ಕನ್ನಡಪ್ರಭ ವಾರ್ತೆ ಹಲಗೂರು
ನಾಡಿನ ಜನರು, ರೈತರ ಒಳಿತಿಗಾಗಿ ಸಕಾಲಕ್ಕೆ ಮಳೆಯಾಗಿ ಸಮೃದ್ಧಿ ಜೀವನ ನಡೆಸಲಿ ಎಂದು ಪರ್ಜನ್ಯ ಹೋಮ ಭಕ್ತಿ ಪೂರ್ವಕವಾಗಿ ನಡೆಸಲಾಗಿದೆ ಎಂದು ಅಘೋರ ಭದ್ರಕಾಳಿ ವಿದ್ವಾನ್ ಪ್ರಸಾದ್ ತಿಳಿಸಿದರು.ವಿ.ಬಸಾಪುರ ಗ್ರಾಮದಲ್ಲಿ ನೂತನವಾಗಿ ಶ್ರೀಬಸವೇಶ್ವರಸ್ವಾಮಿ ದೇವಸ್ಥಾನದ ಬಸಪ್ಪನವರ ಮುದ್ರಾಧಾರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮೇ13ರ ಸಂಜೆ ಗಣಪತಿ ಪೂಜೆ, ಪುಣ್ಯಹಃ, ಪಂಚಗವ್ಯ, ಪ್ರೋಕ್ಷಣೆ ಹಾಗೂ ಗಣಪತಿ ಸಹಿತ ಪರಿವಾರ ದೇವತಾ ಹೋಮ, ಲಘು ಪೂರ್ಣಾಹುತಿ ಮತ್ತು ಮಹಾ ಮಂಗಳಾರತಿ ನಂತರ ನೆರದಿದ್ದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಸಲಾಯಿತು ಎಂದರು.
ಮೇ 14ರಂದು ಪ್ರಧಾನ ಕಳಸ ಸ್ಥಾಪನೆ, ನವಗ್ರಹ, ಮೃತ್ಯುಂಜಯ ಹೋಮ, ಗ್ರಾಮ ದೇವತಾ ಪೂಜೆ ಅಭಿಷೇಕ, ಗಣಪತಿ ಹಾಗೂ ಪರಿವಾರ ದೇವತಾ ಹೋಮ, ಶ್ರೀಬಸಪ್ಪನವರಿಗೆ ಮುದ್ರಾಧಾರಣೆ ಮಂತ್ರ ಧೀಕ್ಷೆ ಪ್ರಧಾನ ಹೋಮ, ಕಲಾ ಹೋಮ, ನೂತನ ಕಲ್ಯಾಣಿಯಿಂದ ಹೂ-ಹೊಂಬಾಳೆ ಸಮೇತ ಶ್ರೀಕಾರ್ಕಳಿ ಬಸಪ್ಪ, ಹಲಗೂರು ಶ್ರೀಅಘೋರ ಭದ್ರಕಾಳಿ ಬಸಪ್ಪ, ಶ್ರೀಬಸವೇಶ್ವರ ಬಸಪ್ಪ ವಿ.ಬಸಾಪುರ ದೇವರುಗಳ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.ಈ ವೇಳೆ ಅಪಾರ ಭಕ್ತಾದಿಗಳು ಪಾಲ್ಗೊಂಡು ವಿಶೇಷವಾಗಿ ಬಸಪ್ಪನವರಿಗೆ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ಪ್ರಾರ್ಥಿಸಿದ್ದಾರೆ. ಪೂಜಾ ಪುನಸ್ಕಾರಗಳು ನಡೆದ ನಂತರ ಪ್ರಸಾದ ವಿನಿಯೋಗ ನಡೆಸಿ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ವಿ.ಬಸಾಪುರ ಸೇರಿದಂತೆ ಎನ್.ಕೋಡಿಹಳ್ಳಿ, ಒದುಬಸಪ್ಪನದೊಡ್ಡಿ, ಮಾರಗೌಡನಹಳ್ಳಿ, ವಳಗೆರೆದೊಡ್ಡಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು ಎಂದರು.
ದೊಡ್ಡಮ್ಮತಾಯಿ ಅರ್ಚಕ ರಾಜು ಮಾತನಾಡಿ, ಬಸವಪ್ಪನನ್ನು ಗ್ರಾಮದ ಕೆಂಪೇಗೌಡರ ಮನೆತನದವರು ಹರಕೆ ಹೊತ್ತುಕೊಂಡು ಬಸವೇಶ್ವರ ದೇವಸ್ಥಾನಕ್ಕೆ ಬಸಪ್ಪನನ್ನು ಒಪ್ಪಿಸಿದ್ದಾರೆ. ನೂತನವಾಗಿ ಅರ್ಪಿಸಿರುವ ಬಸಪ್ಪನಿಗೆ ಮುದ್ರಾಧಾರಣೆ ಯಶಸ್ವಿಯಾಗಿ ಭಕ್ತಾದಿಗಳ ಸಮ್ಮುಖದಲ್ಲಿ ಅಘೋರ ಭದ್ರಕಾಳಿಯ ವಿದ್ವಾನ್ ಪ್ರಸಾದ್, ಚಂದ್ರಶೇಖರ್ ಆದ್ಯ ಮತ್ತುಸಹವರ್ತಿಗಳ ನೇತೃತ್ವದಲ್ಲಿ ನಡೆಸಲಾಗಿದೆ ಎಂದರು.
ಈ ವೇಳೆ ನಾಗಣ್ಣ, ನಾಗೇಂದ್ರ, ಬಿ.ಆನಂದ, ಚಂದ್ರಹಾಸ, ಕೆ.ನಂಜುಂಡೇಗೌಡ, ನಿಖಿಲ್, ದೇವರಾಜು, ರವೀಂದ್ರ, ಪ್ರಭು, ಸತೀಶ್ ಕುಮಾರ್, ಹನುಮಂತೇಗೌಡ, ನಾಗೇಂದ್ರ, ಕೆಂಪೇಗೌಡ ಸೇರಿದಂತೆ ಇತರರು ಪಾಲ್ಗೊಂಡಿದ್ದರು.