ಶಿಗ್ಗಾಂವಿ: ನಮ್ಮ ಸಮುದಾಯಕ್ಕೆ ಪೊಲೀಸ್ ಇಲಾಖೆಯಿಂದ ಉತ್ತಮ ಸಹಕಾರ ಸಿಗುತ್ತಿದೆ. ಸಾಧನೆಗೆ ಬಡತನವೇ ಅಡಿಪಾಯವಾಗಿದ್ದು, ಪೋಷಕರು ಮಕ್ಕಳನ್ನು ಕಡ್ಡಾಯವಾಗಿ ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಮುಖಂಡ ಕರಿಯಪ್ಪ ಕಟ್ಟಿಮನಿ ಹೆಳಿದರು.ಪಟ್ಟಣದ ಅಂಬೇಡ್ಕರ್ ನಗರದ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಶಿಗ್ಗಾಂವಿ ಪೊಲೀಸ್ ಠಾಣೆಯ ವತಿಯಿಂದ ದಲಿತ ಮುಖಂಡರ ಹಾಗೂ ಎಸ್.ಸಿ. ಮತ್ತು ಎಸ್.ಟಿ. ಕುಂದುಕೊರತೆಗಳ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಅವರು, ತಮ್ಮ ಸಮುದಾಯದ ಜನರಿಗೆ ಒಂದೇ ಕಡೆ ನಿವೇಶನ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳಲ್ಲಿ ವಿನಂತಿಸಿದರು.ಮಹೇಶ ತಳವಾರ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಫೋಟೋವನ್ನು ಹಾಕಿಕೊಳ್ಳಬೇಕು. ಸಮಾಜದ ಬಾಂಧವರು ಸಾರಾಯಿ ಸೇರಿದಂತೆ ವಿವಿಧ ದುಶ್ಚಟಗಳಿಂದ ದೂರ ಉಳಿಯಬೇಕು. ಸಣ್ಣ ಸಮಾಜದವರಲ್ಲಿ ಪರಸ್ಪರ ಹೊಂದಾಣಿಕೆ ಮನೋಭಾವ ಮೂಡಬೇಕು. ಸುಳ್ಳು ಜಾತಿ ದೂರುಗಳನ್ನು ದಾಖಲಿಸಬಾರದು ಹಾಗೂ ಸಮಾಜದಲ್ಲಿ ಎಲ್ಲರೊಂದಿಗೆ ಸಾಮರಸ್ಯದಿಂದ ಬದುಕಬೇಕು " ಎಂದು ಕರೆ ನೀಡಿದರು. ಇದೇ ವೇಳೆ ಅವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವಂತೆ ಮನವಿ ಮಾಡಿದರು. ಪೊಲೀಸ್ ನಿರೀಕ್ಷಕ ವೀರಭದ್ರಯ್ಯ ಹಿರೇಮಠ ಮಾತನಾಡಿ, ಸಮಾಜದಲ್ಲಿ ಯಾವುದೇ ರೀತಿಯ ಭೇದಭಾವ ಅಥವಾ ಅಸ್ಪೃಶ್ಯತೆ ಕಂಡುಬಂದಲ್ಲಿ ತಕ್ಷಣ ಠಾಣೆಗೆ ತಿಳಿಸಿ, ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಮುಖಂಡರು ಕೋರಿರುವ ನಿವೇಶನದ ವಿಷಯವಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉನ್ನತ ಹುದ್ದೆಗಳಿಗೆ ಏರುವಂತೆ ಪ್ರೇರೇಪಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ನಾವು ಯಾವುದೇ ಭೇದಭಾವವಿಲ್ಲದೆ ಕಾನೂನು ಪಾಲನೆ ಮಾಡುತ್ತಿದ್ದು, ಸಾರ್ವಜನಿಕರೂ ಸಹ ಕಾನೂನು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆಯ ಬಗ್ಗೆ ಎಚ್ಚರದಿಂದ ಇರಬೇಕು ಮತ್ತು ಮಕ್ಕಳ ನಡವಳಿಕೆಗಳ ಮೇಲೆ ಗಮನ ಹರಿಸಬೇಕು. ಯಾವುದೇ ತೊಂದರೆ ಎದುರಾದರೂ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು " ಎಂದು ತಿಳಿಸಿದರು.ಈ ಸಭೆಯಲ್ಲಿ ಶಿಗ್ಗಾಂವಿ ಪೊಲೀಸ್ ಠಾಣೆಯ ಪಿಎಸ್‌ಐ ಯಲ್ಲಪ್ಪ ಹಿರಗಣ್ಣನವರ, ಪ್ರಮುಖ ಮುಖಂಡರುಗಳಾದ ಅಶೋಕ ವಡ್ಡರ, ಹನಮಂತಪ್ಪ ಬಾರಂಗಿ, ಸುರೇಶ ಹರಿಜನ ಸೇರಿದಂತೆ ಸಮುದಾಯದ ನೂರಾರು ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.