ಸಾರಾಂಶ
ಬಳ್ಳಾರಿ: ದೃಷ್ಟಿದೋಷವುಳ್ಳವರ ಬಾಳಿಗೆ ಬೆಳಕಾಗುವ ನೇತ್ರದಾನ ಮಾಡುವ ಪುಣ್ಯದ ಕಾರ್ಯದಲ್ಲಿ ಭಾಗಿಯಾಗಿ ಬದುಕು ಸಾರ್ಥಕತೆ ಹೊಂದಬೇಕು ಎಂದು ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ.ಟಿ. ಗಂಗಾಧರ ಗೌಡ ಹೇಳಿದರು.
ಜಿಲ್ಲಾಡಳಿತ, ಜಿಪಂ, ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಿಮ್ಸ್ ನೇತ್ರ ಭಂಡಾರದ ಸಹಯೋಗದಲ್ಲಿ 39ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಅಂಗವಾಗಿ ವೈದ್ಯ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮರಣದ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣು ಮಾಡದೇ ದೃಷ್ಟಿದೋಷ ಉಳ್ಳವರಿಗೆ ದಾನ ಮಾಡುವ ಅದ್ಭುತ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು.ಆಕಸ್ಮಿಕ ಘಟನೆಗಳಲ್ಲಿ ಕಣ್ಣುಗಳನ್ನು ಕಳೆದುಕೊಂಡು ದೃಷ್ಟಿಹೀನರಾದಂತಹ ಜನತೆಗೆ ಇನ್ನೊಬ್ಬರ ಕಣ್ಣುಗಳನ್ನು ಕೊಡುವ ಮೂಲಕ ಅಂಧತ್ವ ನಿವಾರಣೆಗೆ ಅವಕಾಶವಿದ್ದು, ಬಿಮ್ಸ್ ನೇತ್ರ ಭಂಡಾರದಲ್ಲಿ ಕಣ್ಣುಗಳನ್ನು ದಾನವಾಗಿ ಪಡೆಯಲು ಹಾಗೂ ಅಗತ್ಯವುಳ್ಳವರಿಗೆ ಶಸ್ತ್ರ ಚಿಕಿತ್ಸೆ ಮೂಲಕ ಜೋಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ವ್ಯಕ್ತಿ ಮೃತಪಟ್ಟ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಬಿಮ್ಸ್ನ ನೇತ್ರ ಭಂಡಾರದ 9483414824 ಸಂಖ್ಯೆಗೆ ಕರೆ ಮಾಡಿ ತಿಳಿಸಿದಾಗ ವೈದ್ಯಕೀಯ ತಂಡವು ನೇತ್ರಗಳನ್ನು ಸುರಕ್ಷಿತವಾಗಿ ಪಡೆದುಕೊಳ್ಳುತ್ತಾರೆ. ಈ ಎಲ್ಲ ಕಾರ್ಯವು ವ್ಯಕ್ತಿ ಮೃತಪಟ್ಟ 6-8 ಗಂಟೆಯೊಳಗೆ ಮಾಡಬೇಕಾಗುತ್ತದೆ ಎಂದರು.ಕಳೆದ ಜನವರಿಯಿಂದ ಇಲ್ಲಿಯವರೆಗೆ 50 ಜನರು ನೇತ್ರದಾನ ಮಾಡಿದ್ದಾರೆ. ಅದರಲ್ಲಿ 45ಕ್ಕೂ ಹೆಚ್ಚು ಜನರಿಗೆ ನೇತ್ರವನ್ನು ಅಳವಡಿಸಿ ಕಣ್ಣನ್ನು ಜೀವಂತವಿರಿಸುವ ಮಹತ್ವದ ಕಾರ್ಯ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ಬಾಬು ಮಾತನಾಡಿ, ಒಬ್ಬ ವ್ಯಕ್ತಿ ದಾನ ಮಾಡಿದ ನೇತ್ರಗಳು ಇಬ್ಬರು ಕಾರ್ನಿಯಾ ಅಂಧರಿಗೆ ದೃಷ್ಟಿ ಮರಳಿ ನೀಡುತ್ತವೆ. ನೇತ್ರದಾನ ಪ್ರತಿಯೊಂದು ಕುಟುಂಬದ ಸಂಪ್ರದಾಯವಾಗಬೇಕು. ಪ್ರತಿಯೊಬ್ಬ ಅಂಧ ವ್ಯಕ್ತಿ ಸಹ ಜಗತ್ತನ್ನು ನೋಡುವ ಅಪೂರ್ವ ಕ್ಷಣಗಳಿಗೆ ಕೈ ಜೋಡಿಸೋಣ ಎಂದು ಹೇಳಿದರು.ಈಗಾಗಲೇ ಜಿಲ್ಲೆಯಲ್ಲಿ ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮದ ಮೂಲಕ ಜಿಲ್ಲಾಡಳಿತದ ಸಹಕಾರದೊಂದಿಗೆ ಎನ್ಎಂಡಿಸಿ, ಸಿಎಸ್ಆರ್ ಅನುದಾನದಡಿ ಬಿಮ್ಸ್ ಉಚಿತ ಕಣ್ಣಿನಪೊರೆ ಶಸ್ತ್ರ ಚಿಕಿತ್ಸೆ ದೃಷ್ಟಿದೋಷ ಉಳ್ಳವರಿಗೆ ಕನ್ನಡಕ ವಿತರಣೆ ಕೈಗೊಳ್ಳಲಾಗುತ್ತಿದ್ದು, ಪ್ರಸ್ತುತ ವರ್ಷ 2741 ಕನ್ನಡಕಗಳನ್ನು ವಿತರಿಸಲಾಗಿದೆ. 6011 ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಅವರು ಹೇಳಿದರು.
ಈಗಾಗಲೇ ಬಳ್ಳಾರಿ ಜಿಲ್ಲೆಯು ಅಂಗಾಂಗ ದಾನದಲ್ಲಿ 4722 ಜನರು ಅಂಗಾಂಗ ದಾನ ನೋಂದಣಿ ಮಾಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದರು.ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿ ಡಾ. ವೀರೇಂದ್ರ ಕುಮಾರ್, ನೇತ್ರ ತಜ್ಞ ಡಾ. ಮದನ್ ಜೋಶಿ, ವೈದ್ಯಕೀಯ ಅಧೀಕ್ಷಕ ಡಾ. ಚಿದಂಬರಮೂರ್ತಿ, ನೇತ್ರ ವಿಭಾಗದ ಮುಖ್ಯಸ್ಥ ಡಾ. ಯೋಗೇಶ್, ನೇತ್ರ ಭಂಡಾರದ ನಿರ್ದೇಶಕ ಡಾ. ಪರಸಪ್ಪ ಬಂದ್ರಕಳ್ಳಿ, ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಸುಮಾ, ನೇತ್ರ ವಿಭಾಗದ ಡಾ. ರಮೇಶ್ ನಡಮನಿ ಹಾಗೂ ವೈದ್ಯ ವಿದ್ಯಾರ್ಥಿಗಳು, ನರ್ಸಿಂಗ್ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.