಿಗೆ ಉಚಿತವಾಗಿ ಟೂಥ್ ಬ್ರೆಶ್ ಹಾಗೂ ಟೂಥ್‌ಪೇಸ್ಟ್‌ ವಿತರಿಸಿದರು. ಡಾ. ರಾಜು ಕೆ. ಭಟ್ಟ ಹಾಗೂ ಡಾ. ಪ್ರಶಾಂತ ಭಟ್ಟ ಬಾಳಗೋಡು, ಡಾ. ವಿನಯ್ ಸಂಪಖಂಡ, ಡಾ. ಗಿರೀಶ್ ಹಾಗೂ ರಮಾನಂದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರಸನ್ನ ಹೆಗಡೆ ಕುಡೇಗೋಡು, ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಗಂಗಾ ಹೆಗಡೆ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದರು. ಮುಖ್ಯ ಶಿಕ್ಷಕ ಭರತ ಹೆಗಡೆ ಸ್ವಾಗತಿಸಿದರು. ಡಿ.ಎನ್. ನಾಯ್ಕ ಗೋಳಗೋಡು ಕಾರ್ಯಕ್ರಮ ನಿರೂಪಿಸಿದರು. ದಯಾನಂದ ಗೌಡ ವಂದಿಸಿದರು.