ತಂದೆ-ತಾಯಿಗಳನ್ನು ದೇವರ ಸ್ವರೂಪ ಕಾಣಬೇಕು

| Published : Feb 05 2025, 12:35 AM IST

ಸಾರಾಂಶ

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಹೆತ್ತ ತಂದೆ-ತಾಯಿಗಳನ್ನು ದೇವರ ಸ್ವರೂಪ ಕಾಣಬೇಕು ಎಂದು ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಹಾಗೂ ಬೆಳಗಾವಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ ಅಧ್ಯಕ್ಷ ರಾಹುಲ್ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುಗಳಖೋಡ

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಹೆತ್ತ ತಂದೆ-ತಾಯಿಗಳನ್ನು ದೇವರ ಸ್ವರೂಪ ಕಾಣಬೇಕು ಎಂದು ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಹಾಗೂ ಬೆಳಗಾವಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ ಅಧ್ಯಕ್ಷ ರಾಹುಲ್ ಜಾರಕಿಹೊಳಿ ಹೇಳಿದರು.ಪಟ್ಟಣದ ಸಿದ್ದರಾಮೇಶ್ವರ ಕನ್ನಡ ಪ್ರೌಢಶಾಲೆ ಸಂಯುಕ್ತ ಪದವಿಪೂರ್ವ ಕಾಲೇಜಿನ ಸನ್ 2024 25ನೇ ಸಾಲಿನ 19ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಪ್ರತಿನಿಧಿಸುವ ಪ್ರತಿಭೆಗಳಿದ್ದು, ಅಂತಹ ವಿದ್ಯಾರ್ಥಿಗಳ ಪ್ರಗತಿಗನುಗುಣವಾಗಿ ಕಬಡ್ಡಿ , ವಾಲಿಬಾಲ್ ಹಾಗೂ ಕ್ರಿಕೆಟ್ ಅಂತಹ ಕ್ರೀಡೆಗಳಿಗೆ ಸೂಕ್ತ ತರಬೇತಿ ನೀಡಿ ಅಂತಾರಾಷ್ಟ್ರಮಟ್ಟದಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರಕಿಸಿ ಕೊಡುವ ಸಂಸ್ಥೆಗಳು ಆರ್ಥಿಕ ಸಂಕಷ್ಟದ ಜತೆಗೆ ಅನೇಕ ತೊಂದರೆಗಳನ್ನು ಅನುಭವಿಸುವಂತಹ ದಿನಗಳಲ್ಲಿ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯು ಹೆತ್ತ ತಂದೆ-ತಾಯಿಗಳಿಗೆ ಗುರುಗಳಿಗೆ ಪಾದಪೂಜೆ ಮಾಡಿಸುವ ಕಾರ್ಯ ಶ್ಲಾಘನೀಯವಾದದ್ದು, ಎಲ್ಲರೂ ಹೆತ್ತ ತಂದೆ-ತಾಯಿಗಳನ್ನು ಗೌರವಿಸಬೇಕು ಎಂದರು. ರಾಯಬಾಗ ಮಾಜಿ ಶಾಸಕ ಬಿ.ಸಿ.ಸರಿಕರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸುಶಿಕ್ಷಿತ ಸಮಾಜ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.ಆಚಲೇರಿ-ಜಿಡಗಾಮಠದ ಬಸವರಾಜೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಶೋಕ ಕೊಪ್ಪದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಸಿದ್ಧಾರೂಢ ಈಟಿ ಅಧ್ಯಕ್ಷತೆ ವಹಿಸಿದರು. ಕಬಡ್ಡಿ ಹಾಗೂ ಕ್ರೀಡಾಕೂಟ ಮತ್ತು ರಾಣಿ ಚನ್ನಮ್ಮ ಯೂನಿವರ್ಸಿಟಿಗೆ ರ್‍ಯಾಂಕ್‌ ವಿಜೇತರಿಗೆ ಸಿದ್ದರಾಮೇಶ್ವರ ಸ್ಟಾರ್‌ ಅವಾರ್ಡ್ ನೀಡಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಎಂ.ಬಿ.ಸಾಯನ್ನವರ, ಶಿಕ್ಷಕ ರಾಜು ಬಾಬಣ್ಣವರ, ವಿಜಯ ಕೊಪ್ಪದ, ಬಿ.ಐ.ಹುಣಸಿಕಟ್ಟಿ, ಮುಪ್ಪಯ್ಯ ಹಿರೇಮಠ, ಮಲ್ಲಪ್ಪ ದ್ಯಾಶಾಳ, ಜೈ ಜವಾನ್ ಜೈ ಕಿಸಾನ್ ಬ್ಯಾಂಕಿನ ಉಪಾಧ್ಯಕ್ಷ ಹಾಗೂ ಯುವ ಕಾಂಗ್ರೆಸ್ ಮುಖಂಡ ಆನಂದ ತುಳಜವ್ವಗೊಳ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಉಪಾಧ್ಯಕ್ಷ ಹೊನ್ನಪ್ಪ ಲಗಳೆ, ಮುತ್ತಪ್ಪ ಬಾಳೋಜಿ, ದೈಹಿಕ ಶಿಕ್ಷಣ ಉಪನ್ಯಾಸಕ ಬಿ.ಬಿ.ಬಂಡಿಗಣಿ, ಗುರು ಜಂಬಗಿ ಇತರರು ಇದ್ದರು.

ವಿ.ಎಂ.ಕರಡಿ ಸ್ವಾಗತಿಸಿದರು. ಎ.ಎಲ್.ಪೂಜಾರಿ, ಪರಶುರಾಮ ಕೆಳಗಡೆ ನಿರೂಪಿಸಿದರು. ಶಿವಾನಂದ ಹಂಚಿನಾಳ ವಂದಿಸಿದರು.