ಸಾರಾಂಶ
- ಸಮಾಜ ಸೇವೆ ಮಹತ್ವ ತಿಳಿಸಿ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ನಗರದ ಗುರುಕುಲ ವಸತಿಯುತ ಶಾಲೆ ಮಕ್ಕಳೊಂದಿಗೆ ಕೆಲ ಸಮಯ ಬೆರೆತು, ತಮ್ಮ ಲೋಕಸಭಾ ಸದಸ್ಯತ್ವದ ಅನುಭವ ಜೊತೆಗೆ ಶಿಕ್ಷಣದ ಮಹತ್ವ ತಿಳಿಸಿದರು. ಅಲ್ಲದೇ, ಸಮಾಜದ ಸೇವೆಯ ಅನುಭವವನ್ನು ನೀಡಿ ಸ್ಫೂರ್ತಿ ತುಂಬಿದರು.ನಗರದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ನಿವಾಸಕ್ಕೆ ಇತ್ತೀಚಿಗೆ ಗುರುಕುಲ ಶಾಲೆ ವಿದ್ಯಾರ್ಥಿಗಳು ಶಿಕ್ಷಕ ವೃಂದದವರೊಂದಿಗೆ ಭೇಟಿ ನೀಡಿ, ಡಾ.ಪ್ರಭಾ ಸಂಸದರಾಗಿ ಆಯ್ಕೆಯಾಗಿದ್ದಕ್ಕೆ ಶುಭ ಕೋರಿದರು.
ಡಾ.ಪ್ರಭಾ ಮಲ್ಲಿಕಾರ್ಜುನ ಅವರು, ವಿದ್ಯಾರ್ಥಿಗಳು ತಮ್ಮ ಆಸಕ್ತಿಗಳನ್ನು ಅನುಸರಿಸಿ, ಸಮಾಜಕ್ಕೆ ಹಿತಕರವಾಗಿ ಕೊಡುಗೆ ನೀಡುವ ಮಹತ್ವವನ್ನು ವಿವರಿಸಿದರು. ಮಕ್ಕಳ ಹಲವು ಪ್ರಶ್ನೆಗಳಿಗೆ ಸಮಾಧಾನಕರ ಉತ್ತರಗಳನ್ನು ನೀಡಿದರು. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮತ್ತು ಸಾಮಾಜಿಕ ಹೊಣೆಗಾರಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದರು.ಓದುತ್ತಿರುವ ತರಗತಿ ಬಗ್ಗೆ ಎಲ್ಲ ಮಕ್ಕಳನ್ನು ವಿಚಾರಿಸಿದರು. ಭವ್ಯ ಭವಿಷ್ಯದಲ್ಲಿ ಯಾವ ಸ್ಥಾನ ಇಚ್ಚಿಸುವಿರಾ ಎಂದು ಕೇಳುತ್ತಾ, ಶಿಕ್ಷಕ ವೃತ್ತಿಯೂ ಅಮೂಲ್ಯವಾಗಿದೆ. ಅಕ್ಷರ ಜ್ಞಾನ ನೀಡುವ ಕೆಲಸಕ್ಕೂ ಒತ್ತು ಕೊಡಬೇಕು. ಜನರ ಬಳಿಯೇ ಹೋಗಿ ಕಷ್ಟ, ನಷ್ಟಗಳ ವಿಚಾರಿಸಿ ಪರಿಹರಿಸುವುದೇ ನಿಜವಾದ ಸಮಾಜ ಸೇವೆ. ಅದುವೇ ಸಾಮಾಜಿಕ ನಾಯಕನ ಹೊಣೆಗಾರಿಕೆ. ಈ ರೀತಿ ನಿಮ್ಮ ಭವಿಷ್ಯದಲ್ಲೂ ಆಗಿ ಎಂದು ಸ್ಫೂರ್ತಿ ನೀಡಿದರು.
ಮಕ್ಕಳು ಸೆಲ್ಯೂಟ್ ಮೂಲಕ ಸಂಸದೆ ಡಾ.ಪ್ರಭಾ ಅವರಿಗೆ ಅವರ ಲೋಕಸಭಾ ಸ್ಥಾನ ಅಲಂಕರಿಸಿದ್ದಕ್ಕೆ ಹಾಗೂ ಸೇವೆಗೆ ಗೌರವ ಸೂಚಿಸಿದರು. ಇದಕ್ಕೆ ಪ್ರತಿಯಾಗಿ ಸಂಸದರೂ ಸೆಲ್ಯೂಟ್ ಮಾಡಿ ವಿದ್ಯಾರ್ಥಿಗಳಿಗೆ ಧನ್ಯವಾದ ತಿಳಿಸಿದರು. ಅಲ್ಲದೇ, ವಿದ್ಯಾರ್ಥಿಗಳು ನೆನಪಿನ ಕಾಣಿಕೆಯಾಗಿ ಪ್ರಭಾ ಮಲ್ಲಿಕಾರ್ಜುನ ಭಾವಚಿತ್ರವುಳ್ಳ ಫೋಟೋ ನೀಡಿದರು.ಈ ಸಂದರ್ಭ ಗುರುಕುಲ ವಸತಿಯುತ ಶಾಲೆ ಅಧ್ಯಕ್ಷ ಆರ್.ಅಬ್ದುಲ್, ಸಾನಿಯಾ ಜೆಹರ, ಶಿಕ್ಷಣ ಸಂಯೋಜಕರಾದ ಎಂ.ಎಚ್.ಶ್ವೇತ, ರೇಖಾ ಎಲ್.ಪಾಟೀಲ್, ಎಜಾಜ್ ಅಹ್ಮದ್, ಪಿ.ಸಂದೀಪ್, ಡಿ.ಎಸ್.ಶಾಂತ, ಎನ್.ಆರ್.ರೇಖಾ, ಸವಿತಾ ಕಾಟ್ವೆ, ಸಹ ಶಿಕ್ಷಕರಾದ ಬಸವರಾಜ್, ಓ.ಸುಭಾಷ್, ಸೈಯದ ಹಮೀಬಾ, ಸಾಯಿರಾ ಖಾನಮ್, ನೂರ್ ಜಹಾನ್, ಹಮೀದ ಬಾನು, ಗುರುಕುಲ ವಸತಿಯುತ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
- - - -6ಕೆಡಿವಿಜಿ34ಃ:ದಾವಣಗೆರೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ನಿವಾಸಕ್ಕೆ ಗುರುಕುಲ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ತೆರಳಿ ಸಂಸದರಿಗೆ ಅವರ ಭಾವಚಿತ್ರವನ್ನು ನೆನಪಿನ ಕಾಣಿಕೆಯಾಗಿ ನೀಡಿ ಅಭಿನಂದಿಸಿದರು.
-6ಕೆಡಿವಿಜಿ35ಃ: ಡಾ.ಪ್ರಭಾ ಮಲ್ಲಿಕಾರ್ಜುನ್ ಸಂಸದರಾಗಿದ್ದಕ್ಕೆ ಗುರುಕುಲ ಶಾಲೆ ಮಕ್ಕಳು ಸೆಲ್ಯುಟ್ ಮಾಡಿ ಗೌರವ ಸೂಚಿಸಿದ್ದಕ್ಕೆ ಪ್ರತಿಯಾಗಿ ಡಾ.ಪ್ರಭಾ ಮಲ್ಲಿಕಾರ್ಜುನ್ ತಾವೂ ಸೆಲ್ಯುಟ್ ಮಾಡಿ ಮಕ್ಕಳಿಗೆ ಧನ್ಯವಾದ ಸೂಚಿಸಿದರು.