ಅಂದು ವೈರಿ ರಾಷ್ಟ್ರ ಪಾಕಿಸ್ತಾನ ನಮ್ಮೆದುರು ಮಂಡಿಯೂರಿ ಸೋಲನ್ನು ಒಪ್ಪಿಕೊಂಡಿತು. ಅಂತಹ ದುರ್ಗಮ ಕಾರ್ಯಾಚರಣೆಯಲ್ಲಿ ನಾನೂ ಸ್ವತಃ ಪಾಲ್ಗೊಂಡಿದ್ದು ಅತ್ಯಂತ ಹೆಮ್ಮೆಯೆನಿಸುತ್ತದೆ.

ಕನ್ನಡಪ್ರಭ ವಾರ್ತೆ ತಿಪಟೂರು

ಸ್ವಾತಂತ್ರ‍್ಯಾನಂತರ ನಮ್ಮ ದೇಶ ಪರಕೀಯ ದಾಳಿಗಳನ್ನು ಸಮರ್ಥವಾಗಿ ಎದುರಿಸಿ ತಲೆ ಎತ್ತಿ ನಿಲ್ಲುವಂತೆ ಮಾಡುವಲ್ಲಿ ನಮ್ಮ ಸೈನ್ಯ ಸದಾ ಸನ್ನದ್ಧವಾಗಿದೆ. ಕಾರ್ಗಿಲ್ ಯುದ್ಧ ನಮಗೊಂದು ಸವಾಲಾಗಿತ್ತು, ನಮ್ಮ ಸೈನ್ಯದ ಶೌರ್ಯ, ಪರಾಕ್ರಮ, ಸಾಹಸ, ತಂತ್ರಗಾರಿಕೆಗಳ ಬಳಕೆಯಿಂದಾಗಿ ಆಪರೇಷನ್ ವಿಜಯ್ ೧೯೯೯ ಜುಲೈ ೨೬ ರಂದು ಯಶಸ್ವಿಯಾಯಿತು ಎಂದು ನಿವೃತ್ತ ಸುಬೇದಾರ್ ಬಿ.ಕೆ. ಮಂಜುನಾಥ್ ನುಡಿದರು.

ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಆಯೋಜಿಸಿದ ಮಾಸಿಕ ಸಭೆಯನ್ನು ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಅಂದು ವೈರಿ ರಾಷ್ಟ್ರ ಪಾಕಿಸ್ತಾನ ನಮ್ಮೆದುರು ಮಂಡಿಯೂರಿ ಸೋಲನ್ನು ಒಪ್ಪಿಕೊಂಡಿತು. ಅಂತಹ ದುರ್ಗಮ ಕಾರ್ಯಾಚರಣೆಯಲ್ಲಿ ನಾನೂ ಸ್ವತಃ ಪಾಲ್ಗೊಂಡಿದ್ದು ಅತ್ಯಂತ ಹೆಮ್ಮೆಯೆನಿಸುತ್ತದೆ ಎಂದು ತಿಳಿಸಿದರು.

ಸ್ವಾತಂತ್ರ್ಯುತ್ಸವದ ಹಿನ್ನೆಲೆಯಲ್ಲಿ ಸ್ಥಳೀಯ ಸ್ವಾತಂತ್ರ‍್ಯ ಹೋರಾಟಗಾರರು ವಿಷಯದ ಬಗ್ಗೆ ಉಪನ್ಯಾಸ ನೀಡಿದ ತುಮಕೂರು ಜಿಲ್ಲಾ ಸ್ವಾತಂತ್ರ‍್ಯ ಹೋರಾಟಗಾರರ ಮತ್ತು ಉತ್ತರಾಧಿಕಾರಿಗಳ ಸಂಘದ ಉಪಾಧ್ಯಕ್ಷರಾದ ಪ್ರೊ. ಕೆ. ಪುಟ್ಟರಂಗಪ್ಪನವರು, ಸ್ವಾತಂತ್ರ‍್ಯ ಹೋರಾಟದಲ್ಲಿ ಪಾಲ್ಗೊಂಡ ಸಾವಿರಾರು ಅನಾಮಿಕ ಹೋರಾಟಗಾರರು ಅಜ್ಞಾತವಾಗಿಯೇ ಉಳಿದಿರುವುದು ವಿಷಾದನೀಯ. ಅಂತಹವರಿಗೆ ನ್ಯಾಯ ದೊರಕಿಸಿಕೊಡಬೇಕಾದ ಅಗತ್ಯವಿದೆ. ಸ್ವಾತಂತ್ರ‍್ಯ ಚಳವಳಿಗೆ ತಿಪಟೂರು ತಾಲೂಕಿನ ಕೊಡುಗೆ ಅಪರಿಮಿತವಾಗಿದ್ದು, ಅರವತ್ತೈದಕ್ಕೂ ಹೆಚ್ಚು ಜನರು ಜೈಲು ಪಾಲಾಗಿ ಕಠಿಣ ಶಿಕ್ಷೆ ಅನುಭವಿಸಿದ್ದಾರೆ. ಡಿ.ಎಸ್. ಮಲ್ಲಪ್ಪ, ಕೆ.ಎನ್. ರಂಗಪ್ಪ. ಎಂ.ಆರ್. ರಂಗಪ್ಪ, ಲಕ್ಕ, ಜಯರಾಮಯ್ಯ, ಮೂಡಲಗಿರಿರಾವ್, ಹನುಮಂತಪ್ಪ ಮುಂತಾದ ಸಾವಿರಾರು ಜನ ಮನೆ ಮಠಗಳನ್ನು ತೊರೆದು ಹೋರಾಟದಲ್ಲಿ ಭಾಗವಹಿಸಿದ್ದಾರೆ. ಮಾರನಗೆರೆ ಸಿದ್ದಪ್ಪ ಪ್ರಾಣವನ್ನೇ ತೆತ್ತಿದ್ದು ಅಂತಹವರ ಹೋರಾಟ, ತ್ಯಾಗ, ಬಲಿದಾನಗಳನ್ನು ಸ್ಮರಿಸಿ, ಮುಂದಿನ ಪೀಳಿಗೆಗೂ ತಿಳಿಸಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎಮ್. ರಾಜಣ್ಣ, ಸಂಘದ ಸದಸ್ಯರ ಇತ್ತೀಚಿನ ಪ್ರವಾಸ ಯಾವುದೇ ರೀತಿಯ ತೊಂದರೆಗಳಿಲ್ಲದೆ ಯಶಸ್ವಿಯಾಗಿ ಪೂರೈಸಿದ್ದಕ್ಕಾಗಿ ಹರ್ಷ ವ್ಯಕ್ತಪಡಿಸಿದರು.

ಆರಂಭದಲ್ಲಿ ಶ್ರೀ ಬನಶಂಕರಿ ಕಲಾಸಂಘ ಕೋಟನಾಯಕನಹಳ್ಳಿ ಸದಸ್ಯರು, ಹನುಮಪ್ಪ ಮಾಸ್ಟರ್ ರವರ ನೇತೃತ್ವದಲ್ಲಿ ಅತ್ಯುತ್ತಮವಾಗಿ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಆರ್.ಗುರುಸ್ವಾಮಿಯವರು ಸ್ವಾಗತಿಸಿದರು. ಇತ್ತೀಚಿಗೆ ನಿಧನ ಹೊಂದಿದ ಸಿಆರ್‌ಪಿ ಹಾಗೂ ಪುಸ್ತಕ ಪ್ರೇಮಿ ಎಚ್. ಜೆ. ದಿವಾಕರ್ ರವರಿಗೆ ಮೌನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೆ.ಸಿ ಮಲ್ಲಿಕಾರ್ಜುನಯ್ಯ ಚಿಂತನ ಮಂಡಿಸಿದರು. ಮಹೇಶ್ ನೂತನ ಸದಸ್ಯರ ಪರಿಚಯ ಹಾಗೂ ಜನ್ಮದಿನದ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ, ಎಚ್.ಜಿ.ನರಸಿಂಹಮೂರ್ತಿ, ಎಸ್. ವೀರಭದ್ರಪ್ಪ, ಸಿ. ಕುಮಾರ್, ವಿ.ಎನ್.ಮಹದೇವಯ್ಯ, ಡಿ.ಎಸ್. ಮರುಳಪ್ಪನವರು, ಎಚ್.ಎಸ್. ಮಂಜಪ್ಪ ಮತ್ತಿತರರಿದ್ದರು.