ಕಾರ್ಯಕರ್ತರ ಜತೆ ಒಗ್ಗೂಡಿ ಪಕ್ಷ ಸಂಘಟನೆ: ವಿವೇಕ ಹೆಬ್ಬಾರ

| Published : May 30 2024, 12:57 AM IST

ಸಾರಾಂಶ

ಪಕ್ಷ ಒಂದು ಕುಟುಂಬವಿದ್ದಂತೆ. ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇರುತ್ತವೆ. ಅವುಗಳನ್ನು ಆಂತರಿಕವಾಗಿಯೇ ಬಗೆಹರಿಸಿಕೊಳ್ಳಬೇಕು.

ಮುಂಡಗೋಡ: ನನಗೆ ಸಿಕ್ಕಿರುವುದು ಅಧಿಕಾರವಲ್ಲ, ಬದಲಾಗಿ ಜವಾಬ್ದಾರಿಯಾಗಿದ್ದು, ಕಾರ್ಯಕರ್ತರೆಲ್ಲರನ್ನು ಒಗ್ಗೂಡಿಸಿಕೊಂಡು ಸಂಘಟನೆ ಮಾಡಿ ಪಕ್ಷವನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯುಲಾಗುವುದು ಎಂದು ಕೆಪಿಸಿಸಿ ನೂತನ ಸದಸ್ಯ ವಿವೇಕ ಹೆಬ್ಬಾರ ತಿಳಿಸಿದರು.

ಕೆಪಿಸಿಸಿ ಸದಸ್ಯರಾದ ಬಳಿಕ ಮೊದಲ ಬಾರಿಗೆ ಬುಧವಾರ ಮುಂಡಗೋಡಕ್ಕೆ ಆಗಮಿಸಿದ ವಿವೇಕ ಹೆಬ್ಬಾರ ಅವರು ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಹಿಂದೆ ಕಾರಣಾಂತರದಿಂದ ಪಕ್ಷವನ್ನು ಬದಲಿಸಿ ಪಶ್ಚಾತಾಪ ಪಟ್ಟುಕೊಂಡು ಮತ್ತೆ ನಮ್ಮ ಸ್ವಂತ ಮನೆಗೆ ಬಂದ ತೃಪ್ತಿ ತಮಗಿದೆ ಎಂದರು.

ಪಕ್ಷ ಒಂದು ಕುಟುಂಬವಿದ್ದಂತೆ. ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇರುತ್ತವೆ. ಅವುಗಳನ್ನು ಆಂತರಿಕವಾಗಿಯೇ ಬಗೆಹರಿಸಿಕೊಳ್ಳಬೇಕು. ಪಕ್ಷದಲ್ಲಿಯೇ ಇದ್ದುಕೊಂಡು ಪಕ್ಷಕ್ಕೆ ದ್ರೋಹ ಮಾಡುವುದು, ಒಬ್ಬರ ಮನೆಯಲ್ಲಿದ್ದುಕೊಂಡು ಇನ್ನೊಬ್ಬರೊಂದಿಗೆ ಸಂಸಾರ ಮಾಡುವುದನ್ನು ಯಾರೂ ಸಹಿಸುವುದಿಲ್ಲ ಎಂದರು.

ಮುಂಬರುವ ಜಿಪಂ ಹಾಗೂ ತಾಪಂ ಹಾಗೂ ಪಪಂ ಚುನಾವಣೆಗಳು ಕಾರ್ಯಕರ್ತರ ಚುನಾವಣೆಯಾಗಿದ್ದು, ಈ ಸಂದರ್ಭದಲ್ಲಿ ಪಕ್ಷಕ್ಕೆ ದ್ರೋಹ ಮಾಡಿದರೆ ಕಾರ್ಯಕರ್ತ ಸಾಯುತ್ತಾನೆ ಎಂಬ ಅರಿವು ಪ್ರತಿಯೊಬ್ಬರಲ್ಲಿ ಮೂಡಬೇಕಿದೆ. ಹಾಗಾಗಿ ಹಿರಿಯರ ಮಾರ್ಗದರ್ಶನ ಮತ್ತು ಯುವಕರ ಶಕ್ತಿಯನ್ನು ಉಪಯೋಗಿಸಿಕೊಂಡು ಪಕ್ಷವನ್ನು ಬಲಿಷ್ಠಗೊಳಿಸಬೇಕಿದ್ದು, ಮುಂದಿನ ಎಲ್ಲ ಚುನಾವಣೆಗಳನ್ನು ಗೆಲ್ಲುವ ಪಣ ತೊಡಬೇಕಿದ್ದು, ಪ್ರತಿ ಬೂತ್ ಮಟ್ಟದ ಕಾರ್ಯಕರ್ತರು ಜನರ ಸಮಸ್ಯೆಗೆ ಸ್ಪಂದಿಸಿ ಜನರ ವಿಶ್ವಾಸ ಗಳಿಸುವ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನದೇವ ಗುಡಿಯಾಳ, ಕೃಷ್ಣ ಹಿರೇಹಳ್ಳಿ, ರವಿಗೌಡ ಪಾಟೀಲ, ಎಚ್.ಎಂ. ನಾಯ್ಕ, ಫಣಿರಾಜ ಹದಳಗಿ, ಮುನಾಫ್ ಮಿರ್ಜಾನಕರ, ಗೋಪಾಲ ಪಾಟೀಲ, ಧರ್ಮರಾಜ ನಡಗೇರ. ರಜಾ ಪಠಾಣ, ರಪೀಕ್ ಇನಾಮದಾರ, ನಜೀರಹ್ಮದ ದರ್ಗಾವಾಲೆ ಮುಂತಾದವರು ಉಪಸ್ಥಿತರಿದ್ದರು.