ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು ಮಾಜಕ್ಕಾಗಿ ಹಾಗೂ ನಾಡುನುಡಿಗಾಗಿ ಶ್ರಮಿಸುವವರನ್ನು ಬೆನ್ನುತಟ್ಟಿ ಹುರುದುಂಬಿಸಬೇಕೆ ಹೊರತು ಅವರ ಬೆನ್ನುಹಿಂದೆ ಹಿಯಾಳಿಸುವುದನ್ನು ಬಿಡಬೇಕು. ಅಲ್ಲದೆ ಸಾರಸ್ವತ ಲೋಕದಲ್ಲಿ ಕನ್ನಡ ಉಳಿಸಿ ಬೆಳೆಸುವ ಕಾರ್ಯಮಾಡುವ ಸಾಹಿತಿಗಳಾಗಲಿ, ಕವಿಗಳಾಗಲಿ ಅವರನ್ನು ಗೌರವದಿಂದ ಕಾಣಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಸಮಾಜಕ್ಕಾಗಿ ಹಾಗೂ ನಾಡುನುಡಿಗಾಗಿ ಶ್ರಮಿಸುವವರನ್ನು ಬೆನ್ನುತಟ್ಟಿ ಹುರುದುಂಬಿಸಬೇಕೆ ಹೊರತು ಅವರ ಬೆನ್ನುಹಿಂದೆ ಹಿಯಾಳಿಸುವುದನ್ನು ಬಿಡಬೇಕು. ಅಲ್ಲದೆ ಸಾರಸ್ವತ ಲೋಕದಲ್ಲಿ ಕನ್ನಡ ಉಳಿಸಿ ಬೆಳೆಸುವ ಕಾರ್ಯಮಾಡುವ ಸಾಹಿತಿಗಳಾಗಲಿ, ಕವಿಗಳಾಗಲಿ ಅವರನ್ನು ಗೌರವದಿಂದ ಕಾಣಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ರವಿವಾರ ನಡೆದ ಚನ್ನಮ್ಮನ ಕಿತ್ತೂರು ತಾಲೂಕಿನ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದ ಕೆಲಸಕ್ಕೆ ಸದಾ ಕೈಜೊಡಿಸೋಣ, ಕನ್ನಡ ಉಳಿಸಿ-ಬೆಳೆಸೋಣ ಎಂದ ಅವರು, ಗಡಿ ಭಾಗಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ಹಮ್ಮಿಕೊಳ್ಳಬೇಕು. ಇದರಿಂದ ಕನ್ನಡ ಭಾಷಿಕರು ಸಂತಸ ವ್ಯಕ್ತಪಡಿಸುತ್ತಾರೆ. ಜೊತೆಗೆ ಕೇವಲ ಕನ್ನಡ ಉಳಿಸುವುದು ಒಂದೇ ಜವಾಬ್ದಾರಿ ಎಂದು ತಿಳಿಯದೇ ಕನ್ನಡ ಬೆಳೆಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಹೊರಬೇಕಿದೆ ಎಂದು ಹೇಳಿದರು.

ರಾಣಿ ಶುಗರ್ಸ್ ಅಧ್ಯಕ್ಷ, ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ನೆಲ, ಜಲ, ಭಾಷೆ ಎಂಬುದು ನಮ್ಮ ಹೆಮ್ಮೆ. ಈ ಹೆಮ್ಮೆಗೆ ಇಂತಹ ಸಮ್ಮೇಳನ ಅಗತ್ಯ, ಕನ್ನಡ ಭಾಷೆ ತನ್ನದೆಯಾದ ಇತಿಹಾಸ ಹೊಂದಿದೆ. ರಾಷ್ಟ್ರಕೂಟರ ಸಮಯದಲ್ಲಿ ಭಾಷೆ ಶ್ರೀಮಂತಗೊಂಡಿತು. ವಚನ ಸಾಹಿತ್ಯವೂ ಸಾಕಷ್ಟು ಪ್ರಸಿದ್ಧಿ ಹೊಂದಿದೆ. ಆಂಗ್ಲ ಭಾಷೆ ಅವಶ್ಯಕತೆಗಷ್ಟೆ ಇರಲಿ. ಕನ್ನಡವೇ ಮೊದಲನೇಯ ಆದ್ಯತೆಯಾಗಿರಲಿ ಎಂದು ಕರೆ ನೀಡಿದರು.ಸಮ್ಮೇಳನದ ಸರ್ವಾಧ್ಯಕ್ಷ ಕಾದರವಳ್ಳಿಯ ಸೀಮಿಮಠದ ಡಾ.ಪಾಲಾಕ್ಷ ಶಿವಯೋಗಿಗಳು ಮಾತನಾಡಿ, 12ನೇ ಶತಮಾನದಲ್ಲಿ ಶರಣರು ರಚಿಸಿದ ಸಾಹಿತ್ಯ ಯಾವುದೇ ಬೇಧ-ಭಾವ ಇಲ್ಲದೆ ಎಲ್ಲರನ್ನು ಒಂದಾಗಿಸಿತು. ಅಂದು ಹುಟ್ಟಿಕೊಂಡಿದ್ದ ಶರಣ ಸಾಹಿತ್ಯವನ್ನು ಅಂದಿನ ಕಾಲದಲ್ಲಿ ಒಪ್ಪಿಕೊಳ್ಳಲಿಲ್ಲ, ಈಗ ವಚನ ಸಾಹಿತ್ಯ ತನ್ನದೇ ಆದ ಇತಿಹಾಸ ಹೊಂದಿದೆ. ಕನ್ನಡ ಕಟ್ಟುವುದಕ್ಕಾಗಿ ಇಂದಿನ ಸರ್ವಾಧ್ಯಕ್ಷ ಸ್ಥಾನ ಒಪ್ಪಿಕೊಂಡಿದ್ದಾಗಿ ತಿಳಿಸಿದರು. ವೇದಿಕೆಯಲ್ಲಿ ಎಂ.ಎಂ.ಸಂಗಣ್ಣವರ ಬರೆದ ಕುಂಭಕರ್ಣ ಬೇಡಿದ ವರ, ಮಂಜುನಾಥ ಕಳಸಣ್ಣವರ ಬರೆದ ಕಿತ್ತೂರು ಸಂಸ್ಥಾನದ ರಾಣಿಯರು, ಗಜಾನನ ಸೊಗಲನ್ನವರ ಬರೆದ ಸೊಗಲ ಸೋಮೇಶ್ವರನ ವಚನಗಳು, ಸಿಆರ್‍ಪಿ ವಿನೋದ ಪಾಟೀಲ ಬರೆದ ಸ್ಕೂಲ್ ಬೆಲ್ ಮಕ್ಕಳ ಕಥಾ ಸಂಕಲನ, ಸುರೇಶ ಕರವಿನಕೊಪ್ಪ ಬರೆದ ರೈತರ ಬಗೆಗಿನ ಕೃತಿ ಬಿಡುಗಡೆಗೊಳಿಸಲಾಯಿತು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಸಂಭ್ರಮದ ಮೆರವಣಿಗೆ:ಕಲ್ಮೇಶ್ವರ ದೇವಸ್ಥಾನದ ಬಳಿ ಭುವನೇಶ್ವರಿದೇವಿ ಪೂಜೆಯೊಂದಿಗೆ ಪ್ರಾರಂಭಗೊಂಡ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಬೈಲಹೊಂಗಲ ರಸ್ತೆ ವರೆಗೆ ಸಾಗಿತು. ಪುಷ್ಪಾಲಂಕೃತ ಸಾರೋಟದಲ್ಲಿ ಅಲಂಕೃತಗೊಂಡಿದ್ದ ಸಮ್ಮೇಳನಾಧ್ಯಕ್ಷ ಡಾ.ಪಾಲಾಕ್ಷ ಶಿವಯೋಗಿಶ್ವರ, ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ, ತಾಲೂಕಾಧ್ಯಕ್ಷ ಎಸ್.ಬಿ.ದಳವಾಯಿ ಸಾಗಿದರು. ಎಲ್ಲೆಡೆ ಕನ್ನಡ ಭಾವುಟಗಳು ರಾರಾಜಿಸುತ್ತಿದ್ದವು. ಡೊಳ್ಳು, ಝಾಂಜ್ ಪಥಕ ಸೇರಿ ವಿವಿಧ ವಾಧ್ಯಮೇಳಗಳು ಮೊಳಗಿದವು. ವಿದ್ಯಾರ್ಥಿಗಳು ಕನ್ನಡ ಜೈಕಾರ ಕೂಗಿದರು. ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು. ಅಪಾರ ಸಂಖ್ಯೆಯ ಕನ್ನಡಾಭಿಮಾನಿಗಳು ಪಾಲ್ಗೊಂಡು ಕನ್ನಡಾಭಿಮಾನ ಮೆರೆದರು.

ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ ಆಶಯ ನುಡಿಗಳನ್ನಾಡಿದರು. ಕಸಾಪ ತಾಲೂಕಾಧ್ಯಕ್ಷ ಡಾ.ಎಸ್.ಬಿ.ದಳವಾಯಿ, ಬಿಇಒ ಸಿ.ವೈ.ತುಬಾಕದ, ಸಿಪಿಐ ಶಿವಾನಂದ ಗುಡಗನಟ್ಟಿ, ಪಪಂ ಅಧ್ಯಕ್ಷ ಪ್ರಕಾಶ ಕೊಡ್ಲಿ, ಮುಖ್ಯಾಧಿಕಾರಿ ರವಿಶಂಕರ ಮಾಸ್ತಿಹೊಳಿಮಠ, ಸಾಹಿತಿ ಎಂ.ಎಂ.ಸಂಗಣ್ಣವರ, ರಾಣಿ ಶುಗರ್ಸ್ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಎಂ.ಎಸ್.ಕಲ್ಮಠ, ವಿರೇಶ ಸಂಬಣ್ಣವರ, ಸಂಗನಗೌಡ ಪಾಟೀಲ, ಶಿವಪುತ್ರಪ್ಪ ಮರಡಿ, ಶೇಖರ ಹಲಸಗಿ, ಎಂ.ವೈ.ಮೆನಸಿಕಾಯಿ, ಡಾ.ಜಗದೀಶ ಹಾರುಗೊಪ್ಪ, ಶಿವಯೋಗಿಗೌಡ ಪಾಟೀಲ, ದಾನೇಶ ಸಾಣಿಕೊಪ್ಪ, ಪ್ರಕಾಶಗೌಡ ಪಾಟೀಲ, ಚಿನ್ನಪ್ಪ ಮುತ್ನಾಳ, ರುದ್ರಪ್ಪ ಕರವಿನಕೊಪ್ಪ, ಅಪ್ಪಯ್ಯ ಸೊಪ್ಪಿಮಠ, ಶಂಕರ ಕಿಲ್ಲೇದಾರ, ಅದೃಶ್ಯಪ್ಪ ಗದ್ದಿಹಳ್ಳಿ, ಸುರೇಶ ಮುತ್ನಾಳ, ದೇಮಪ್ಪ ಬರಸಗಿ, ಶ್ರೀಶೈಲ ಗಣಾಚಾರಿ, ಬಸಯ್ಯ ಮೈಸೂರಮಠ, ಮಹಾಂತೇಶ ಗಣಾಚಾರಿ ಸೇರಿದಂತೆ ಶಾಲಾ ಶಿಕ್ಷಕರು, ವಿವಿಧ ಗ್ರಾಮಸ್ಥರು, ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು. ಮುಂಜಾನೆ ವೇದಿಕೆ ಮುಂಭಾಗದಲ್ಲಿ ರಾಷ್ಟ್ರ, ಪರಿಷತ್ ಮತ್ತು ನಾಡ ಧ್ವಜಾರೋಹಣವನ್ನು ನೆರವೇರಿಸಲಾಯಿತು.