ಸಾರಾಂಶ
ಜಿಲ್ಲಾ ಆಯುಷ್ ಆಸ್ಪತ್ರೆ ಆವರಣದಲ್ಲಿ ಸೋಮವಾರ ರಾಷ್ಟ್ರೀಯ ವೈದ್ಯರ ದಿನಾಚರಣೆ ಹಾಗೂ ಪತ್ರಕರ್ತರಿಗೆ ವಿಶೇಷ ಪ್ರಕೃತಿ ಚಿಕಿತ್ಸಾ ಶಿಬಿರ ನೆರವೇರಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಪ್ರತಿಯೊಬ್ಬ ರೋಗಿಯಲ್ಲಿಯೂ ಸಂತೃಪ್ತಿ ಮೂಡಿಸಿ ಆತನ ಬಾಳನ್ನು ನೆಮ್ಮದಿಗೊಳಿಸುವುದೇ ವೈದ್ಯರ ದೊಡ್ಡ ಆಸ್ತಿ ಎಂದು ವೆನ್ಲಾಕ್ ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ.ಶಿವಪ್ರಕಾಶ್ ಹೇಳಿದ್ದಾರೆ.ಜಿಲ್ಲಾ ಆಯುಷ್ ಆಸ್ಪತ್ರೆ ಆವರಣದಲ್ಲಿ ಸೋಮವಾರ ರಾಷ್ಟ್ರೀಯ ವೈದ್ಯರ ದಿನಾಚರಣೆ ಹಾಗೂ ಪತ್ರಕರ್ತರಿಗೆ ವಿಶೇಷ ಪ್ರಕೃತಿ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ರೋಗಿಯ ಬೇಡಿಕೆ ಮತ್ತು ವರ್ತನೆಗಳು ಯಾವ ರೀತಿ ಇದ್ದರೂ ಅದನ್ನು ನಿಭಾಯಿಸಿ ಉತ್ತಮ ಚಿಕಿತ್ಸೆ ನೀಡುವುದು ವೈದ್ಯರ ಕರ್ತವ್ಯ. ಆರೋಗ್ಯ ಎಂಬ ಸಂಪತ್ತನ್ನು ಕಾಪಾಡುವಲ್ಲಿ ವೈದ್ಯ ಲೋಕವು ಜಗತ್ತಿನಲ್ಲಿ ಅವಿರತ ಪರಿಶ್ರಮಪಡುತ್ತಿದೆ ಎಂದು ಅವರು ತಿಳಿಸಿದರು.
ಲೇಡಿಗೋಶನ್ ಅಧೀಕ್ಷಕ ಡಾ.ದುರ್ಗಾ ಪ್ರಸಾದ್ ಮಾತನಾಡಿ, ಆರೋಗ್ಯ ವ್ಯವಸ್ಥೆಯಲ್ಲಿ ವೈದ್ಯರು ಪ್ರಮುಖ ಆಧಾರ ಸ್ತಂಭವಾಗಿದ್ದು ಅವರ ನಿಸ್ವಾರ್ಥ, ಅನುಭವಿ ಹಾಗೂ ಮಾನವೀಯ ಸೇವೆಗಳು ಸಮಾಜಕ್ಕೆ ಸದಾ ಮಾದರಿ ಎಂದು ತಿಳಿಸಿದರು.ಜಿಲ್ಲಾ ಆಯುಷ್ ಅಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್ ಮಾತನಾಡಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ನಿವೃತ್ತ ಆಯುಷ್ ಅಧಿಕಾರಿ ಡಾ. ದೇವದಾಸ್, ಡಾ. ಪ್ರದೀಪ್ ಕುಮಾರ್, ಜಿಲ್ಲಾ ವಾರ್ತಾಧಿಕಾರಿ ಬಿಎ ಖಾದರ್ ಶಾ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ರೈ, ಆಯುಷ್ ಇಲಾಖೆ ಅಧಿಕಾರಿಗಳಾದ ಡಾ. ಮುರಳೀಧರ್, ಡಾ. ಝಾಹಿದ್ ಮತ್ತಿತರರು ಇದ್ದರು.