ರಾಮನಗರ: ಮೈಸೂರು - ಬೆಂಗಳೂರು ಮಾರ್ಗವಾಗಿ ಸಂಚರಿಸುವ ಅಶೋಕಪುರಂ ಮೆಮು ಪ್ಯಾಸೆಂಜರ್ ರೈಲು ಒಂದೂವರೆ ತಾಸು ವಿಳಂಬವಾಗಿದ್ದರಿಂದ ಆಕ್ರೋಶಗೊಂಡ ಪ್ರಯಾಣಿಕರು ಬಿಡದಿ ರೈಲು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ಮೈಸೂರಿಗೆ ಹೊರಟಿದ್ದ ಮೆಮು ರೈಲು ಸಂಜೆ 5.20ರ ವೇಳೆಗೆ ಬಿಡದಿ ನಿಲ್ದಾಣ ತಲುಪಿತು. ನಂತರ ಒಂದೂವರೆ ತಾಸಾದರೂ ಅಲ್ಲಿಂದ ಕದಲಲಿಲ್ಲ. ಎಕ್ಸ್‌ಪ್ರೆಸ್ ರೈಲುಗಳು ಎಂದಿನಂತೆ ಸಂಚರಿಸುತ್ತಿದ್ದರೂ ಮೆಮು ರೈಲು ಮಾತ್ರ ಬಿಡದಿ ನಿಲ್ದಾಣದಲ್ಲಿಯೇ ನಿಂತಿತ್ತು. ಇದರಿಂದ ಕಾದು ಹೈರಾಣಾದ ಪ್ರಯಾಣಿಕರು ನಿಲ್ದಾಣದ ಅಧಿಕಾರಿಗಳನ್ನು ವಿಚಾರಿಸಿದರು.

ಆದರೆ, ಸ್ಟೇಷನ್ ಮಾಸ್ಟರ್ ಕೊಠಡಿ ಬಾಗಿಲು ಮುಚ್ಚಿತ್ತು. ಉಳಿದ ಸಿಬ್ಬಂದಿ ಸಹ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ಇದರಿಂದ ರೊಚ್ಚಿಗೆದ್ದ ಪ್ರಯಾಣಿಕರು ರೈಲು ಹಳಿಗಳ ಮೇಲೆ ನಿಂತು ಪ್ರತಿಭಟನೆ ಆರಂಭಿಸಿದರು. ಈ ವಿಷಯ

ತಿಳಿದ ಬಿಡದಿ ಪೊಲೀಸರು ಹಾಗೂ ರೈಲ್ವೆ ಪೊಲೀಸರು ಪ್ರತಿಭಟನಾನಿರತ ಪ್ರಯಾಣಿಕರ ಮನವೊಲಿಸಿ ರೈಲುಗಾಡಿ ಹೊರಡಲು ಅನುವು ಮಾಡಿಕೊಟ್ಟರು.

ಸಂಜೆ 6.50ರ ವೇಳೆಗೆ ಅಶೋಕಪುರಂ ಮೆಮು ರೈಲು ಬಿಡದಿ ನಿಲ್ದಾಣದಿಂದ ಪ್ರಯಾಣ ಮುಂದುವರೆಸಿತು.


ಪ್ರಯಾಣಿಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಮಯ ವ್ಯತ್ಯಯವಾಯಿತು.

1ಕೆಆರ್ ಎಂಎನ್ 8.ಜೆಪಿಜಿ

ಬಿಡದಿಯಲ್ಲಿ ಅಶೋಕಪುರಂ ಮೆಮು ರೈಲಿನ ಎದುರು ಪ್ರಯಾಣಿಕರು ಪ್ರತಿಭಟನೆ ನಡೆಸಿದರು.