ಹೆತ್ತವರು ಮಕ್ಕಳಿಗೆ ಸಾಕಷ್ಟು ಸಮಯ ನೀಡಿ: ಪತ್ರಕರ್ತ ನಿತ್ಯಾನಂದ ಪಡ್ರೆ

| Published : Jan 07 2025, 12:31 AM IST

ಸಾರಾಂಶ

ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ‘ವರ್ಷದ ಹರ್ಷ ನೂರರ್ವತ್ತನಾಲ್ಕು’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿಶ್ರಾಂತ ಪತ್ರಕರ್ತ ಎಸ್. ನಿತ್ಯಾನಂದ ಪಡ್ರೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಉದ್ಯಾವರ

ಒತ್ತಡದ ಬದುಕಿನ ಮಧ್ಯೆ ಹೆತ್ತವರು ತಮ್ಮ ಮಕ್ಕಳಿಗೆ ಸಮಯ ಕೊಡಲಾಗದಷ್ಟು ಅಸಹಾಯಕರಾಗಿದ್ದಾರೆ. ಇದು ನಮ್ಮ ಮಕ್ಕಳ ಬದುಕಿನಲ್ಲಿ ದುರಂತವನ್ನು ಉಂಟು ಮಾಡಬಹುದು. ಹಾಗಾಗಿ ದೈನಂದಿನ ಒತ್ತಡ ಎಷ್ಟೇ ಇರಲಿ ಅದನ್ನು ಮೀರಿ ನಿಮ್ಮ ಮಕ್ಕಳಿಗೆ ಸಮಯವನ್ನು ನೀಡಬೇಕು, ಅವರಲ್ಲಿ ಒಳ್ಳೆಯ ಮೌಲ್ಯವನ್ನು ತುಂಬಬೇಕು ವಿಶ್ರಾಂತ ಪತ್ರಕರ್ತ ಎಸ್. ನಿತ್ಯಾನಂದ ಪಡ್ರೆ ಹೆತ್ತವರಿಗೆ ಕರೆ ನೀಡಿದ್ದಾರೆ.ಅವರು ಇಲ್ಲಿನ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ‘ವರ್ಷದ ಹರ್ಷ ನೂರರ್ವತ್ತನಾಲ್ಕು’ ಕಾರ್ಯಕ್ರಮದ ಧ್ವಜಾರೋಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕನ್ನಡ ಶಾಲೆಗಳೆಂಬ ಕೀಳರಿಮೆ ಬೇಡ, ಮಾಧ್ಯಮ ಯಾವುದೇ ಇರಲಿ ಸಾಧಿಸುವ ಛಲಬೇಕು. ಏಕಾಗ್ರತೆ, ಅಭೀಪ್ಸೆ, ನಿರಂತರ ಪ್ರಯತ್ನ, ಗುರಿ ಮತ್ತು ಸ್ಪಷ್ಟ ದಾರಿ ಇದ್ದರೆ ನೀವು ಬದುಕಲ್ಲಿ ಸಾಧಕರಾಗಬಹುದು. ಕನ್ನಡದಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಇಂದು ಜನ ಮೆಚ್ಚಿದ ಸಾಧನೆಗಳನ್ನು ಮಾಡಿದ ಉದಾಹರಣೆ ನಮ್ಮ ಮುಂದೆ ಇದೆ ಎಂದರು.ಮುಖ್ಯ ಅತಿಥಿಯಾಗಿ ಕುಂಜಾರುಗಿರಿ ಪಾಜಕ ಆನಂದತೀರ್ಥ ವಿದ್ಯಾಲಯದ ಪ್ರಾಂಶುಪಾಲೆ ಡಾ. ಗೀತಾ ಶಶಿಧರ್, ಆದಿ ಉಡುಪಿ ಶಾಲಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಟಿ.ಕೆ. ಗಣೇಶ್ ರಾವ್ ಉಪಸ್ಥಿತರಿದ್ದರು.ವೇದಿಕೆಯಲ್ಲಿ ಶಾಲಾ ಸಂಚಾಲಕ ಸುರೇಶ್ ಶೆಣೈ, ಮುಖ್ಯೋಪಾಧ್ಯಾಯಿನಿ ರತಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸುನಿಲ್ ಸಾಲಿಯಾನ್ ಕಡೆಕಾರ್, ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷೆ ಸುಜಾತ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ್ ಕರ್ಕೇರ ಉಪಸ್ಥಿತರಿದ್ದರು. ಶಾಲಾಡಳಿತ ಮಂಡಳಿ ಅಧ್ಯಕ್ಷ ಗಣಪತಿ ಕಾರಂತ ಸ್ವಾಗತಿಸಿದರು. ಶಿಕ್ಷಕಿಯರಾದ ಲಕ್ಷ್ಮೀ ಹರೀಶ್ ವಂದಿಸಿದರು. ನಾಜೀರಾ ಕಾರ್ಯಕ್ರಮ ನಿರ್ವಹಿಸಿದರು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ರತ್ನಾಕರ ಆಚಾರ್ಯ ಅವರ ನಿರ್ದೇಶನದಲ್ಲಿ ‘ಲವ ಕುಶ ಕಾಳಗ’ ಯಕ್ಷಗಾನ ಪ್ರದರ್ಶನ ಗೊಂಡಿತು.