ಹಲಸು ಉತ್ಪನ್ನ ತಯಾರಿಯಲ್ಲಿ ತಾಳ್ಮೆ ಅಗತ್ಯ: ಕೊಡ್ಗಿ

| Published : Jun 09 2025, 02:34 AM IST

ಸಾರಾಂಶ

ನವತೇಜ ಪುತ್ತೂರು ಸಂಘಟನೆಯು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಆಯೋಜಿಸಿರುವ ಹಲಸು ಹಣ್ಣು ಮೇಳ’ವನ್ನು ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು.

ಪುತ್ತೂರು ಕಿಲ್ಲೆ ಮೈದಾನ: ಮೂರು ದಿನಗಳ ಹಲಸು ಮೇಳ ಉದ್ಘಾಟನೆಕನ್ನಡಪ್ರಭ ವಾರ್ತೆ ಪುತ್ತೂರು

ಹಲಸು ಉತ್ಪನ್ನಗಳನ್ನು ತಯಾರಿಸುವಲ್ಲಿ ಪ್ರಬುದ್ಧ ಚಿಂತನೆಯ ಜೊತೆಗೆ ತಾಳ್ಮೆಯ ಅಗತ್ಯವಿದೆ. ಹಲಸಿನ ಉತ್ಪನ್ನಗಳಿಗೆ ಬಹಳಷ್ಟು ಮೌಲ್ಯವಿದೆ ಎಂದು ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅಭಿಪ್ರಾಯಪಟ್ಟಿದ್ದಾರೆ. ನವತೇಜ ಪುತ್ತೂರು ಸಂಘಟನೆಯು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ‘ಹಲಸು ಹಣ್ಣು ಮೇಳ’ವನ್ನು ಶುಕ್ರವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ವಿಚಾರಗಳಿಗೆ ಸಂಬಂಧಿಸಿದಂತೆ ಕೃಷಿ ಅಕಾಡಮಿ ಸ್ಥಾಪನೆ ಮಾಡುವ ಚಿಂತನೆ ಉತ್ತಮ ವಿಚಾರವಾಗಿದೆ. ಆದರೆ ಈ ಅಕಾಡಮಿ ಸ್ಥಾಪನೆಯಾದಲ್ಲಿ ಅದಕ್ಕೆ ಅನುಭವಿಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕಾಗಿದೆ ಎಂದರು. ದಿಕ್ಸೂಚಿ ಮಾತುಗಳನ್ನಾಡಿದ ಅಡಿಕೆ ಪತ್ರಿಕೆ ಸಂಪಾದ ಶ್ರೀಪಡ್ರೆ, ಹಲಸು ಆಂದೋಲನವು ಸರ್ಕಾರ, ಇಲಾಖೆಯಿಂದ ಆರಂಭಗೊಂಡಿಲ್ಲ. ಬದಲಿಗೆ ಶ್ರೀಸಾಮಾನ್ಯರಿಂದ ಈ ಆಂದೋಲನ ಆರಂಭಗೊಂಡಿದೆ. ಹಲಸು ಉದ್ದಿಮೆ ಏಳಿಗೆಯಾಗಲು ಹೊಸ ಬಗೆಯ ಚಿಂತನೆಯ ಅಗತ್ಯವಿದೆ ಎಂದರು.ಹಲಸಿನ ವಿವಿಧ ಉತ್ಪನ್ನಗಳಾದ ಪಲ್ಪ್, ಹಪ್ಪಳ, ಚಿಪ್ಸ್, ಗುಜ್ಜೆ, ಬೀಜದ ಹುಡಿ, ಬೀಜದ ಹಲ್ವಗಳಿಗೆ ಬಹಳಷ್ಟು ಬೇಡಿಕೆಗಳಿವೆ. ದ.ಕ.ಜಿಲ್ಲೆಯಲ್ಲಿ ಹಲಸಿನಿಂದ ಒತ್ತು ಹಪ್ಪಳ ತಯಾರಿಸಿದರೆ ಉತ್ತರ ಕನ್ನಡದಲ್ಲಿ ಅಚ್ಚು ಹಪ್ಪಳ ತಯಾರಿಸುತ್ತಾರೆ. ಅಚ್ಚು ಹಪ್ಪಳ ತಯಾರಿಗೆ ಯಂತ್ರಗಳನ್ನು ತಯಾರಿಸುವ ಬಗ್ಗೆ ಸಿದ್ದತೆ ನಡೆಸಲಾಗುತ್ತಿದೆ ಎಂದರು. ಶ್ಯಾಂ ಜ್ಯುವೆಲ್ಸ್ ಗ್ರೂಪ್‌ನ ಸಿಎಂಡಿ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಹಲಸು ಉತ್ಪನ್ನ ಮಾರುಕಟ್ಟೆಯ ಬಗ್ಗೆ ಹೆಚ್ಚಿನ ಚಿಂತನೆಯ ಅಗತ್ಯವಿದೆ. ಕೃಷಿ ಕಲಿಕೆ ಉದ್ದೇಶಕ್ಕಾಗಿ ಕೃಷಿ ಅಕಾಡಮಿ ಸ್ಥಾಪನೆ ಮಾಡಿ. ನಿರಂತರ ಕಲಿಕೆಯ ದೃಷ್ಟಿಯಲ್ಲಿ ಕೃಷಿ ಪಠ್ಯ ಕ್ರಮ ತಯಾರಿಸಬೇಕು ಎಂದು ಆಶಿಸಿದರು. ಶ್ಯಾಮ್ ಸುಂದರ ಭಟ್ ಅವರು ಉತ್ಪಾದಿಸಿದ ಹಲಸಿನ ಬೀಜದಿಂದ ತಯಾರಿಸಿದ ರಸಂ ಹುಡಿ, ಸಾಂಬಾರ್ ಹುಡಿ, ಚಟ್ನಿ ಹುಡಿ ಮತ್ತು ಪಾಯಸ ಹುಡಿಗಳನ್ನು ಬಿಡುಗಡೆಗೊಳಿಸಲಾಯಿತು. ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಕುಸುಮಾಧರ್, ಪುತ್ತೂರು ಜೆಕಾಮ್ ಅಧ್ಯಕ್ಷ ಪಶುಪತಿ ಶರ್ಮ ಇದ್ದರು. ನವತೇಜ ಅಧ್ಯಕ್ಷ ಅನಂತಪ್ರಸಾದ್ ನೈತಡ್ಕ ಸ್ವಾಗತಿಸಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ನಿರೂಪಿಸಿದರು. ಮಳಿಗೆ ಉದ್ಘಾಟನೆ:ಹಲಸು ಮೇಳದ ಮಳಿಗೆಗಳನ್ನು ಶುಕ್ರವಾರ ಪೂರ್ವಾಹ್ನ ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಉದ್ಘಾಟಿಸಿದರು. ಕ್ಯಾಂಪ್ಕೋ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ, ಕೃಷಿಕ ಮಹದೇವ ಶಾಸ್ತ್ರಿ ಮಣಿಲಾ, ನವತೇಜದ ಅಧ್ಯಕ್ಷ ಅನಂತಪ್ರಸಾದ್ ನೈತಡ್ಕ, ಕಾರ್ಯದರ್ಶಿ ಸುಹಾಸ್ ಮರಿಕೆ, ನವನೀತ ಸಂಸ್ಥೆಯ ವೇಣುಗೋಪಾಲ್ ಶಿಬರ ಮತ್ತಿತರರು ಇದ್ದರು.